ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ಕೋಲಾರ ಜಿಲ್ಲೆಯ ಮುಳುಬಾಗಿಲ ಮುರಾರ್ಜಿ ದೇಸಾಯಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಬಳಿಕ ರಾಜ್ಯಾದ್ಯಂತ ಶೈಕ್ಷಣಿಕ ಪ್ರವಾಸ ರದ್ದು ಮಾಡಲಾಗಿದೆ ಎನ್ನುವ ಬಗ್ಗೆ ವದಂತಿ ಹರಡಿದ್ದು,ಇದಕ್ಕೆ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡುವ ಮೂಲಕ ವದಂತಿಗೆ ತೆರೆ ಎಳೆದಿದೆ.
2024-25ನೇ ಸಾಲಿನಲ್ಲಿ ಪ್ರಸ್ತುತ ಹಮ್ಮಿಕೊಳ್ಳಲಾಗಿರುವ ಶೈಕ್ಷಣಿಕ ಪ್ರವಾಸ ಮಾಡದಂತೆ ಹಾಗೂ ಹಮ್ಮಿಕೊಂಡಿದ್ದಲ್ಲಿ ಹಿಂತಿರುಗುವಂತೆ ಯಾವುದೇ ಸೂಚನೆ ಹಾಗೂ ನಿರ್ದೇಶನ ನೀಡಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸ್ಪಷ್ಟನೆ ನೀಡಿದೆ. ಈಗಾಗಲೇ ಪ್ರವಾಸ ಹೋಗಿರುವವರು ತಕ್ಷಣ ವಾಪಸ್ ಆಗುವಂತೆ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಿತ್ತು. .
ಇನ್ನು ಈ ವರ್ಷ ಕೈಗೊಂಡಿರುವ ಪ್ರವಾಸಗಳನ್ನು ಈ ತಿಂಗಳೊಳಗೆ ಪೂರ್ಣಗೊಳಿಸಬೇಕು.ಪ್ರವಾಸ ಕೈಗೊಳ್ಳುವ ಮುನ್ನ ಪೂರ್ವಭಾವಿಯಾಗಿ ಯೋಜನೆ ರೂಪಿಸಬೇಕು.ಪ್ರವಾಸದ ಸಂದರ್ಭದಲ್ಲಿ ಅಪಾಯಕಾರಿ ಸ್ಥಳಗಳಿಗೆ ಕರೆದುಕೊಂಡು ಹೋಗಬಾರದು. ಎಲ್ಲ ಸ್ಥಳಗಳಲ್ಲಿ ಮತ್ತು ಸಂದರ್ಭಗಳಲ್ಲಿ ಪ್ರವಾಸದ ಉಸ್ತುವಾರಿ ವಹಿಸಿರುವ ಸಿಬ್ಬಂದಿಯು ವಿದ್ಯಾರ್ಥಿಗಳ ಜತೆ ಎಚ್ಚರಿಕೆಯಿಂದ ಇದ್ದು ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.
ಗಮನಿಸಿ




