ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಅಂತೂ ಇಂತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ರಚನೆ ಸೋಮವಾರ ಅಂತಿಮವಾಗಿ ತೆರೆಬಿದ್ದಿದೆ. ಹಲವು ನಾಯಕರು ಸಚಿವ ಸ್ಥಾನ ಗಿಟ್ಟಿಸಿಕೊಂಡರೆ ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಯಾವುದೇ ಸಚಿವ ಸ್ಥಾನ ನೀಡದೆ ಕಡೆಗಣಿಸಲಾಗಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.

ಅಷ್ಟಕ್ಕೂ ಪ್ರಮಾಣ ವಚನ ಸ್ವೀಕರಿಸಲಿರುವ ಸಚಿವರ ಮೊದಲ ಪಟ್ಟಿಯಲ್ಲಿ ಭಟ್ಕಳ ಶಾಸಕ ಮಂಕಾಳ ವೈದ್ಯರ ಹೆಸರನ್ನು ನಮೂದಿಸಲಾಗಿತ್ತು. ಆದರೆ ಕೆಲ ಸಮಯದಲ್ಲಿ ದೊಡ್ಡ ಹೈಡ್ರಾಮವೇ ನಡದುಹೋಗಿದೆ. ವೈದ್ಯರ ಹೆಸರನ್ನು ಇದ್ದಕ್ಕಿದ್ದಂತೆ ‘ಕೈ’ ಬಿಟ್ಟ ಹೈಕಮಾಂಡ್ ವೈದ್ಯರಿಗಲ್ಲದೆ ಉತ್ತರ ಕನ್ನಡ ಜಿಲ್ಲೆಯ ಜನರಲ್ಲಿಯೂ ನಿರಾಸೆ ಮೂಡಿಸಿದೆ. ಸಚಿವ ಸ್ಥಾನದ ಆಸೆ ತೋರಿಸಿದ ಹೈಕಮಾಂಡ್ ಕೊನೆ ಘಳಿಗೆಯಲ್ಲಿ ಬೇರೊಂದು ಹೆಸರು ಉಲ್ಲೇಖಿಸಿ ದೊಡ್ಡ ಪ್ರಮಾದ ಎಸಗಿದೆ. ಜಿಲ್ಲೆಯಲ್ಲಿ ಸಚಿವ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಜಿಜ್ಞಾಸೆಯಲ್ಲಿ ಜನ ಕಾದು ಕುಳಿತಿದ್ದರು. ಹಿರಿತನದ ಆಧಾರದಲ್ಲಿಯಾದರೂ ಸಚಿವ ಸ್ಥಾನ ನೀಡಬೇಕಿತ್ತು. ಆದರೆ ಯಾರಿಗೂ ಸಚಿ ಸ್ಥಾನ ನೀಡದೆ ಉತ್ತರ ಕನ್ನಡ ಜಿಲ್ಲೆಯನ್ನು ಕಡೆಗಣಿಸಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.

ನೀರವ ಮೌನ:
ಇನ್ನು ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಮುಖರಲ್ಲಿ ನೀರವ ಮೌನ ಆವರಿಸಿದೆ.‌ ಸಚಿವ ಸ್ಥಾನ ಕೊಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯಾಗಲಿ, ಆಯಾ ತಾಲೂಕುಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಪ್ರಮುಖರುಗಳು ಧ್ವನಿ ಎತ್ತದಿರುವುದು ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಸಂಪೂರ್ಣ ನೆಲಕಚ್ಚಿದೆಯೇ ಎಂಬ ಅನುಮಾನ ಸಹಜವಾಗಿ ಕಾಡುವಂತಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಅವಸಾನದ ಹಾದಿ ತುಳಿಯುತ್ತಿದೆಯೇ ಎಂಬ ಅನುಮಾನ ಸ್ವತಃ ಕಾಂಗ್ರೆಸ್ ಪಾಳೆಯದಲ್ಲೇ ಹುಟ್ಟುಹಾಕಿದೆ.

ಇದನ್ನೂ ಓದಿ/ಕಾಂಗ್ರೆಸ್ ಸಚಿವ ಸಂಪುಟದ ವಿರುದ್ಧ ಜೆಡಿಎಸ್ ಟೀಕೆ; ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ವೈರಲ್