ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ನಗರದ ಹೃದಯಭಾಗದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲದ ಮೇಲೆ ಭಟ್ಕಳ ಶಹರ ಠಾಣೆ ಪೊಲೀಸರು ಮಿಂಚಿನ ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂದಿತರಿಂದ 146 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಮೂರು ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಗರದ ಕನ್ನಡ ಶಾಲೆ ಬಳಿಯ ಹುರುಳಿ ಸಾಲ್ ನಿವಾಸಿ ಮೊಹಮ್ಮದ್ ಸಿಮ್ರಾನ್ ಉಸ್ಮಾನ್ ಸನದಿ, ಶಿರಕೊಳ ಹೊಂಡ 8ನೇ ಕ್ರಾಸ್ ನಿವಾಸಿ ಮೊಹಮ್ಮದ್ ಅಜೀಲ್ ಮೊಹಮ್ಮದ್ ಜಾಫರ್ ಶೇಖ್ ಹಾಗೂ ಚೌಥನಿ ಬ್ರಿಡ್ಜ್ ಹತ್ತಿರದ ನಿವಾಸಿ ಮೊಹಮ್ಮದ್ ಇಮ್ರಾನ್ ಅಬ್ದುಲ ಗಫಾರ್ ಬಂಧಿತ ಆರೋಪಿಗಳಾಗಿದ್ದಾರೆ.
ನಗರದ ಮುಗ್ಡುಂಕಾಲೋನಿಯ ಶಾಹೀನ್ ಗ್ರೌಂಡ್ನಲ್ಲಿ ಆರೋಪಿಗಳಾದ ಸಿಮ್ರಾನ್ ಮತ್ತು ಅಜೀಲ್, ಸುಜುಕಿ ಬೈಕ್ನಲ್ಲಿ ಗಾಂಜಾವನ್ನು ಇಟ್ಟುಕೊಂಡು ಮತ್ತೊಬ್ಬ ಆರೋಪಿ ಇಮ್ರಾನ್ ಎಂಬಾತನಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಶಹರ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ದಾಳಿ ನಡೆಸಿ, ಆರೋಪಿಗಳನ್ನು ಸ್ವತ್ತುಗಳೊಂದಿಗೆ ರೆಡ್ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ ಸುಮಾರು 10 ಸಾವಿರ ಮೌಲ್ಯದ 146 ಗ್ರಾಂ ಗಾಂಜಾ, 40 ಸಾವಿರ ಮೌಲ್ಯದ ಸುಜುಕಿ ಬೈಕ್ (KA-47/U-7708), 10,000 ರೂ. ಮೌಲ್ಯದ ಹೀರೋ ಹೋಂಡಾ ಪ್ಯಾಷನ್ ಪ್ಲಸ್ (KA-30/L-1590) ಹಾಗೂ ನಂಬರ್ ಪ್ಲೇಟ್ ಇಲ್ಲದ 20, ಸಾವಿರ ಮೌಲ್ಯದ ಕೆಂಪು-ಕಪ್ಪು ಬಣ್ಣದ ಹೋಂಡಾ SP125 ಬೈಕ್ ಸೇರಿದಂತೆ ಒಟ್ಟು 70 ಸಾವಿರ ಮೌಲ್ಯದ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳ ವಿರುದ್ಧ ಎನ್ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಎಂ. ಕೃಷ್ಣಮೂರ್ತಿ ಹಾಗೂ ಡಿವೈಎಸ್ಪಿ ಗಿರೀಶ್ ಬಿ. ಅವರ ಸೂಚನೆಯಂತೆ, ಭಟ್ಕಳ ಶಹರ ಠಾಣೆ ಇನ್ಸ್ಪೆಕ್ಟರ್ ದಿವಾಕರ ಸಿ.ಎಂ. ನೇತೃತ್ವದಲ್ಲಿ ಪಿಎಸ್ಐ ನವೀನ್ ಎಸ್. ನಾಯ್ಕ ಮತ್ತು ಸಿಬ್ಬಂದಿಗಳು ಯಶಸ್ವಿ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ/ ಖಾಕಿ ಡ್ರೆಸ್, ಒಳಗಡೆ ಲಂಚದ ಬಿಸಿನೆಸ್: ಮೂವರು PSI ಗಳ ‘ಮಾಮೂಲಿ’ ಕಥೆಗೆ ತನಿಖೆಯ ಬಿಸಿ.!

