ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪ್ರಾಧಿಕಾರದ ಎಡವಟ್ಟಿನಿಂದ ಪ್ರತಿಭಾವಂತ ಅಂಧ ವಿದ್ಯಾರ್ಥಿನಿಯೊಬ್ಬಳು ಅನ್ಯಾಯಕ್ಕೆ ಒಳಗಾದ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬೆಳಕಿಗೆ ಬಂದಿದೆ.

ಶಿರಸಿ ತಾಲೂಕಿನ ಇಂದಿರಾ ನಗರದ ಯುನಿಯನ್ ಉರ್ದು ಫ್ರೌಢಶಾಲೆಯ ವಿದ್ಯಾರ್ಥಿನಿ ಲೀಸಾ ಖಾನಮ್ ಎಲ್ಲಾ ವಿಷಯಗಳ ಪರೀಕ್ಷೆಗೆ ಹಾಜರಾಗಿದ್ದರೂ, ಸೋಷಿಯಲ್ ಸೈನ್ಸ್ ಪರೀಕ್ಷೆಗೆ ‘ಗೈರು’ ಎಂದು ದಾಖಲಾಗಿರುವುದರಿಂದ ಫಲಿತಾಂಶದಲ್ಲಿ ಅನ್ಯಾಯವಾಗಿ ಫೇಲ್ ಆಗಿದ್ದಾರೆ.

ಲೀಸಾ ಖಾನಮ್ ಕನ್ನಡದಲ್ಲಿ 100, ಇಂಗ್ಲೀಷ್‌ನಲ್ಲಿ 92, ಎಕನಾಮಿಕ್ಸ್‌ನಲ್ಲಿ 98 ಮತ್ತು ಪೊಲಿಟಿಕಲ್ ಸೈನ್ಸ್‌ನಲ್ಲಿ 92 ಅಂಕಗಳನ್ನು ಪಡೆದು ಒಟ್ಟು 526 ಅಂಕಗಳೊಂದಿಗೆ 84.16% ಗಳಿಸಿದ್ದಾಳೆ. ಆದಾಗ್ಯೂ, ಸೋಷಿಯಲ್ ಸೈನ್ಸ್ ಪರೀಕ್ಷೆಯನ್ನು ಗೈರು ಎಂದು ನಮೂದಾಗಿದೆ

ಪರೀಕ್ಷೆಗೆ ಹಾಜರಾಗಿದ್ದುದಕ್ಕೆ ದೃಢೀಕರಣವಾಗಿ ಪ್ರವೇಶ ಪತ್ರದ ಮೇಲೆ ಮೇಲ್ವಿಚಾರಕರ ಸಹಿ ಇರುವುದನ್ನೇ ಲೀಸಾ ತೋರಿಸುತ್ತಿದ್ದಾಳೆ. “ನಾನು ಎಲ್ಲಾ ಪರೀಕ್ಷೆಗಳಿಗೂ ಹಾಜರಾಗಿದ್ದೇನೆ. ಆದರೆ ಸೋಷಿಯಲ್ ಸೈನ್ಸ್‌ನಲ್ಲಿ ಗೈರು ಎಂದು ತೋರಿಸಿರುವುದು ನನಗೆ ತುಂಬಾ ನೋವು ತಂದಿದೆ,” ಎಂದು ಆಕೆ ಕಣ್ಣೀರಿಟ್ಟುಕೊಂಡು ಹೇಳಿಕೊಂಡಿದ್ದಾಳೆ.

ಈ ಘಟನೆ ಪರೀಕ್ಷಾ ಪ್ರಾಧಿಕಾರದ ಕಾರ್ಯವೈಖರಿಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕಿದೆ. ಶಾಲಾ ಆಡಳಿತ ಮಂಡಳಿ
ಈ ಬಗ್ಗೆ ಪ್ರಾಧಿಕಾರಕ್ಕೆ ದೂರು ಸಲ್ಲಿಸಲು ಮುಂದಾಗಿದ್ದು, ಲೀಸಾ ಖಾನಮ್‌ಗೆ ನ್ಯಾಯ ಸಿಗುವ ವಿಶ್ವಾಸ ವ್ಯಕ್ತಪಡಿಸಿದೆ.

ಇದನ್ನೂ ಓದಿ/SSL ಫಲಿತಾಂಶ: ಕುಮಟಾದ ದಿಶಾಂತ್ ನಾಯ್ಕ ರಾಜ್ಯಕ್ಕೆ ದ್ವಿತೀಯ ಸ್ಥಾನ