ಸುದ್ದಿಬಿಂದು ಬ್ಯೂರೋ ವರದಿ
ಸವದತ್ತಿ: ಮಣ್ಣಿನಲ್ಲಿ ಹೂತುಹೋಗಿದ್ದ ಕುಡಿಕೆಯೊಂದರಲ್ಲಿ ಅಪರೂಪದ 14 ಚಿನ್ನದ ನಾಣ್ಯಗಳು ಪತ್ತೆಯಾಗಿದ್ದು, ಅವುಗಳನ್ನು ಯಾವುದೇ ಆಸೆ-ಆಮಿಷಕ್ಕೆ ಒಳಗಾಗದೆ ತಾಲೂಕು ಆಡಳಿತಕ್ಕೆ ಒಪ್ಪಿಸುವ ಮೂಲಕ ಕೂಲಿ ಕಾರ್ಮಿಕರು ಪ್ರಾಮಾಣಿಕತೆ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ನಡೆದಿದೆ.

ಇಂಚಲ ಗ್ರಾಮದ ಬಿಸಿಎಂ ಹಾಸ್ಟೆಲ್ ಸಮೀಪ ವಿಬಿಜಿ ರಾಮ್ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಮಣ್ಣನ್ನು ತೆರವುಗೊಳಿಸುತ್ತಿದ್ದಾಗ ಮಣ್ಣಿನಲ್ಲಿ ಹೂತುಹೋಗಿದ್ದ ಕುಡಿಕೆಯೊಂದು ಪತ್ತೆಯಾಗಿದೆ. ಕುತೂಹಲದಿಂದ ಕುಡಿಕೆಯನ್ನು ತೆರೆದು ನೋಡಿದಾಗ ಅದರೊಳಗೆ ಹೊಳೆಯುತ್ತಿದ್ದ ಚಿನ್ನದ ನಾಣ್ಯಗಳು ಕಂಡುಬಂದಿವೆ.

ಕುಡಿಕೆಯಲ್ಲಿದ್ದ ಒಟ್ಟು 14 ಚಿನ್ನದ ನಾಣ್ಯಗಳು 54.8 ಗ್ರಾಂ ತೂಕ ಹೊಂದಿದ್ದು, ಇವುಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು ₹8.27 ಲಕ್ಷ ಎಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಮೊತ್ತದ ಮೌಲ್ಯದ ಚಿನ್ನ ಪತ್ತೆಯಾದರೂ ಕಾರ್ಮಿಕರು ಅದನ್ನು ತಮ್ಮಲ್ಲೇ ಇಟ್ಟುಕೊಳ್ಳದೆ ಕೂಡಲೇ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಪಿಡಿಒ ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಕೂಲಿ ಕಾರ್ಮಿಕರು ಅಧಿಕಾರಿಗಳ ಸಮ್ಮುಖದಲ್ಲಿ ನಾಣ್ಯಗಳನ್ನು ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ಹಸ್ತಾಂತರಿಸಿದರು. ತಹಶೀಲ್ದಾರ್ ಅವರು ಪತ್ತೆಯಾದ ಎಲ್ಲ 14 ಚಿನ್ನದ ನಾಣ್ಯಗಳನ್ನು ನಿಯಮಾನುಸಾರ ಸರ್ಕಾರಿ ಖಜಾನೆಗೆ ಸಲ್ಲಿಸಿದ್ದಾರೆ.

ಆನೆಯ ಚಿತ್ರ; ಐತಿಹಾಸಿಕ ಕುತೂಹಲ
ಪತ್ತೆಯಾಗಿರುವ ಚಿನ್ನದ ನಾಣ್ಯಗಳ ಮೇಲೆ ಆನೆಯ ಚಿತ್ರ ಸ್ಪಷ್ಟವಾಗಿ ಕೆತ್ತಲ್ಪಟ್ಟಿರುವುದು ವಿಶೇಷ ಗಮನ ಸೆಳೆದಿದೆ. ಇತಿಹಾಸದ ಪ್ರಕಾರ ತಲಕಾಡಿನ ಗಂಗರ ರಾಜಲಾಂಛನ ಆನೆಯಾಗಿತ್ತು. ಹೀಗಾಗಿ ಪತ್ತೆಯಾಗಿರುವ ನಾಣ್ಯಗಳು ಕ್ರಿ.ಶ. 10ರಿಂದ 15ನೇ ಶತಮಾನದ ಅವಧಿಗೆ ಸೇರಿದ ಪ್ರಾಚೀನ ನಾಣ್ಯಗಳಾಗಿರಬಹುದೇ ಎಂಬ ಕುತೂಹಲ ಮೂಡಿದೆ.

ನಾಣ್ಯಗಳ ನಿಖರ ಕಾಲಘಟ್ಟ, ಮೂಲ ಹಾಗೂ ಐತಿಹಾಸಿಕ ಮಹತ್ವವನ್ನು ಸಂಬಂಧಪಟ್ಟ ತಜ್ಞರು ಹಾಗೂ ಪುರಾತತ್ವ ಇಲಾಖೆಯ ಪರಿಶೀಲನೆಯ ಬಳಿಕವೇ ಖಚಿತಪಡಿಸಬೇಕಿದೆ.
ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಜೊತೆಗೆ ಅಮೂಲ್ಯ ಐತಿಹಾಸಿಕ ಸಂಪತ್ತು ಕೈಗೆ ಸಿಕ್ಕರೂ ಅದನ್ನು ಸರ್ಕಾರಕ್ಕೆ ಪ್ರಾಮಾಣಿಕವಾಗಿ ಒಪ್ಪಿಸಿದ ಕೂಲಿ ಕಾರ್ಮಿಕರ ನಡೆಗೆ ಸವದತ್ತಿ ತಾಲೂಕು ಆಡಳಿತ ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಸಿಕ್ಕಿದ್ದು ನಮ್ಮದು’ ಎನ್ನದೆ ‘ಸರ್ಕಾರದ ಆಸ್ತಿ’ ಎಂದು ಒಪ್ಪಿಸಿದ ಕಾರ್ಮಿಕರ ಪ್ರಾಮಾಣಿಕತೆ ಇದೀಗ ಇಂಚಲ ಗ್ರಾಮದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ