ಕಾರವಾರ : ಜಿಲ್ಲೆಯ ಪ್ರತಿ ಇಲಾಖೆಯಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರುಗಳಿಗೆ ಸರ್ಕಾರದ ಸೌಲಭ್ಯಗಳು ತಲುಪಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಜಿಲ್ಲಾ ಮಟ್ಟದ ಫಲಾನುಭವಿಗಳ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,ತಾಲೂಕ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯ ಸಾದಿಸಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಅವರುಗಳಿಗೆ ಫಲಾನುಭವಿಗಳ ಸಮಾವೇಶದಲ್ಲಿ ಸಂಬಂಧಪಟ್ಟ ಸೌಲಭ್ಯಗಳನ್ನು ಪೂರೈಸಲು ಕ್ರಮ ವಹಿಸುವಂತೆ ಸೂಚಿಸಿದರು. ಶೀಘ್ರದಲ್ಲಿಯೇ ಫಲಾನುಭವಿಗಳ ಸಮಾವೇಶದ ದಿನಾಂಕವನ್ನು ನಿಗದಿ ಪಡಿಸಲಾಗುವುದು ಆ ಸಮಯದಲ್ಲಿ ಸಂಬಂಧಿಸಿದ ಎಲ್ಲ ಫಲಾನುಭವಿಗಳಿಗೆ ಅಗತ್ಯತೆಗಳನ್ನು ಪೂರೈಸಲಾಗುವುದು ಎಂದರು.
ಈಗಾಗಲೇ ಜಿಲ್ಲೆಯಿಂದ ವಿವಿಧ ಇಲಾಖೆಗಳ ವಿವಿಧ ಯೋಜನೆಗಳಿಂದ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ಕೃಷಿ ಇಲಾಖೆಯಿಂದ 527, ತೋಟಗಾರಿಕೆ ಇಲಾಖೆಯಿಂದ148, ರೇಷ್ಮೆ ಇಲಾಖೆಯಿಂದ 06, ಅರಣ್ಯ ಇಲಾಖೆಯಿಂದ 349, ಶಿಕ್ಷಣ ಇಲಾಖೆಯಿಂದ 27, ಸಮಾಜ ಕಲ್ಯಾಣ ಇಲಾಖೆಯಿಂದ 19, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ 10, ಕೌಶಲ್ಯ ಇಲಾಖೆಯಿಂದ 72, ಪಶುಪಾಲನೆ ಇಲಾಖೆಯಿಂದ 123, ಕಾರ್ಮಿಕ ಇಲಾಖೆಯಿಂದ 1214,
ಕಂದಾಯ ಇಲಾಖೆಯಿಂದ 249, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 182, ಮೀನುಗಾರಿಕೆ ಇಲಾಖೆಯಿಂದ 226, ನರಭಿವೃದ್ಧಿ ಇಲಾಖೆಯಿಂದ 608, ಹೆಸ್ಕಾಂ ಇಲಾಖೆಯಿಂದ 7513, ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ 20438, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 192 ಹೀಗೆ ಒಟ್ಟು ವಿವಿಧ ಇಲಾಖೆಗಳಿಂದ 31903 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರೆ ಎಂದರು.