ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ: ಯುವತಿಯೊ ದಿಗೆ ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದ ಬೆಂಗಳೂರಿನ ಯುವಕನೊಬ್ಬ ಸೆಲ್ಫಿ ತೆಗೆಯುವ ಭರದಲ್ಲಿ ಸಮುದ್ರಕ್ಕೆ ಬಿದ್ದ ಘಟನೆ ಶನಿವಾರ ನಡೆದಿದೆ. ಅಲೆಗಳ ರಭಸಕ್ಕೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಯುವಕನನ್ನು ಸ್ಥಳದಲ್ಲಿದ್ದ ಮೀನುಗಾರರು ಸಮಯಪ್ರಜ್ಞೆಯಿಂದ ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.
ಶನಿವಾರ ಯುವಕ ಹಾಗೂ ಯುವತಿ ಗೋಕರ್ಣಕ್ಕೆ ಆಗಮಿಸಿದ್ದರು. ಬಳಿಕ ಇಬ್ಬರೂ ಕಡಲತೀರಕ್ಕೆ ತೆರಳಿ ಕೆಲಕಾಲ ವಿವಿಧ ಭಂಗಿಗಳಲ್ಲಿ ಫೋಟೋಗಳನ್ನು ತೆಗೆದುಕೊಂಡಿದ್ದರು. ಫೋಟೋ ಸೆಷನ್ ಬಳಿಕ ಸಮುದ್ರದಂಚಿನಲ್ಲಿದ್ದ ಬಂಡೆಯೊಂದರ ಮೇಲೆ ಇಬ್ಬರೂ ತೆರಳಿದ್ದಾರೆ.
ಬಂಡೆಯ ಮೇಲೆ ನಿಂತು ಇಬ್ಬರೂ ಸೇರಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬಲವಾದ ಅಲೆಯೊಂದು ಅಪ್ಪಳಿಸಿದೆ. ಅಲೆಯ ರಭಸಕ್ಕೆ ಯುವಕನ ಕಾಲು ಜಾರಿ ಸಮುದ್ರದೊಳಕ್ಕೆ ಬಿದ್ದಿದ್ದಾನೆ. ಕೈಯಲ್ಲಿ ಮೊಬೈಲ್ ಹಿಡಿದಿದ್ದ ಸ್ಥಿತಿಯಲ್ಲೇ ಆತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ಯುವಕ ಸಮುದ್ರದಲ್ಲಿ ದೂರಕ್ಕೆ ಸಾಗುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಕೂಡಲೇ ನೆರವಿಗೆ ಧಾವಿಸಿದ್ದಾರೆ.
ಯಾವುದೇ ವಿಳಂಬ ಮಾಡದೆ ಸಮುದ್ರಕ್ಕೆ ಹಾರಿದ ಅವರು ಈಜಿಕೊಂಡು ಯುವಕನ ಬಳಿಗೆ ತೆರಳಿ ಆತನನ್ನು ಹಿಡಿದು ದಡಕ್ಕೆ ಕರೆತಂದಿದ್ದಾರೆ.ಈ ವೇಳೆ ಯುವಕ ತೀವ್ರವಾಗಿ ಅಸ್ವಸ್ಥಗೊಂಡಿದ್ದ. ಆತ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಮೀನುಗಾರರು ಆತನನ್ನು ಯುವತಿಯ ಬಳಿಗೆ ಕರೆತಂದು ಒಪ್ಪಿಸಿದ್ದಾರೆ. ಯುವತಿ ಕೂಡ ಆತಂಕದಿಂದ ಕೈಮುಗಿದು ನಿಂತಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪ್ರಾಥಮಿಕ ಚಿಕಿತ್ಸೆ ಬಳಿಕ ಮಣಿಪಾಲ್ಗೆ ರವಾನೆ
ದಡಕ್ಕೆ ಕರೆತಂದ ಬಳಿಕ ಸ್ಥಳದಲ್ಲಿದ್ದವರೇ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದಾರೆ. ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆತನಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.ಯುವಕನ ಆರೋಗ್ಯ ಸ್ಥಿತಿಯನ್ನು ಗಮನಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

