ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ(Karwar) : ಕೋಲಾರ ಜಿಲ್ಲೆಯ ಮುಳುಬಾಗಿಲು(Kolar students death)ತಾಲೂಕಿನ ಮುರಾರ್ಜಿ ದೇಸಾಯಿ ಶಾಲೆಯ 54ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಮುರುಡೇಶ್ವರಕ್ಕೆ (Murudeshwar) ಬಂದಿದ್ದು, ಇದರಲ್ಲಿ ನಾಲ್ವರು ವಿದ್ಯಾರ್ಥಿಗಳು ಸಮುದ್ರ ನೀರಲ್ಲಿ ಆಟವಾಡಲು ಹೋಗಿ ಸಾವನ್ನಪ್ಪಿದ್ದು,ವಿದ್ಯಾರ್ಥಿಗಳನ್ನು ಶಿಕ್ಷಕರೇ ಬಲಿ ಕೊಟ್ಟರೇ? ಎನ್ನುವ ಪ್ರಶ್ನೆ ಇದೀಗ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ರಾಜ್ಯಾದ್ಯಂತ ಇರುವ ಸರಕಾರಿ ಹಾಗೂ ಖಾಸಗಿ ಶಾಲೆಯ ಶೈಕ್ಷಣಿಕ ಪ್ರವಾಸವನ್ನು ವರ್ಷದ ಕೊನೆ ತಿಂಗಳಾಗಿರುವ ಡಿಸೆಂಬರ್ ನಲ್ಲಿ ಮುಗಿಸಬೇಕೆನ್ನುವ ಬಗ್ಗೆ ಶಿಕ್ಷಣ ಇಲಾಖೆಯ ಸುತ್ತೊಲೆಯಿದೆ. ಅದರಲ್ಲೂ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುವಾಗ ಅವರ ಸುರಕ್ಷತೆ ಕೂಡ ಶಿಕ್ಷಕರೇ ಹೊರಬೇಕಾಗುತ್ತದೆ. ಶಿಕ್ಷಕರ ಜವಾಬ್ದಾರಿ ಮತ್ತು ನಂಬಿಕೆ ಮೇಲೆ ಪಾಲಕರು ತಮ್ಮ ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕೆ (educational tour) ಕಳುಹಿಸುತ್ತಾರೆ.ಆದರೆ ಯಾವುದೇ ಪ್ರದೇಶಕ್ಕೆ ಪ್ರವಾಸಕ್ಕೆ ಹೋದರೂ ವಿದ್ಯಾರ್ಥಿಗಳನ್ನು ಅಪಾಯದ ಸ್ಥಳಕ್ಕೆ ಕರೆದೊಯ್ಯುವಂತಿಲ್ಲ. ಇದು ಶಿಕ್ಷಣ ಇಲಾಖೆಯ ಕಟ್ಟುನಿಟ್ಟಿನ ಆದೇಶ ಕೂಡ. ಆದರೆ ಮುರುಡೇಶ್ವರದಲ್ಲಿ ಆಗಿದ್ದೇ ಬೇರೆ.

ಮುಳಬಾಗಿಲಿಂದ ಮುರುಡೇಶ್ವರ ದೇವಾಲಯ ಪ್ರವಾಸ ಎಂದು ಪಾಲಕರಿಂದ ಒಪ್ಪಿಗೆ ಪಡೆದು ಇಲ್ಲಿಗೆ ಬಂದವರು ದೇವಸ್ಥಾನದ ಇತಿಹಾಸ, ಅದರ ಮಹಿಮೆ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯ ಮಾಡುವ ಬದಲು ಅಪಾಯಕಾರಿಯಾಗಿರುವ ಕಡಲಿಗೆ ವಿದ್ಯಾರ್ಥಿಗಳನ್ನು ಯಾಕೆ ಇಳಿಸಿದರು ಎನ್ನುವ ಬಗ್ಗೆ ಪಾಲಕರು ಇದೀಗ ಪ್ರಶ್ನಿಸುತ್ತಿದ್ದಾರೆ. ಅಪಾಯಕಾರಿ ಸಮುದ್ರದಲ್ಲಿ ಮಕ್ಕಳಿಗೆ ಆಟ ಆಡೋದಕ್ಕೆ ಬಿಟ್ಟಿದ್ದು ಯಾಕೆ? ಇನ್ನೂ ಸರಕಾರಿ ಬಸ್ ನಲ್ಲಿ ಪ್ರವಾಸಕ್ಕೆ ಹೋಗಬೇಕು ಎನ್ನುವ ನಿಯಮವಿದ್ದರೂ ಖಾಸಗಿ ಬಸ್‌ನಲ್ಲಿ ಪ್ರವಾಸಕ್ಕೆ ಬರುವ ಅನಿರ್ವಾಯತೆ ಏನಿತ್ತು..?

ಒಂದೆರಡು ವಿದ್ಯಾರ್ಥಿಗಳಾಗಿದ್ದರೆ ಹೇಗಾದರೂ ಅವರನ್ನು ನಿಯಂತ್ರಣ ಮಾಡಬಹುದು. ಆದರೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಮ್ಮೆಲೆ ಅಪಾಯಕಾರಿ ಸಮುದ್ರದಲ್ಲಿ ಈಜಾಡಲು ಬಿಟ್ಟರೆ ಏನಾಗಬಹುದು? ಎನ್ನುವುದರ ಬಗ್ಗೆ ಶಿಕ್ಷಕರಾದವರು ಯೋಚನೆ ಮಾಡಬೇಕಿತ್ತಲ್ಲವೇ? ಅಲ್ಲದೆ ನಾವು ಬಂದಿರೋದು ದೇವಸ್ಥಾನ ಮತ್ತು ಸುಂದರ ಸ್ಥಳವನ್ನು ವೀಕ್ಷಣೆ ಮಾಡೋದಕ್ಕೆ ಎನ್ನುವುದನ್ನು ತಿಳಿದುಕೊಂಡಿದ್ದರೆ ಈ ರೀತಿ ದುರಂತ ನಿಜಕ್ಕೂ ಸಂಭವಿಸುತ್ತಿರಲ್ಲಿಲ್ಲವೇನೋ. ಏನೇ ಇರಲಿ, ಯಾರದೋ ಮನೆಯ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಮುನ್ನ ಶಿಕ್ಷಕರಾದವರು ನೂರು ಬಾರಿ ಯೋಚಿಸಿದರೂ ಕಡಿಮೆನೇ ಎನ್ನುವುದಕ್ಕೆ ಮುರುಡೇಶ್ವರದ ಘಟನೆ ಪಾಠವಾಗಿದೆ.

ಇನ್ನಾದರೂ ಪ್ರವಾಸೋದ್ಯಮ ಇಲಾಖೆ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಹಾಗೂ ಮಕ್ಕಳ ಹಿತ ಕಾಪಾಡುವ ಎಲ್ಲ ಇಲಾಖೆಗಳು ಎಚ್ಚೆತ್ತುಕೊಂಡು ಮುಂದೆಂದೂ ಇಂತಹ ಅನಾಹುತ ಆಗದಂತೆ ಜಾಗೃತಿ ವಹಿಸಬೇಕಿದೆ..

ಆರು ಮಂದಿ ವಿರುದ್ದ ಎಫ್ ಐಆರ್
ವಿದ್ಯಾರ್ಥಿಗಳನ್ನ ಪ್ರವಾಸಕ್ಕೆ ಕರೆತಂದ ಸಂದರ್ಭದಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿರೋ ಕಾರಣಕ್ಕೆ ಶಿಕ್ಷಕರ ನಿರ್ಲಕ್ಷ್ಯ ಎಂಬ ಕಾರಣಲ್ಲಿ ಮುಳುಬಾಗಿಲು ಮುರಾರ್ಜಿ ದೇಸಾಯಿ ಶಾಲೆಯ ಪ್ರಿನ್ಸಿಲ್‌ಪಾಲ ಶಶಿಕಲಾ ,ಅತಿಥಿ ಶಿಕ್ಷಕರಾದ ಸುನೀಲ್ ರಾಮಕೃಷ್ಣಪ್ಪ, ಶಾರದಮ್ಮ ಸಿ ಎನ್, ಚೌಡಪ್ಪ ಎಸ್, ವಿಶ್ವನಾಥ ಸೋಮಣ್ಣ, ನರೇಶ ಕೆ ಎಂಬವರ ಮೇಲೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ…

ಗಮನಿಸಿ