ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಪ್ರವಾಸೋದ್ಯಮ ಗರಿಗೆದರಬೇಕಾದ ಹೊಸ ವರ್ಷದ ಸಂದರ್ಭದಲ್ಲಿ ಇಲ್ಲಿನ ರೆಸಾರ್ಟ್ಗಳ ವಿರುದ್ಧವೇ ಪ್ರವಾಸಿಗರು ಆರೋಪಿಸಿದ್ದಾರೆ. ಹೊಸ ವರ್ಷ ಆಚರಿಸುವ ಕಾರಣಕ್ಕಾಗಿಯೇ ದೂರದ ಮಹಾರಾಷ್ಟ್ರದಿಂದ ಒಂದಷ್ಟು ಗೆಳೆಯರು ಕುಮಟಾದ ಬಾಡ-ಅಘನಾಶಿನಿ ರಸ್ತೆಯಲ್ಲಿರುವ ರೆಸಾರ್ಟ್ ಒಂದಕ್ಕೆ ಬಂದಿದ್ದು, ಇಲ್ಲಿನ ಕೆಲವೊಂದು ರೆಸಾರ್ಟ್ಗಳಲ್ಲಿ ಊಟೋಪಚಾರ ಸರಿಯಿಲ್ಲ ಪ್ರವಾಸಿಗರ ದೂರಿದ್ದಾರೆ.
ಹೇಳಿ ಕೇಳಿ ಉತ್ತರ ಕನ್ನಡದ ಜನ ಆತಿಥ್ಯಕ್ಕೆ ಪ್ರಸಿದ್ಧರು ಎನ್ನುವುದು ಬಹುತೇಕ ಪ್ರವಾಸಿಗರಿಗೆ ಗೊತ್ತಿರುವ ಸತ್ಯ. ಆದರೆ ಮಹಾರಾಷ್ಟ್ರದ ಪ್ರವಾಸಿಗರು ತಂಗಿದ್ದ ರೆಸಾರ್ಟ್ ಸಿಬ್ಬಂದಿ ಬಿಸಿ ಬಿಸಿ ತಾಜಾ ಆಹಾರ ನೀಡದ ಕಾರಣಕ್ಕೆ ಬೇಸರಗೊಂಡ ಪ್ರವಾಸಿಗರು ರೂಮ್ ಬುಕ್ಕಿಂಗ್ ರದ್ದುಗೊಳಿಸಿ ಕುಮಟಾ ನಗರದ ಲಾಡ್ಜುಗಳಲ್ಲಿ ಕಳೆದು ಹೋದ ಬೇಸರದ ಘಟನೆ ನಡೆದಿದೆ.
ಈ ಕುರಿತು ಖುದ್ದು ಮಹಾರಾಷ್ಟ್ರದ ಪ್ರವಾಸಿಗರೇ ಸುದ್ದಿಬಿಂದು''ವನ್ನು ಸಂಪರ್ಕಿಸಿ ತಮ್ಮ ಬೇಸರ ವ್ಯಕ್ತ ಪಡಿಸಿದ್ದಾರೆ. ಕಳೆದ ವರ್ಷ ಗೋವಾಕ್ಕೆ ಹೋಗಿದ್ದ ಪ್ರವಾಸಿಗರು ಈ ಬಾರಿ ಒಂದು ವಾರ ಕ್ರಿಸ್ಮಸ್ ಹಾಗೂ ಹೊಸ ವರ್ಷ ಸೆಲೆಬ್ರೇಟ್ ಮಾಡಬೇಕು ಎನ್ನುವ ಉದ್ದೇಶದಿಂದ ಡಿಸೆಂಬರ್ 24ಕ್ಕೇ ಮಹಾರಾಷ್ಟ್ರದಿಂದ ಬಾಡ-ಅಘನಾಶಿನಿ ರಸ್ತೆಯ ರೆಸಾರ್ಟ್ ಒಂದಕ್ಕೆ ಬಂದಿದ್ದಾರೆ.ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ” ಎನ್ನುವ ಹಿರಿಯರ ಮಾತನ್ನು ನಂಬಿರುವ ಪ್ರವಾಸಿಗರಿಗೆ ಇಲ್ಲಿನ ರೆಸಾರ್ಟಿಗೆ ಬಂದ ಬಳಿಕ ಈ ರೆಸಾರ್ಟ್ ಸಿಬ್ಬಂದಿಗಳ ಮಾತೂ ಸರಿಯಿಲ್ಲ, ಊಟವೂ ಫ್ರೆಶ್ ಇಲ್ಲ ಎನ್ನುವುದು ಗೊತ್ತಾಗಿದೆ.
ಯಾಕೆಂದರೆ ಪ್ರವಾಸಿಗರು ಫುಡ್ ಆರ್ಡರ್ ಮಾಡುವಾಗಲೇ ರೆಸಾರ್ಟ್ ಸಿಬ್ಬಂದಿ 1 ಗಂಟೆ ತಡವಾಗುತ್ತದೆ ಎಂದು ಹೇಳುತ್ತಿದ್ದನಂತೆ! ಪ್ರವಾಸಿಗರು ಪ್ರತೀ ಆಹಾರವನ್ನು ರೆಸಾರ್ಟ್ ಅವರು ಈಗ ಮಾಡಿಕೊಡುತ್ತಾರೆ ಎಂದು ನಂಬಿದ್ದರಂತೆ. ಆದರೆ ಒಂದು ಗಂಟೆ ಬಿಟ್ಟು ಸಿಬ್ಬಂದಿ ಫುಡ್ ತಂದಾಗ ಎಲ್ಲವೂ ತಣ್ಣಗಾಗಿತ್ತಂತೆ! ಪ್ರವಾಸಿಗರು ಈ ಬಗ್ಗೆ ವಿಚಾರಿಸಿದಾಗ ಈ ಎಲ್ಲ ಫುಡ್ ದೂರದಿಂದ ಯಾವುದೋ ಗೂಡಗಂಡಿಯಲ್ಲಿ ಮಾಡಿ ತಂದಿದ್ದು ಎಂದು ಗೊತ್ತಾಗಿದೆ! ಈ ಬಗ್ಗೆ ಪ್ರವಾಸಿಗರು ಕೇಳಿದರೆ ರೆಸಾರ್ಟ್ ಸಿಬ್ಬಂದಿ ಪ್ರವಾಸಿಗರಿಗೇ ಬೈದ ಕಾರಣ ಆಕ್ರೋಶಗೊಂಡ ಪ್ರವಾಸಿಗರು ನಿಮ್ಮ ಸಹವಾಸವೇ ಬೇಡವೆಂದು ರೂಮ್ ಕ್ಯಾನ್ಸಲ್ ಮಾಡಿ ಕುಮಟಾ ನಗರದ ಲಾಡ್ಜಿಗೆ ಬಂದು ರಾತ್ರಿ ಕಳೆದಿದ್ದಾರೆ.
ನಾವೆನೋ ಇಲ್ಲಿ ಒಳ್ಳೆಯ ಸರ್ವಿಸ್ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಇಲ್ಲಿನ ರೆಸಾರ್ಟಿಗೆ ಬಂದಿದ್ದೇವು. ಆದರೆ ನಮ್ಮ ನಿರೀಕ್ಷೆ ಸುಳ್ಳಾಗಿದೆ. ನಾವೀಗ ಗೋವಾಕ್ಕೆ ತೆರಳುತ್ತೇವೆ'' ಎಂದು ನೊಂದ ಪ್ರವಾಸಿಗರುಸುದ್ದಿಬಿಂದು”ಗೆ ತಿಳಿಸಿಯೇ ಪ್ರಯಾಣ ಮುಂದುವರಿಸಿದ್ದಾರೆ.
ಸುದ್ದಿಬಿಂದು'' ಈ ವಿಷಯವನ್ನು ಕುಮಟಾದ ರೆಸಾರ್ಟ್ ಉದ್ಯಮಿಯೊಬ್ಬರ ಗಮನಕ್ಕೆ ತಂದಿದ್ದು, ಈ ಬಗ್ಗೆ ಅವರು ಬಹಳ ಬೇಸರ ವ್ಯಕ್ತಪಡಿಸಿದರು.ಇತ್ತೀಚೆಗೆ ಬಾಡ-ಅಘನಾಶಿನಿ ರಸ್ತೆಯಲ್ಲಿ ರೆಸಾರ್ಟುಗಳು ನಾಯಿ ಕೊಡೆಗಳಂತಾಗಿವೆ. ನಾವು ಸರ್ಕಾರದಿಂದ ಹೇಳಲಾದ ಎಲ್ಲಾ ನಿಯಮ ಪಾಲಿಸಿಯೇ ರೆಸಾರ್ಟ್ ಉದ್ಯಮ ಆರಂಭಿಸಿದ್ದೇವೆ. ಆದರೆ ಹಲವರು ಬೀಚ್ ಬದಿ ಜಾಗ ಸಿಕ್ಕಿದೆ ಎನ್ನುವ ಕಾರಣಕ್ಕೆ ಕೊಟ್ಟಿಗೆಗಳನ್ನು ಕಟ್ಟಿ “ಹಟ್” ಎನ್ನುವ ರೇಂಜಿಗೆ ಬಿಲ್ಡಪ್ ಕೊಡುತ್ತಾರೆ. ಇವರಲ್ಲಿ ಅಡುಗೆ ಮಾಡುವುದಕ್ಕೆ ಕುಕ್ ಕೂಡ ಇರುವುದಿಲ್ಲ. ಅಕ್ಕಪಕ್ಕದ ಯಾವುದೋ ಗೂಡಂಗಡಿಗಳಿಂದ ಗ್ರಾಹಕರಿಗೆ ಊಟ ತಂದು ಕೊಟ್ಟ ಕಾರಣ ಈ ಅವಾಂತರ ಸಂಭವಿಸಿರಬಹುದು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಆರೋಗ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
ಈಗ ಗ್ರಾಹಕರನ್ನು ಸೆಳೆಯುವುದು ಬಹಳ ಕಷ್ಟ. ಅಂತಾದ್ದರಲ್ಲಿ ಬಂದ ಗ್ರಾಹಕರಿಗೆ ಸರಿಯಾದ ಸೇವೆ ನೀಡದಿದ್ದರೆ ಎಲ್ಲರೂ ತಲೆ ತಗ್ಗಿಸಬೇಕಾಗುತ್ತದೆ. ಕುಮಟಾದಲ್ಲಿರುವ ಹಲವಾರು ಅನಧಿಕೃತ ರೆಸಾರ್ಟುಗಳ ಬಗ್ಗೆ ತಾಲೂಕಾಡಳಿತ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಮತ್ತೆ ಯಾವತ್ತೂ ನಡೆಯಬಾರದು” ಎಂದು ತಿಳಿಸಿದರು. (ಸುದ್ದಿ ಮುಂದುವರೆಯಲಿದೆ.)
ಗಮನಿಸಿ



