ಸುದ್ದಿಬಿಂದು ಬ್ಯೂರೋ ವರದಿ
ಹಳಿಯಾಳ: ಇಲ್ಲಿನ ಪೊಲೀಸ್ ಠಾಣೆಯ ಪಿಎಸ್ಐ ಪೋಸ್ಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಅಧಿಕಾರಿಗಳ ನಡುವೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಇಲಾಖೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹಳಿಯಾಳ ಠಾಣೆಯ ಪಿಎಸ್ಐ ಕಿರಣ್ ಪಾಟೀಲ್, ಕ್ರೈಂ ವಿಭಾಗದ ಪಿಎಸ್ಐ ಕೃಷ್ಣ ಅರಿಕೆರೆ ಹಾಗೂ ಮುಂಡಗೋಡ ಠಾಣೆಯ ಪಿಎಸ್ಐ ವಿನೋದ್ ರೆಡ್ಡಿ ಅವರ ನಡುವಿನ ಸಂಭಾಷಣೆ ಇದಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಈ ಧ್ವನಿ ಸುರುಳಿಯ ನೈಜತೆ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.
ಪ್ರಕರಣದ ಹಿನ್ನೆಲೆ: ಕಳೆದ ಎರಡು ತಿಂಗಳ ಹಿಂದೆ ರೌಡಿ ಶೀಟರ್ ಮಂಚ್ ಮಂಜಾ ಪ್ರಕರಣದ ಹಿನ್ನೆಲೆಯಲ್ಲಿ ಅಂದಿನ ಹಳಿಯಾಳ ಪಿಎಸ್ಐ ಬಸವರಾಜ್ ಅಮಾನತುಗೊಂಡಿದ್ದರು. ತೆರವಾಗಿದ್ದ ಅವರ ಸ್ಥಾನಕ್ಕೆ ಪೋಸ್ಟಿಂಗ್ ಪಡೆಯಲು ಮುಂಡಗೋಡ ಪಿಎಸ್ಐ ವಿನೋದ್ ರೆಡ್ಡಿ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ. ಆದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ದೀಪನ್ ಅವರು ದಾಂಡೇಲಿ ಠಾಣೆಯ ಪಿಎಸ್ಐ ಕಿರಣ್ ಪಾಟೀಲ್ ಅವರನ್ನು ಹಳಿಯಾಳಕ್ಕೆ ನಿಯೋಜಿಸಿದ್ದರು.
ಈ ನಿರ್ಧಾರದಿಂದ ಅಸಮಾಧಾನಗೊಂಡ ವಿನೋದ್ ರೆಡ್ಡಿ, ಹಳಿಯಾಳ ಕ್ರೈಂ ಪಿಎಸ್ಐ ಕೃಷ್ಣ ಅರಿಕೆರೆ ಅವರಿಗೆ ಕರೆ ಮಾಡಿ ತಮ್ಮ ರಾಜಕೀಯ ಪ್ರಭಾವದ ಕುರಿತು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಹೊರಬಿದ್ದಿದೆ. ಇದೇ ಸಂಭಾಷಣೆಯಲ್ಲಿ ಹಳಿಯಾಳ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತದೆ ಎನ್ನಲಾದ ‘ಮಂತ್ಲಿ’ ಹಣದ ವ್ಯವಹಾರ ಹಾಗೂ ಮೇಲಾಧಿಕಾರಿಗಳಿಗೆ ಲಂಚ ನೀಡುವ ವಿಚಾರಗಳ ಕುರಿತು ಆರೋಪಗಳು ಕೇಳಿಬಂದಿವೆ.
ಜೆಡಿಎಸ್ ಖಾತೆಯಲ್ಲಿ ಪೋಸ್ಟ್ – ತನಿಖೆಗೆ ಆದೇಶ:
ಖಾಕಿ ಪಡೆಯ ಆಂತರಿಕ ಶೀತಲ ಸಮರ ಬಿಂಬಿಸುವ ಈ ಆಡಿಯೋವನ್ನು ಜೆಡಿಎಸ್ನ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರಕನ್ನಡ ಎಸ್ಪಿ ದೀಪನ್ ಅವರು, ಎಎಸ್ಪಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ.
ತನಿಖಾಧಿಕಾರಿ ಎಎಸ್ಪಿ ಕೃಷ್ಣಮೂರ್ತಿ ಅವರು ಹಳಿಯಾಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದು, ಆಡಿಯೋದ ಸತ್ಯಾಸತ್ಯತೆ ಹಾಗೂ ಅದರಲ್ಲಿರುವ ಆರೋಪಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ. ತನಿಖೆಯ ನಂತರವಷ್ಟೇ ಪ್ರಕರಣದ ಸತ್ಯ ಹೊರಬರಬೇಕಿದೆ.
ಇದನ್ನೂ ಓದಿ/ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ: 24 ಮೀನುಗಾರರ ರಕ್ಷಣೆ..!



