ಸುದ್ದಿಬಿಂದು ಬ್ಯೂರೋ
ಅಂಕೋಲಾ: ಚುನಾವಣಾ ಪ್ರಚಾರದ ಅಂಗವಾಗಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರದ ಅಂಗವಾಗಿ ಮೇ 3ರಂದು ಹಟ್ಟಿಕೇರಿ ಗ್ರಾಮದಲ್ಲಿ ನಡೆಯುವ ಬೃಹತ್ ಬಿಜೆಪಿ ಸಮಾವೇಶಲ್ಲಿ ಮೋದಿ ಅವರು ಪಾಲ್ಗೊಳ್ಳಲಿದ್ದು,ಅವರ ಆಗಮನಕ್ಕಾಗಿ ಭರ್ಜರಿ ತಯಾರಿ ನಡೆಸಲಾಗುತ್ತಿದೆ.

ಉತ್ತರಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇ 3ರಂದು ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹಟ್ಟಿಕೇರಿಯ ರಾಷ್ಟ್ರೀಯ ಹೆದ್ದಾರಿ 66ರ ಟೋಲ್ ಸಮೀಪದ ನೌಕಾನೆಗೆ ಸೇರಿದ್ದ ಸ್ಥಳದಲ್ಲಿ ಬೃಹತ್ ಬಿಜೆಪಿ ಸಮಾವೇಶ ಆಯೋಜನೆ ಮಾಡಲಾಗಿದೆ.
ಮೋದಿ ಆಗಮಿಸಲಿರುವ ಈ ಕಾರ್ಯಕ್ರಮದ ಸಿದ್ದತೆಗಾಗಿ ಮೈದಾನದಲ್ಲಿ ಹತ್ತಾರು ಜೆಸಿಬಿ ಸೇರಿದಂತೆ ಅನೇಕ ಯಂತ್ರಗಳ ಮೂಲಕ ಸ್ಥಳವನ್ನ ಸಮತ್ತಟ್ಟು ಮಾಡುವುದರ ಜೊತೆಗೆ ಬೃಹತ್ ಪ್ರಮಾಣದ ವೇದಿಕೆಯನ್ನ ಕೂಡ ಸಿದ್ದ ಪಡಿಸಲಾಗುತ್ತಿದೆ. ಸ್ಥಳದಲ್ಲಿ ನೂರಾರು ಕಾರ್ಮಿಕರು ಕಳೆದ ಮೂರ ನಾಲ್ಕು ದಿನಗಳಿಂದ ಈ ಮೈದಾನವನ್ನ ಸಿದ್ದಪಡಿಸಲು ದುಡಿಯುತ್ತಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಅವರು ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೋದಿ ಅವರು ಆಗಮಿಸಲಿರುವ ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಿಂದ 3ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮೋದಿ ಅವರ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಮೋದಿ ಆಗಮನಕ್ಕಾಗಿ ಸಿದ್ದತೆಗಳು ಮುಂದುವರೆದಿದೆ.