ಸುದ್ದಿಬಿಂದು ಬ್ಯೂರೋ ವರದಿ
ಜೋಯಿಡಾ : ತಾಲೂಕಿನ ಗಣೇಶಗುಡಿ ಸಮೀಪದ ಸಿಲ್ವರ್ ಬಿಲ್ ರೆಸಾರ್ಟ್ ಬಳಿ ನಡೆದ ದುರ್ಘಟನೆಯಲ್ಲಿ ರಾಫ್ಟಿಂಗ್‌ಗೆ ಬಂದಿದ್ದ ಪ್ರವಾಸಿಗನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.

ವಿಜಯವಾಡ ಮೂಲದ ಮಹೇಶ್ (27) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಕಾಳಿ ನದಿಯಲ್ಲಿ ರಾಫ್ಟಿಂಗ್ ಚಟುವಟಿಕೆ ನಡೆಯುತ್ತಿದ್ದ ವೇಳೆ ರೆಸಾರ್ಟ್ ಬಳಿ ಅಳವಡಿಸಲಾಗಿದ್ದ ನೀರಿನ ಪಂಪ್ ಸೆಟ್‌ನಿಂದ ವಿದ್ಯುತ್ ಪ್ರವಹಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮಹೇಶ್ ತನ್ನ ಸ್ನೇಹಿತರಾದ ಸಾಫ್ಟ್‌ವೇರ್ ಎಂಜಿನಿಯರ್‌ಗಳ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದರು ಎನ್ನಲಾಗಿದೆ.

ರಾಫ್ಟಿಂಗ್ ವೇಳೆ ಮಹೇಶ್ ಪಂಪ್ ಸೆಟ್ ಸಮೀಪದಲ್ಲಿದ್ದಾಗ ವಿದ್ಯುತ್ ಶಾಕ್ ತಗುಲಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ವೇಳೆ ಜೊತೆಯಲ್ಲಿದ್ದ ಇನ್ನೂ ನಾಲ್ವರು ಪ್ರವಾಸಿಗರಿಗೂ ವಿದ್ಯುತ್ ಶಾಕ್ ಅನುಭವವಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ರಾಮನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುರ್ಘಟನೆಯ ನಿಖರ ಕಾರಣ ಕುರಿತು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ/ ಜೈಲಿನಲ್ಲಿ ನಟ ದರ್ಶನ್ ಆತ್ಮಹತ್ಯೆ ‌ವದಂತಿ