ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ರೋಟರಿ ಕ್ಲಬ್ ಶಿರಸಿ, ತೋಟಗಾರಿಕಾ ಇಲಾಖೆ ಹಾಗೂ ಮಧು ಬೀ ನರ್ಸರಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜೇನು ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ಜೇನು ಕೃಷಿ ತರಬೇತಿ ಕಾರ್ಯಾಗಾರವು ಶನಿವಾರ ರೋಟರಿ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಜೇನು ಸಾಕಾಣಿಕೆಯ ಮಹತ್ವ, ಜೇನು ಉತ್ಪಾದನೆ, ಪರಾಗಸ್ಪರ್ಶದ ಉಪಯೋಗಗಳು ಹಾಗೂ ಜೇನು ಸಾಕಾಣಿಕೆಯಿಂದ ಗ್ರಾಮೀಣ ಆರ್ಥಿಕತೆಗೆ ದೊರೆಯುವ ಲಾಭಗಳ ಕುರಿತು ತಜ್ಞರು ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಬಿ.ಪಿ. ಸತೀಶ್ ಮಾತನಾಡಿ, ಪ್ರಕೃತಿಯಲ್ಲಿ ಜೇನುನೊಣಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು. ಒಂದು ಕೀಟಕ್ಕೆ ವಿಶೇಷ ದಿನಾಚರಣೆ ಆಚರಿಸಲಾಗುತ್ತಿರುವುದು ಪರಿಸರ ಮತ್ತು ಮಾನವ ಜೀವನಕ್ಕೆ ಅದರ ಕೊಡುಗೆ ಎಷ್ಟೊಂದು ಅಮೂಲ್ಯವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ಜೇನುನೊಣಗಳು ಪರಾಗಸ್ಪರ್ಶದ ಮೂಲಕ ಜೀವ ವೈವಿಧ್ಯತೆ ಸಂರಕ್ಷಣೆ ಹಾಗೂ ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಅವರು ಹೇಳಿದರು. ದೇಶದಲ್ಲಿ ಹಸಿರು ಕ್ರಾಂತಿ, ಶ್ವೇತ ಕ್ರಾಂತಿ, ನೀಲಿ ಕ್ರಾಂತಿ ನಡೆದಂತೆ ಜೇನು ಉತ್ಪಾದನೆ ಮತ್ತು ಜೇನು ಸಾಕಾಣಿಕೆಗೆ ಸಂಬಂಧಿಸಿದ “ಸಿಹಿ ಕ್ರಾಂತಿ” ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಆಯುರ್ವೇದ ಔಷಧ ತಯಾರಿಕೆಯಲ್ಲಿ ಜೇನುತುಪ್ಪದ ಬಳಕೆ ಹೆಚ್ಚಿದ್ದು, ಅದರಲ್ಲಿ ಇರುವ ಕಾರ್ಬೋಹೈಡ್ರೇಟ್ಗಳು, ವಿಟಮಿನ್ಗಳು, ಖನಿಜಾಂಶಗಳು ಹಾಗೂ ಉತ್ಕರ್ಷಣ ನಿರೋಧಕ ಗುಣಗಳು ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿವೆ ಎಂದು ವಿವರಿಸಿದರು. ಜೊತೆಗೆ ತೋಟಗಾರಿಕೆ ಇಲಾಖೆಯಿಂದ ಜೇನು ಸಾಕಾಣಿಕೆಗೆ ನೀಡಲಾಗುತ್ತಿರುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸತೀಶ್ ಹೆಗಡೆ ಮಾತನಾಡಿ, ಜೇನಿನ ವಿವಿಧ ತಳಿಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಹವಾಮಾನಕ್ಕೆ ಸೂಕ್ತವಾದ ಜೇನುನೊಣ ತಳಿಗಳ ಸಾಕಾಣಿಕೆ ಕುರಿತು ವಿವರಿಸಿದರು. ವಿಶೇಷವಾಗಿ ತುಡವೆ ಜೇನು ಸಾಕಾಣಿಕೆಯ ಮಹತ್ವ, ಅದರ ವೈಶಿಷ್ಟ್ಯಗಳು ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ ಜೇನು ಉತ್ಪಾದನೆ ಕುರಿತು ಸಮಗ್ರ ಮಾಹಿತಿ ನೀಡಿದರು. ಕೃಷಿ ಬೆಳೆಗಳ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸುವಲ್ಲಿ ಜೇನುನೊಣಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆಯಾದ ಡಾ. ರೂಪಾ ಎಸ್. ಪಾಟೀಲ್ ಜೇನಿನ ಮಹತ್ವ, ಜೇನು ಸಾಕಾಣಿಕೆಯ ನಿರ್ವಹಣೆ ಹಾಗೂ ಆರೋಗ್ಯಪರ ಉಪಯೋಗಗಳ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಡಾ. ಮಧುಕೇಶ್ವರ ಹೆಗಡೆ ಅವರು ಜೇನು ಸಾಕಾಣಿಕೆಯ ಮಹತ್ವ ಹಾಗೂ ಅದರ ಆಧುನಿಕ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ತಮ್ಮ ಉಪನ್ಯಾಸದಲ್ಲಿ ಜೇನು ಪೆಟ್ಟಿಗೆಯ ಬಿಡಿಭಾಗಗಳ ಪರಿಚಯ, ಪ್ರಾಥಮಿಕ ಜೇನು ಸಾಕಾಣಿಕೆ ವಿಧಾನಗಳು, ಜೇನು ಕುಟುಂಬದ ರಚನೆ, ಜೇನು ಗೂಡು ಪಾಲು ಮಾಡುವ ವಿಧಾನ ಹಾಗೂ ಜೇನು ಗೂಡುಗಳಿಗೆ ಬರುವ ವಿವಿಧ ರೋಗಗಳು ಮತ್ತು ಅವುಗಳ ಹತೋಟಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.
ಇದೇ ವೇಳೆ ಜೇನು ಸಾಕಾಣಿಕೆಯಿಂದ ರೈತರಿಗೆ ದೊರೆಯುವ ಆರ್ಥಿಕ ಪ್ರಯೋಜನಗಳು, ಜೇನು ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆ ಹಾಗೂ ಜೇನಿನ ಉಪ ಉತ್ಪನ್ನಗಳಾದ ಪರಾಗ, ರಾಯಲ್ ಜೆಲ್ಲಿ, ಬೀ ವೇನಮ್, ಜೇನು ಮೇಣ ಇತ್ಯಾದಿಗಳ ಉಪಯೋಗಗಳ ಕುರಿತು ಮಾಹಿತಿ ನೀಡಿದರು.
ಜೇನಿನಿಂದ ಮಾಡುವ ಚಿಕಿತ್ಸಾ ವಿಧಾನವಾದ ಎಪಿಥೆರಪಿ ಕುರಿತು ತಿಳಿಸಿದ ಅವರು, ಜೇನು ಉತ್ಪನ್ನಗಳ ಮೌಲ್ಯ ವರ್ಧನೆ ಮೂಲಕ ಹೆಚ್ಚುವರಿ ಆದಾಯ ಗಳಿಸುವ ಸಾಧ್ಯತೆಗಳನ್ನೂ ವಿವರಿಸಿದರು. ಈ ಸಂದರ್ಭದಲ್ಲಿ ಲಿಪ್ ಬಾಮ್, ಲಿಪ್ ಸ್ಟಿಕ್, ಹನಿ ಡಿಪ್ಡ್ ಆಮ್ಲಾ, ಬೀ ವೇನಮ್ ಆಯಿಲ್, ಬೀ ಪೋಲೆನ್ ಸೋಪ್, ಹನಿ ಕೋಕಂ, ಹನಿ ಜಾಮ್, ಲೆಮನ್ ಜಿಂಜರ್ ಹನಿ ಹಾಗೂ ಬ್ರಾಹ್ಮಿ ಹನಿ ಮೊದಲಾದ ಉತ್ಪನ್ನಗಳ ತಯಾರಿಕಾ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಚೀಟಿ ಎತ್ತುವ ಮೂಲಕ 10 ಜೇನು ಪೆಟ್ಟಿಗೆಗಳನ್ನು ಉಚಿತವಾಗಿ ವಿತರಿಸಲಾಯಿತು.
ಹಾಗೂ ಎಲ್ಲಾ ಶಿಬಿರಾರ್ಥಿ ಗಳಿಗೆ ಜೇನು ತರಬೇತಿ ಪ್ರಶಸ್ತಿ ಪತ್ರ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಶ್ರೀನಿವಾಸ ನಾಯ್ಕ್ ಎಲ್ಲರನ್ನು ಸ್ವಾಗತಿಸಿ ಜೇನು ಕೃಷಿಯ ಮಹತ್ವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ತೋಟಗಾರಿಕೆ ಸಹಾಯಕ ನಿರ್ದೇಶಕ ಗಣೇಶ್ ಹೆಗಡೆ, ವಿನಾಯಕ್ ಶೇಟ್, ಸತೀಶ್ ಭಟ್, ಇನ್ನರ್ವ್ಹೀಲ್ ಅಧ್ಯಕ್ಷೆ ವಿದ್ಯಾ ನಾಯ್ಕ್ ಹಾಗೂ ಸಂಧ್ಯಾ ನಾಯ್ಕ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು, ರೋಟರಿ ಹಾಗೂ ಇನ್ನರ್ವ್ಹೀಲ್ ಸದಸ್ಯರು ಸೇರಿದಂತೆ ನೂರಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ರೋಟರಿ ಕಾರ್ಯದರ್ಶಿ ಹರೀಶ್ ಹೆಗಡೆ ವಂದನಾರ್ಪಣೆ ಗೈದರು.
ಇದನ್ನೂ ಓದಿ/ಜೈಲಿನಲ್ಲಿ ನಟ ದರ್ಶನ್ ಆತ್ಮಹತ್ಯೆ ವದಂತಿ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ

