ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಶಾಸಕ ಮಂಕಾಳ್. ವೈದ್ಯ ಅವರ ಹೆಸರನ್ನ, ಕೊನೆಯ ಕ್ಷಣದಲ್ಲಿ ಪಟ್ಟಿಯಿಂದ ಕೈಬಿಟ್ಟಿರುವದು ಈಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಬಿಜೆಪಿಯ ಭದ್ರಕೋಟೆಯಾಗಿದ್ದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆಯೇ, ಉತ್ತರ ಕನ್ನಡ ಜಿಲ್ಲೆಯ ಮತದಾರರು ಕಾಂಗ್ರೆಸ್ಗೆ ನಾಲ್ಕು ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಿದ್ದರು. ಸಚಿವರ ಆಯ್ಕೆ ಪಟ್ಟಿಯಲ್ಲಿ ಹೆಸರು ಸೇರಿಸಿ ಕೈ ಬಿಟ್ಟಿರುವುದು ಕರಾವಳಿಯಲ್ಲಿ ನೆಲೆ ಕೊಟ್ಟ ಉತ್ತರ ಕನ್ನಡಕ್ಕೇ ಕಾಂಗ್ರೆಸ್ ದ್ರೋಹ ಮಾಡಿದಂತಾಗಿದೆ.
ಮಂಕಾಳ್ ವೈದ್ಯ ಅವರು ಈ ಹಿಂದೆ ಪಕ್ಷೇತರ ಶಾಸಕರಾಗಿದ್ದಾಗ ಕಾಂಗ್ರೆಸ್ ಸರ್ಕಾರದ ಅಸ್ತಿತ್ವಕ್ಕೆ ಪ್ರಮುಖ ಬೆಂಬಲ ನೀಡಿದ್ದರು. ನಂತರ ಕಾಂಗ್ರೆಸ್ ಸೇರ್ಪಡೆಯಾಗಿ ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬಳಿಕ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರು ಕೂಡ ಆದರು. ಮೀನುಗಾರಿಕಾ ಸಮಾಜದ ಏಕೈಕ ಶಾಸಕರಾಗಿದ್ದ ಮಂಕಾಳ್ ವೈದ್ಯ ಅವರ ಹೆಸರನ್ನ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಪಟ್ಟಿಯಲ್ಲಿ ನಮೂದಾದ ಬಳಿಕ ಕೈಬಿಟ್ಟಿರುವುದಕ್ಕೆ ಕರಾವಳಿ ಜಿಲ್ಕೆಯ ಜನ ಆಕ್ರೋಶರಾಗಿದ್ದಾರೆ.
ಅಂತಿಮ ಕ್ಷಣದಲ್ಲಿ ಅವರ ಹೆಸರನ್ನು ಕೈಬಿಟ್ಟಿರುವುದು ಕೇವಲ ಒಬ್ಬ ಶಾಸಕರಿಗೆ ಅವಕಾಶ ತಪ್ಪಿದ ವಿಚಾರವಲ್ಲ, ಉತ್ತರ ಕನ್ನಡ ಜಿಲ್ಲೆಯ ಜನತೆ ಹಾಗೂ ಕರಾವಳಿ ಭಾಗದ ಕಾಂಗ್ರೆಸ್ ಬೆಂಬಲಿಗರ ಆಶಯಕ್ಕೆ ಹಿನ್ನಡೆಯಾಗಿದೆ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆಯಲ್ಲಿ ಪಕ್ಷದ ಪರವಾಗಿ ಸ್ಪಷ್ಟ ಜನಾದೇಶ ನೀಡಿದ ಜಿಲ್ಲೆಯ ಆಶಯಕ್ಕೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆಯದಿರುವುದು ಕಾಂಗ್ರೆಸ್ ಸಂಘಟನೆಗೂ ಹಿನ್ನಡೆ ಆಗಿರುವಂತಾಗಿದೆ.
ಇಷ್ಟೆಲ್ಲಾ ಬೆಳವಣಿಗೆ ಆದರರೂ, ಮಂಕಾಳ್ ವೈದ್ಯ ಅವರು ಯಾವುದೇ ಅಸಮಾಧಾನ ವ್ಯಕ್ತಪಡಿಸದೆ, ಪಕ್ಷದ ವಿರುದ್ಧ ಹೇಳಿಕೆ ನೀಡದೆ ಹಾಗೂ ತಮ್ಮ ಬೆಂಬಲಿಗರಿಗೂ ಪ್ರತಿಭಟನೆ ಮಾಡದಂತೆ ಸೂಚಿಸಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. , ಜಿಲ್ಲೆಗೆ ಸಚಿವ ಸ್ಥಾನ ಸಿಗದಿರುವುದು ಮಾತ್ರ ಕಾಂಗ್ರೆಸ್ ಕಾರ್ಯಕರ್ತರ ಮನದಲ್ಲಿ ಇನ್ನೂ ನೋವಿನ ಪ್ರಶ್ನೆಯಾಗಿಯೇ ಉಳಿದಿದೆ.

