ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಗೋ ಹತ್ಯೆ ಪ್ರಕರಣವನ್ನ ಭೇದಿಸುವಲ್ಲಿ ಉತ್ತರ ಕನ್ನಡ ಪೊಲೀಸ್‌ರು ಯಶಸ್ವಿಯಾಗಿದ್ದಾರೆ. ಪ್ರಕರಣದ ಆರೋಪಿಗಳಲ್ಲಿ ಓರ್ವನ ಕಾಲಿಗೆ ಗುಂಡು ಹಾರಿಸಿದ್ದರೆ, ಇನ್ನೊಬ್ಬನನ್ನ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಪ್ರಮುಖ ಆರೋಪಿಗಳಿಬ್ಬರ ಹುಡುಕಾಟ ಚುರುಕುಗೊಳಿಸಿದ್ದು ಹುಡುಕಿ ಕೊಟ್ಟವರಿಗೆ 50ಸಾವಿರ ಬಹುಮಾನ ಘೋಷಣೆ ಮಾಡಲಾಗಿದೆ..

ಹೊನ್ನಾವರ ತಾಲೂಕಿನ ಕೊಂಡಕುಳಿ ಗ್ರಾಮದಲ್ಲಿ ನಡೆದಿದ್ದ ಗರ್ಭ ಧರಿಸಿದ್ದ ಹಸುವಿನ ಹತ್ಯೆ ಪ್ರಕರಣ ಇಡೀ ರಾಜ್ಯದಲ್ಲಿ ಸದ್ದು ಮಾಡಿತ್ತು. ಪ್ರಕರಣದ ಆರೋಪಿಗಳನ್ನ ಬಂಧಿಸುವಂತೆ ಸಾಕಷ್ಟು ಹೋರಾಟಗಳು ನಡೆದಿದ್ದವು. ಇನ್ನು ಪ್ರಕರಣದ ಹಿಂದೆ ಬಿದ್ದಿದ್ದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಆರೋಪಿಗಳನ್ನ ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಂಡಕುಳಿ ಗ್ರಾಮದಲ್ಲಿ ಮೇಯಲು ಬಂದಿದ್ದ ಹಸುವನ್ನ ಕಡಿದು ಭಟ್ಕಳದಲ್ಲಿ ಮದುವೆ ಸಮಾರಂಭದಲ್ಲಿ ಊಟಕ್ಕೆ ಬಳಕೆ ಮಾಡಲು ಆರೋಪಿಗಳು ನೀಡಿದ್ದರು. ಸುಮಾರು 400ಕ್ಕೂ ಅಧಿಕ ಜನರನ್ನ ಪೊಲೀಸರು ವಿಚಾರಣೆ ನಡೆಸಿ ಕೊನೆಗೂ ಹೊನ್ನಾವರ ತಾಲೂಕಿನ ಮಲ್ಕಿಯ ತೌಫಿಕ್ ಎನ್ನುವ ಆರೋಪಿಯನ್ನ ಬಂಧಿಸಿದ್ದಾರೆ.ಇನ್ನು ಹೊನ್ನಾವರ ತಾಲೂಕಿನ ಕಾಸರಕೋಡ ಫೈಝನ್ ಎನ್ನುವ ಆರೋಪಿಯನ್ನ ಸಹ ಬಂಧಿಸಿದ್ದು ಆರೋಪಿ ಹಸು ಕಡಿಯಲು ಬಳಸಿದ್ದ ಕತ್ತಿಯನ್ನ ವಶಕ್ಕೆ ಪಡೆಯಲು ಹೋದ ವೇಳೆಯಲ್ಲಿ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾಗಿದ್ದು ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಪ್ರಕರಣದಲ್ಲಿ ನಾಲ್ವರು ಆರೋಪಿಗಳಿದ್ದು ಇಬ್ಬರು ಹಿಂದೂ ಸಮಾಜದ ಆರೋಪಿಗಳು ಕೃತ್ಯಕ್ಕೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ಹೊನ್ನಾವರ ತಾಲೂಕಿನ ವಾಸಿಂ ಹಾಗೂ ಮುಜಾಮಿಲ್ ಎನ್ನುವವರು ಪ್ರಮುಖ ಆರೋಪಿಗಳಾಗಿದ್ದು ಇಬ್ಬರು ಪರಾರಿಯಾಗಿದ್ದಾರೆ.ಪೊಲೀಸರು ಈಗಾಗಲೇ ತಪ್ಪಿಸಿಕೊಂಡ ಇಬ್ಬರು ಆರೋಪಿಗಳ ಬಂಧನಕ್ಕೆ ಜಾಡು ಬೀಸಿದ್ದು ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೆ, ಅಥವಾ ಆರೋಪಿ ಹುಡುಕಿಕೊಟ್ಟಲ್ಲಿ 50ಸಾವಿರ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಆರೋಪಿಗಳು ಹಸು ಹಾಗೂ ಕರುವಿನ ಮಾಂಸವನ್ನ ಮಾಡಿ ಭಟ್ಕಳದ ಮದುವೆ ಸಮಾರಂಭಕ್ಕೆ ನೀಡಿದ್ದು ಅವರಿಂದ 7500 ಸಾವಿರ ಹಣವನ್ನ ಸಹ ಪಡೆದಿದ್ದರು.ಗೂಗಲ್ ಪೇ ಮೂಲಕ ಹಣ ಹಾಕಿಸಿಕೊಂಡ ದಾಖಲೆ ಪೊಲೀಸರಿಗೆ ಲಭ್ಯವಾಗಿದ್ದು ಸದ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ 6 ತಂಡಗಳನ್ನ ಮಾಡಿ ನಾಪತ್ತೆಯಾದ ಇಬ್ಬರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ. ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದ್ದ ಗೋ ಹತ್ಯೆ ಪ್ರಕರಣ ಭೇದಿಸುವಲ್ಲಿ ಪೊಲೀಸ್ ಯಶಸ್ವಿಯಾಗಿದ್ದಾರೆ.

ಇನ್ನಷ್ಟು ಸುದ್ದಿಗಾಗಿ