ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ:ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಲೆಗಳ ರಭಸಕ್ಕೆ ಪಾತಿ ದೋಣಿ ಮಗುಚಿ ಬಿದ್ದಿದ್ದು ಮೃತಪಟ್ಟಿದ್ದ ಮೀನುಗಾರನ ಮೃತದೇಹ ಇಂದು ಬೆಳಿಗ್ಗೆ ಭಟ್ಕಳ ತಾಲೂಕಿನ ಮುಂಡಳ್ಳಿ ಸಮೀಪದ ತೀರದಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿ ಜಾಲಿಕೋಡಿಯ ನಿವಾಸಿ ಮಂಜುನಾಥ ಬೇಟ್ಯಾ ಮೊಗೇರ (56)ಎಂದು ಗುರುತಿಸಲಾಗಿದೆ.ಮಂಗಳವಾರ ಮಧ್ಯಾಹ್ನ ಭಟ್ಕಳ ತಾಲೂಕಿನ ಜಾಲಿಕೋಡಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಲೆಗಳ ರಭಸಕ್ಕೆ ಪಾತಿ ದೋಣಿ ಮಗುಚಿದೆ.ಇದರಿಂದ ಮಂಜುನಾಥ ಮೊಗೇರ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು.
ನಾಪತ್ತೆಯಾದ ಮೀನುಗಾರನಿಗಾಗಿ ಸ್ಥಳೀಯ ಮೀನುಗಾರರು ಹಾಗೂ ಸಂಬಂಧಿತ ತಂಡಗಳು ಶೋಧ ಕಾರ್ಯಾಚರಣೆ ನಡೆಸಿದ್ದರು. ಬುಧವಾರ ಬೆಳಿಗ್ಗೆ ಮುಂಡಳ್ಳಿ ಸಮೀಪದ ಸಮುದ್ರ ತೀರದಲ್ಲಿ ಅವರ ಮೃತದೇಹ ಪತ್ತೆಯಾಯಿತು.
ಘಟನೆಗೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



