ಸುದ್ದಿಬಿಂದು ಬ್ಯೂರೋ ವರದಿ

ಕಾರವಾರ: ಗುರುಪೂರ್ಣಿಮೆ ಅಂಗವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ನಗರದ ರಾಮಕೃಷ್ಣಾಶ್ರಮ ಹಾಗೂ ಹಿರೇಶಿಟ್ಟಾದ ಗುರುಕುಲಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದರು.

ನಗರದ ರಾಮಕೃಷ್ಣಾಶ್ರಮದಲ್ಲಿ ಶ್ರೀ ಭಾವೇಶಾನಂದ ಸ್ವಾಮೀಜಿಗಳ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಭಾಗವಹಿಸಿದ ಅವರು, ಗುರುಗಳನ್ನು ಸನ್ಮಾನಿಸಿ ಅವರ ಸಮಾಜಮುಖಿ ಸೇವೆಗೆ ಕೃತಜ್ಞತೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, “ಗುರುವಿನ ಜ್ಞಾನ, ಸೇವೆ, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳು ಸಮಾಜದ ಶಾಶ್ವತ ಸಂಪತ್ತಾಗಿವೆ. ಆಧ್ಯಾತ್ಮಿಕ ಸಂಸ್ಥೆಗಳು ಸಮಾಜದಲ್ಲಿ ಸಂಸ್ಕಾರ, ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಕೇಂದ್ರಗಳಾಗಿವೆ. ಇಂತಹ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸಮಾಜದ ಒಳಿತಿಗಾಗಿ ಕೆಲಸ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಗುರುವಿನ ಕೃಪೆ ಎಲ್ಲರ ಮೇಲಿದ್ದು, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮೃದ್ಧಿ ನೆಲೆಸಲಿ” ಎಂದು ಹಾರೈಸಿದರು.”ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ನನ್ನ ಸಾರ್ವಜನಿಕ ಜೀವನದ ದೊಡ್ಡ ಶಕ್ತಿ. ಅಧಿಕಾರ ಇರಲಿ ಅಥವಾ ಇರದಿರಲಿ, ಜನರೊಂದಿಗೆ ಬೆರೆತು ಅವರ ಸುಖ-ದುಃಖಗಳಲ್ಲಿ ಪಾಲುದಾರಳಾಗಿರುವುದು ನನ್ನ ಬದ್ಧತೆಯಾಗಿದೆ” ಎಂದು ರೂಪಾಲಿ ಎಸ್. ನಾಯ್ಕ ಹೇಳಿದರು.

ಈ ಸಂದರ್ಭದಲ್ಲಿ ಆಶ್ರಮದಲ್ಲಿ ನೆರೆದಿದ್ದ ಭಕ್ತರು, ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಗುರುಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಹಣ್ಣು-ಹಂಪಲು ಹಾಗೂ ಪ್ರಸಾದ ಸ್ವೀಕರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಇದೇ ವೇಳೆ ಕಾರವಾರದ ಹಿರೇಶಿಟ್ಟಾದಲ್ಲಿರುವ ಗುರುಕುಲಕ್ಕೂ ಭೇಟಿ ನೀಡಿದ ರೂಪಾಲಿ ಎಸ್. ನಾಯ್ಕ ಅವರು ಶ್ರದ್ಧಾ-ಭಕ್ತಿಯಿಂದ ಹೋಮ-ಹವನಗಳಲ್ಲಿ ಪಾಲ್ಗೊಂಡು ಗುರುಗಳ ಆಶೀರ್ವಾದ ಪಡೆದರು. ಫಲ-ಪುಷ್ಪ ಸಮರ್ಪಿಸಿ ಗುರುಗಳನ್ನು ಗೌರವಿಸಿದ ಅವರು, ಗುರುಗಳ ಕೃಪೆ ಸರ್ವರ ಮೇಲಿರಲಿ ಎಂದು ಪ್ರಾರ್ಥಿಸಿದರು.

 ಇದನ್ನೂ ಓದಿ/ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಪಾತಿದೋಣಿ ಮಗುಚಿ ಮೀನುಗಾರ ಸಾವು