ಸುದ್ದಿಬಿಂದು ಬ್ಯೂರೋ
ಶಿರಸಿ : ಉತ್ತರಕನ್ನಡ ಜಿಲ್ಲೆಯ ಶಿರಸಿಯ ಗಣೇಶ ನಗರದ ಅಂಗನವಾಡಿ ಮಕ್ಕಳಿಗಾಗಿ ಗೌರಿ ನಾಯ್ಕ ಅವರು ಬಾವಿ ತೋಡಿದ್ದು, ಇದೀಗ ಪ್ರಾಮಾಣಿಕವಾಗಿ ಬಾವಿ ತೋಡುತ್ತಿರುವ ಶಿರಸಿಯ ಗೌರಿ ನಾಯ್ಕಗೆ ಸರ್ಕಾರಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ.

ಶಿರಸಿ ಗಣೇಶನರದ 6ನಂಬರ್ ಅಂಗನವಾಡಿಯಲ್ಲಿ ಗೌರಿ ನಾಯ್ಕ ಅವರು ಈಗಾಗಲೇ ಹತ್ತ ಅಡಿ ಆಳದ ಬಾವಿಯನ್ನ ತೋಡಿದ್ದಾರೆ.ಆದರೆ ಸರಕಾರದ ಮಾಡಬೇಕಾದ ಕೆಲಸವನ್ನ ಓರ್ವ ಮಹಿಳೆ ಮಾಡಿದ್ದಾಳ‌ ಎನ್ನುವ ಕಾರಣಕ್ಕೆ ಮುಜುಗರಕ್ಕೆ ಒಳಗಾದ ಅಧಿಕಾರಿಗಳು ಗೌರಿ ನಾಯ್ಕ‌ ಅವರು ತೋಡಿದ ಬಾವಿಯನ್ನೆ ಮುಚ್ಚುವಂತೆ ಕಳೆದ ಎರಡು ದಿನಗಳಿಂದ ಗೌರಿ ನಾಯ್ಕ ಅವರಿಗೆ ದೂರವಾಣಿ ಕರೆ ಮಾಡಿ ಬಾವಿಯನ್ನ ಮುಚ್ಚಿಸುವಂತೆ ಹಿರಿಯ ಅಧಿಕಾರಿಗಳು ಅಂಗನವಾಡಿ ಸಿಬ್ಬಂದಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.

ತೋಡಿರುವ ಬಾವಿಯನ್ನ ಯಾವ ಕಾರಣಕ್ಕೆ ಮುಚ್ಚಬೇಕು ಎನ್ನುವ ಬಗ್ಗೆ ಕಾರಣ ಕೇಳು ಗೌರಿ ನಾಯ್ಕ ಅವರು ಶಿರಸಿಯ ಸಿಡಿಪಿಓ ವೀಣಾ ಸಿರ್ಸಿಕರ್ ಅವರಿಗೆ ದೂರವಾಣಿ‌ ಕರೆ ಮಾಡಿದರೆ ಅವರ ಕರೆಯನ್ನ ಸ್ವೀಕರಿಸುತ್ತಿಲ್ಲ. ಅಂಗನಾವಾಡಿ ಮಕ್ಕಳಿಗೆ ಕುಡಿಯಲು ನೀರಿಲ್ಲ ಎಂಬುದನ್ನ ತಿಳಿದ ಗೌರಿ ನಾಯ್ಕ ಅವರು ಕುಡಿಯುವ ನೀರು ಪೂರೈಕೆಗೆ ಏಕಾಂಗಿಯಾಗಿ ಬಾವಿ ತೋಡುತ್ತಿದ್ದಾರೆ. ಬಾವಿ ತೋಡಲು ಬಾಲ ವಿಕಾಸ ಸಮಿತಿ ಸಭೆಯಲ್ಲಿ ಸದಸ್ಯರು ಠರಾವು ಮಾಡಿ ಒಪ್ಪಿಗೆ ಕೊಟ್ಟರೂ ಅಧಿಕಾರಿಗಳು ಮಾತ್ರ ಬಾವಿ ಮುಚ್ಚುವಂತೆ ಒತ್ತಡ ಹಾಕುತ್ತಿದ್ದಾರೆ.

ಇನ್ನೂ ಎರಡು ದಿನದಲ್ಲಿ ಬಾವಿ ಮುಚ್ಚಿಸದಿದ್ದರೆ ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಸಿಡಿಪಿಓ ವೀಣಾ ಸಿರ್ಸಿಕರ ಹಾಗೂ ಅನಿತಾ.ಕೆ ಬೆದರಿಕೆ ಹಾಕಿದ್ದಾರೆನ್ನಲಾಗಿದೆ.ಕುಡಿಯುವ ನೀರಿನ ವ್ಯವಸ್ಥೆ ಮಾಡ ಬೇಕಾಗಿದ್ದ ಹಿರಿಯ ಅಧಿಕಾರಿಗಳು ಅಂಗನವಾಡಿ ಮಕ್ಕಳಿಗೆ ನೀರಿನ ವ್ಯವಸ್ಥೆ ಮಾಡಿಕೊಡುವ ಬದಲು ಬಾವಿ ತೋಡಿರುವ ಮಹಿಳೆ ಗೌರಿ ನಾಯ್ಕ ಅವರಿಗೆ ಬೆದರಿಕೆ ಹಾಕುತ್ತಿರುವ ಬಗ್ಗ ಸಾರ್ವಜನಿಕರು ಆಕ್ರೋಶ ಹಾರಹಾಕಿದ್ದು, ಬಾವಿ ತೋಡಿರುವ ಗೌರಿ ನಾಯ್ಕ ಅವರಿಗೆ ಕಿರುಕುಳ‌ ನೀಡುತ್ತಿರುವ ಅಧಿಕಾರಿಗಳ ಮೇಲೆ‌ ತಕ್ಷಣ ಕಾನೂನು ಕ್ರಮ‌ ಜರುಗಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.