suddibindu.in
ಕಾರವಾರ : ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತವಾಗಿ 8 ದಿನ ಕಳೆದರೂ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ದುರ್ಘಟನಾ ಸ್ಥಳಕ್ಕೆ ಆಗಮಿಸದಿರುವುದು ಕ್ಷೇತ್ರದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಶಿರೂರು ದುರಂತಕ್ಕೆ ಮೂಲ ಕಾರಣವೇ ಐ.ಆರ್.ಬಿ. ಕಂಪೆನಿಯ ಅವೈಜ್ಞಾನಿಕ ಕಾಮಗಾರಿ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ನಮ್ಮ ಸಂಸದ ಕಾಗೇರಿ ಮಾತ್ರ ಮೌನಕ್ಕೆ ಶರಣಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.ಈ ಹಿಂದಿನ ಸಂಸದ, ಮಾತಾಡುವ ಗೊಂಬೆ ಎಂದೇ ಖ್ಯಾತರಾಗಿದ್ದ ಅನಂತಕುಮಾರ ಹೆಗಡೆ ಕೂಡ ಐ.ಆರ್.ಬಿ. ಕಂಪೆನಿಯ ವಿರುದ್ಧ ಮಾತಾಡಿದ್ದು ಅಷ್ಟಕಷ್ಟೇ. ಈ ಸಂಸದರ ಮೌನವೇ ಐ.ಆರ್.ಬಿ. ಕಂಪೆನಿಯ ಅವಾಂತರಕ್ಕೆ ಕಾರಣವಾಯಿತೇ ಎಂಬ ಪ್ರಶ್ನೆಯೂ ಈಗ ಜಿಲ್ಲೆಯ ಜನರನ್ನು ಕಾಡಲಾರಂಭಿಸಿದೆ.

ಇದನ್ನೂ ಓದಿ

ಸಂಸದ ಕಾಗೇರಿಯವರು ಸಂಸತ್ ಅಧಿವೇಶನದಲ್ಲಿದ್ದಾರೆ. ಅಲ್ಲಿ ಜಿಲ್ಲೆಯ ಶಿರೂರು ಘಟನೆ ಬಗ್ಗೆ ಮಾತಾಡಲು, ದನಿಯೆತ್ತಲು ಸಂಸದ ಕಾಗೇರಿಗೆ ಸಾಕಷ್ಟು ಅವಕಾಶ ಇತ್ತು. ಆದರೆ ಸಂಸದ ವಾಲ್ಮೀಕಿ ನಿಗಮದ ಹಗರಣದ ಬಾಲ ಹಿಡಿದು ಎಳೆದಾಡುತ್ತಿದ್ದಾರೆ. ಜನಪರ ಜನಪ್ರತಿನಿಧಿಗಳು ಇಲ್ಲವಾದ ಮೇಲೆ ಯಾವುದೇ ಸರ್ಕಾರ ಬಂದರೂ ಹಗರಣಗಳು ಸಾಮಾನ್ಯ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಹಗರಣಗಳಾಗಿವೆ. ಆದರೆ ಜನಪ್ರತಿನಿಧಿಯಾದವಗೆ ಕ್ಷೇತ್ರದ ಜನರ ಸಮಸ್ಯೆ ಬಗ್ಗೆ ಮಾತಾಡುವ ಆಸಕ್ತಿ ಇರಬೇಕು. ಆ ಕೆಲಸ ಸಂಸದ ಕಾಗೇರಿ ಮಾಡಿಲ್ಲ ಎಂದು ಕ್ಷೇತ್ರದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳಕ್ಕೆ ಬಂದ ಕೇರಳ ಸಂಸದ

ಶಿರೂರು ದುರಂತ ಸ್ಥಳದಲ್ಲಿ ಕೇರಳದ ಟ್ರಕ್ ಮತ್ತು ಅದರ ಚಾಲಕ ಸಿಲುಕಿದ್ದಾರೆ ಎಂದು ಗೊತ್ತಾದ ತಕ್ಷಣ ಅಲ್ಲಿನ ಜನಪ್ರತಿನಿಧಿಗಳು ಚಡಪಡಿಸಿದ್ದಾರೆ, ಅಕ್ಷರಶಃ ಮರುಗಿದ್ದಾರೆ, ನಮ್ಮ ನಾಗರಿಕ ಜೀವಂತ ಮರಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಅಲ್ಲಿನ ಶಾಸಕರು, ಸಂಸದರು ನೂರಾರು ಕಿಲೋ ಮೀಟರ್ ಪ್ರಯಾಣ ಮಾಡಿ ಖುದ್ದು ಸ್ಥಳಕ್ಕೆ ಬಂದು ಪರಿಸ್ಥಿತಿ ಅವಲೋಕಿಸಿದ್ದಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಸಂಸದ ಕಾಗೇರಿ ಮಾತ್ರ ಸ್ಥಳಕ್ಕೆ ಬಂದು ಸಂತ್ರಸ್ತರ ಕಷ್ಟ ಆಲಿಸದೇ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಸಂತ್ರಸ್ತರ ಸಂಬಂಧಿಗಳು ಆರೋಪಿಸುತ್ತಿದ್ದಾರೆ.

ಈಗಲಾದರೂ ಸಂಸದ ಕಾಗೇರಿ ಸ್ಥಳಕ್ಕೆ ಬಂದು ಸಂತ್ರಸ್ತರ ನೋವಿಗೆ ಸ್ಪಂದಿಸಿ, ಈ ದುರ್ಘಟನೆಗೆ ಮೂಲ ಕಾರಣೀಕರ್ತರಾದ ಅವೈಜ್ಞಾನಿಕ ಕಾಮಗಾರಿ ಮಾಡುತ್ತಿರುವ ಐ.ಆರ್.ಬಿ. ಕಂಪೆನಿ ವಿರುದ್ಧ ಗುಡುಗುತ್ತಾರೋ ಅಥವಾ ಐ.ಆರ್.ಬಿ. ಕಂಪೆನಿ ವಿರುದ್ಧ ಮಾತಾಡಿದರೆ ನಮ್ಮದೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಬೇಸರಿಸಿಕೊಳ್ಳುತ್ತಾರೆ ಎಂದು ಸುಮ್ಮನಾಗುತ್ತಾರೋ ಕಾದುನೋಡಬೇಕಿದೆ.