ಸುದ್ದಿಬಿಂದು ಬ್ಯೂರೋ ವರದಿ
ಹಳಿಯಾಳ : ಪೊಲೀಸ್ ಠಾಣೆಯಲ್ಲಿ ಪಿಎಸ್ಐಗಳ ಪೋಸ್ಟಿಂಗ್‌ಗೆ ಸಂಬಂಧಿಸಿದಂತೆ ಹಣದ ವ್ಯವಹಾರ ಹಾಗೂ ಠಾಣೆಯ ಮಾಸಿಕ ಹಪ್ತಾ ಕುರಿತು ಮಾತುಕತೆ ನಡೆಸಲಾಗಿದೆ ಎನ್ನಲಾದ ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪಿಎಸ್ಐಗಳನ್ನು ಅಮಾನತುಗೊಳಿಸಿ ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಆದೇಶಿಸಿದ್ದಾರೆ.

ಅಮಾನತುಗೊಂಡಿರುವ ಅಧಿಕಾರಿಗಳಲ್ಲಿ ಹಳಿಯಾಳ ಠಾಣೆಯ L&O ಪಿಎಸ್ಐ ಕಿರಣ್ ಪಾಟೀಲ್, ಹಳಿಯಾಳ ಕ್ರೈಂ ವಿಭಾಗದ ಪಿಎಸ್ಐ ಕೃಷ್ಣ ಹಾಗೂ ಈ ಹಿಂದೆ ಹಳಿಯಾಳ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸಿ, ಪ್ರಸ್ತುತ ಮುಂಡಗೋಡ ಠಾಣೆಯಲ್ಲಿ ಪಿಎಸ್ಐ ಆಗಿರುವ ವಿನೋದ್ ರೆಡ್ಡಿ ಸೇರಿದ್ದಾರೆ.
ಪೋಸ್ಟಿಂಗ್‌ಗಾಗಿ ಹಣದ ವ್ಯವಹಾರ ಆರೋಪದ ಮಾತುಕತೆ
ಹಳಿಯಾಳ ಠಾಣೆಯ L&O ಪಿಎಸ್ಐ ಹುದ್ದೆಯ ಪೋಸ್ಟಿಂಗ್‌ಗಾಗಿ ಹಣದ ವ್ಯವಹಾರದ ಕುರಿತು ಮೂವರು ಪಿಎಸ್ಐಗಳು ಮಾತನಾಡಿಕೊಂಡಿದ್ದಾರೆ ಎನ್ನಲಾದ ಆಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದೇ ವೇಳೆ ಠಾಣೆಯ ಮಾಸಿಕ ಹಪ್ತಾ, ಮೇಲಾಧಿಕಾರಿಗಳಿಗೆ ಹಣ ನೀಡುವ ಕುರಿತಾದ ಮಾತುಕತೆಗಳೂ ಆಡಿಯೋದಲ್ಲಿವೆ ಎನ್ನಲಾಗಿತ್ತು. ಆಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಇಲಾಖೆ, ಘಟನೆಯ ಕುರಿತು ತನಿಖೆಗೆ ನಡೆಸಲಾಗಿತ್ತು.

ಎಎಸ್ಪಿ ನೇತೃತ್ವದಲ್ಲಿ ತನಿಖೆ
ಈ ಪ್ರಕರಣದ ಕುರಿತು ಉತ್ತರಕನ್ನಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ವೈರಲ್ ಆಗಿದ್ದ ಆಡಿಯೋ, ಅದರಲ್ಲಿನ ಮಾತುಕತೆಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರ ಅಂಶಗಳನ್ನು ತನಿಖಾ ತಂಡ ಪರಿಶೀಲಿಸಿತ್ತು ಎನ್ನಲಾಗಿದೆ.
ತನಿಖೆಯಿಂದ ಲಭ್ಯವಾದ ವರದಿ ಹಾಗೂ ಅಂಶಗಳ ಆಧಾರದ ಮೇಲೆ ಮೂವರು ಪಿಎಸ್ಐಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಇದರ ಭಾಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಮೂವರನ್ನೂ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈ ಪ್ರಕರಣವು ಪೊಲೀಸ್ ಇಲಾಖೆಯೊಳಗಿನ ಪೋಸ್ಟಿಂಗ್ ಹಾಗೂ ಹಣಕಾಸಿನ ವ್ಯವಹಾರಗಳ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದ್ದು, ಇಲಾಖೆಯೊಳಗಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಕೈಗೊಂಡಿರುವ ಕ್ರಮ ಮಹತ್ವ ಪಡೆದಿದೆ..