ಸುದ್ದಿಬಿಂದು ಬ್ಯೂರೋ
ಭಟ್ಕಳ: ತಾಲೂಕಿನ ಮುಂಡಳ್ಳಿ ಜೋಗಿ ಮನೆ ಸಮೀಪ ಮನೆಯಲ್ಲಿದ್ದ ಒಂಟಿ ವೃದ್ಧೆಯನ್ನು ಟಾರ್ಗೆಟ್ ಮಾಡಿ ಕೊಲೆಗೆ(Attempted murder of an old woman) ಯತ್ನಿಸಿದ ಆರೋಪಿಯನ್ನು 48ಗಂಟೆಯೊಳಗಾಗಿ ಬಂಧಿಸುವಲ್ಲಿ ಭಟ್ಕಳ ಗ್ರಾಮೀಣ ಠಾಣೆ(Bhatkal Police)ಪೊಲೀಸರು ಯಶಸ್ವಿಯಾಗಿದ್ದಾರೆ.
ಶುಕ್ರಯ್ಯ ನಾರಾಯಣ ದೇವಾಡಿಗ ಎಂಬಾತನೆ ಬಂಧಿತ ಆರೋಪಿ.ಈತ ವೃದ್ದೆಯ ಪರಿಚಯಸ್ತನಾಗಿದ್ದನು. ವೃದ್ಧೆಯ ಮಗ ಉಡುಪಿಯಲ್ಲಿರುವುದರಿಂದ ವೃದ್ಧೆಯ ಮನೆಗೂ ಇತನಿಗೂ ಓಡನಾಟ ಹೆಚ್ಚಿದ್ದು ಮನೆಯ ತೋಟದ ಕೆಲಸ ಹಾಗೂ ವೃದ್ಧೆಗೆ ಸಣ್ಣ ಪುಟ್ಟ ಸಹಾಯ ಮಾಡುತ್ತಿದ್ದ.ಇದನ್ನೇ ನೆಪವಾಗಿಟ್ಟುಕೊಂಡು ಯಾರಿಗೂ ತಿಳಿಯದಂತೆ ವೃದ್ಧೆಯ ಮನೆಯ ಕಪಾಟಿನಲ್ಲಿದ್ದ ಬಂಗಾರದ ಆಭರಣನ್ನ ಸಲೀಸಾಗಿ ಕದ್ದು ಭಟ್ಕಳದ ಖಾಸಗಿ ಫೈನಾನ್ಸ್ ಒಂದರಲ್ಲಿ ವತ್ತೆ ಇಡಲು ಹೋದ ವೇಳೆ ಆರೋಪಿ ಬೆರಳಚ್ಚು ಬರದ ಕಾರಣ ಆತನ ಸ್ನೇಹಿತನ ಹೆಸರಿನಲ್ಲಿ ಆಭರಣಗಳನ್ನು ಅಡವಾಗಿಟ್ಟು ಅದೇ ಸ್ನೇಹಿತನ ಹೆಸರಿನಲ್ಲಿ ಹೊಸ ಬೈಕ್ ಖರೀದಿ ಮಾಡಿ ಸ್ನೇಹಿತನಿಗೆ 60ಸಾವಿರ ಹಣವನ್ನು ಸಾಲವಾಗಿ ನೀಡಿದ್ದ.
ಮನೆಯಲ್ಲಿ ಚಿನ್ನಾಭರಣ ನಾಪತ್ತೆಯಾಗಿರುವುದು ವೃದ್ಧೆಗೆ ತಿಳಿದಿದ್ದರು ಈ ಬಗ್ಗೆ ಪೊಲೀಸ ಠಾಣೆಯಲ್ಲಿ ಯಾವುದೇ ದೂರು ನೀಡಲು ಮುಂದಾಗಿರಲಿಲ್ಲ. ನಂತರ ಆರೋಪಿ ಬೈಕ್ ಖರೀದಿಸಿರುವುದು ವೃದ್ಧೆಗೆ ತಿಳಿದು ಆರೋಪಿ ಬಳಿ ಪದೇ ಪದೇ ಹಣವಿಲ್ಲ ಎಂದು ಹೇಳುತ್ತಿದ್ದವನು ಹೇಗೆ ಬೈಕ್ ಖರೀದಿ ಮಾಡಿದೆ ಎಂದು ಪ್ರಶ್ನೆ ಮಾಡಿದ್ದಳು. ಇದನ್ನು ಗಮನಿಸಿದ ಆರೋಪಿ ಒಂದಲ್ಲ ಒಂದು ದಿನ ಇದು ನನಗೆ ಸಮಸ್ಯೆ ಉಂಟಾಗ ಬಹುದೆಂದು ತಿಳಿದು ವೃದ್ಧೆಯ ಸಾವಿಗೆ ಸಂಚು ರೂಪಿಸಿ ಯಾವುದೇ ಅನುಮಾನ ಬಾರದಂತೆ ಸಹಜವಾಗಿ ಸಾಯಿಸುವ ರೀತಿಯಲ್ಲಿ ಟಿವಿ ನೋಡುತ್ತಿದ್ದ ವೃದ್ಧೆಯ ಮುಖಕ್ಕೆ ಬಟ್ಟೆ ಸುತ್ತಿ ಉಸಿರು ಗಟ್ಟಿಸಿ ಸಾಯಿಸಲು ಯತ್ನಿಸಿದಾಗ ವ್ರದ್ದೆ ಕಿರುಚಿಕೊಂಡ ವೇಳೆ ಅಲ್ಲಿಂದ ಓಡಿ ಪರಾರಿಯಾಗಿದ್ದ.
ಬಳಿಕ ಘಟನೆ ತಿಳಿದು ಮನೆಯ ಅಕ್ಕ ಪಕ್ಕದವರು ಬಂದು ನೋಡಿದಾಗ ಈತ ಕೂಡ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ವಾಪಸ್ ಬಂದು ವೃದ್ಧೆಯ ಕ್ಷೇಮ ವಿಚಾರಿಸಿದ್ದಾನೆ. ಆ ವೇಳೆಯಲ್ಲಿ ವ್ರದ್ದೆ ಇದೆ ರೀತಿ ಬಟ್ಟೆ ಧರಿಸಿದವನು ನನ್ನ ಸಾವಿಗೆ ಯತ್ನಿಸಿದ್ದ ಎಂದು ಹೇಳಿದಾಗ ಆರೋಪಿ ಅಣ್ಣಾ ನನ್ನ ತಮ್ಮನ ಮೇಲೆ ಅನುಮಾನ ಪಡುತ್ತಿದ್ದಿರ ಎಂದು ಗಲಾಟೆ ಮಾಡಿ ಹೋಗಿದ್ದ
.ನಂತರ ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಸಿ.ಪಿ.ಐ ಚಂದನ್ ಗೋಪಾಲ ಹಾಗೂ ತಂಡ ತನಿಖೆ ಕೈಗೊಂಡಾಗ ಆರೋಪಿ ಘಟನೆ ನಡೆದ ರಾತ್ರಿ ಮುಂಡಳ್ಳಿ ಗುಡ್ಡದ ಮೇಲೆ ವಾಸವಾಗಿದ್ದ. ಬಳಿಕ ಆರೋಪಿಗಾಗಿ ಆತನ ಮನೆಯ ಅಂಗಡಿ ಸಮೀಪ ಹೊಂಚು ಹಾಕಿ ಕುಳಿತಿದ್ದ ಪೊಲೀಸರಿಗೆ ಮನೆಗೆ ಬರುತ್ತಿದ್ದ ಆರೋಪಿಯನ್ನು ಹಿಡಿದು ವಿಚಾರಣೆ ಮಾಡಿದಾಗ ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಆರೋಪಿವನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಕಾರವಾರದ ಕಾರಾಗೃಹದಲ್ಲಿಡಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ ಸಿಬ್ಬಂದಿಗಳಾದ ಮಂಜುನಾಥ ಗೊಂಡ , ಅಮಿತ್ ಶೇಖ್, ಈರಣ್ಣ ಪೂಜಾರಿ, ವಿನೋದ ಜಿಬಿ, ನಿಂಗನ ಗೌಡ ಪಾಟೀಲ್ ಹಾಗೂ ಚಾಲಕ ದೇವರಾಜ ಭಾಗವಹಿಸಿದ್ದರೆ