ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಹಳಿಯಾಳ ವಿಧಾನಸಭಾ ಕ್ಷೇತ್ರದ ಕೆಲ ಬಿಜೆಪಿ ಮುಖಂಡರ ತೀವ್ರ ವಿರೋಧದ ನಡುವೆಯೂ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ್ ಇಂದು ಜೆಡಿಎಸ್ ತೊರೆದು ಬಿಜೆಪಿ ಮನೆ ಸೇರಿದ್ದಾರೆ.
ಶಿರಸಿಯಲ್ಲಿ ಕೆಲವಿಷ್ಟು ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಘೋಟ್ನೇಕರ್ ಬಿಜೆಪಿ ಬಾವುಟ ಹಸ್ತಾಂತರಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಕಳೆದ ವಿಧಾಸಭಾ ಚುನಾವಣೆಯಲ್ಲಿ ಆರ್ ವಿ ದೇಶಪಾಂಡೆ ವಿರುದ್ಧ ಜೆಡಿಎಸ್ನಿಂದ ಸ್ಪರ್ಧೆ ಮಾಡಿ ಮೂರನೇ ಸ್ಥಾನಕ್ಕೆ ತಳ್ಳಲ್ಲಪಟ್ಟಿದ್ದರು.ಬಳಿಕ ಕ್ಷೇತ್ರದಲ್ಲಿ ಜೆಡಿಎಸ್ ಕಟ್ಟುವ ಪ್ರಯತ್ನವನ್ನ ಮಾಡದೆ ಸುಮ್ಮನಾಗಿದ್ದ ಘೋಟ್ನೇಕರ್ ಸತಾಯ,ಗತಾಯ ಪ್ರಯತ್ನ ಮಾಡಿ ಬಿಜೆಪಿ ಸೇರಿಕೊಂಡಿದ್ದು,ಕ್ಷೇತ್ರದ ಬಿಜೆಪಿಯಲ್ಲಿ ಇನ್ನಷ್ಟು ಭಿನ್ನಮತ ಸ್ಪೋಟಗೊಳ್ಳುವ ಸಾಧ್ಯತೆ ಇದೆ.
ಆರಂಭದಲ್ಲಿ ಕಾಂಗ್ರೆಸ್ನಲ್ಲಿ ಉಳಿದ್ದು ಅಲ್ಲಿ ಸಾಕಷ್ಟು ಅಧಿಕಾರ ಅನುಭವಿಸಿದ ಘೋಟ್ನೇಕರ್ ಬಳಿಕ ಆರ್ ವಿ ದೇಶಪಾಂಡೆ ವಿರುದ್ಧವೇ ಸಿಡಿದ್ದೆದ್ದು, ಹಳಿಯಾಳ ಕ್ಷೇತ್ರದಿಂದ ತನಗೆ ಟಿಕೆಟ್ ಕೊಡಬೇಕು ಅಂತಾ ಪಟ್ಟು ಹಿಡಿದ್ದರು. ಬಳಿಕ ಅದು ಸಾಧ್ಯವಾಗದೆ ಇದ್ದಾಗ ಕಾಂಗ್ರೆಸ್ ತೊರೆದು ಹೊರನಡೆದ ಘೋಟ್ನೇಕರ್ ಒಮ್ಮೆ ಸ್ಪರ್ಧೆ ಮಾಡಿ ಆರ್ ವಿ ದೇಶಪಾಂಡೆ ಹಾಗೂ ಬಿಜೆಪಿಯ ಸುನೀಲ್ ಹೆಗಡೆ ವಿರುದ್ಧ ಮತ್ತೆ ಸೋಲಬೇಕಾಗಿ ಬಂತು. ಕಳೆದ ಚುನಾವಣೆ ಸಮಯದಲ್ಲಿ ಸಹ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷದಲ್ಲಿಯೂ ಸಹ ಟಿಕೆಟ್ಗಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದು, ಆ ಎರಡು ಪಕ್ಷ ಮಣೆ ಹಾಕದೆ ಇರುವಾಗ ಕೊನೆಗಳಿಗೆಯಲ್ಲಿ ಜೆಡಿಎಸ್ ಸೇರಿ ಅಲ್ಲಿಯೂ ಸಹ ಸೋಲುವಂತಾಗಿತ್ತು. ಆದರೆ ಈಗ ಯಾವುದೇ ಚುನಾವಣೆ ಇಲ್ಲದೆ ಇರುವಾಗಲೇ ಬಿಜೆಪಿ ಸೇರಿಕೊಂಡಿದ್ದು, ಮುಂದಿನ ಭಾರೀ ಚುನಾವಣಾ ವೇಳೆ ಪ್ರಭಲ ಟಿಕೆಟ್ ಆಕಾಂಕ್ಷಿ ಆಗುವುದರಲ್ಲಿ ಎರಡು ಮಾತಿಲ್ಲ.
ದಶಕದಿಂದ ಈ ಕ್ಷೇತ್ರದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಪಕ್ಷ ಸಂಘಟನೆ ಜೊತೆಗೆ ಹತ್ತಾರು ಹೋರಾಟಗಳನ್ನ ಮಾಡುವ ಮೂಲಕ ಇಲ್ಲಿ ಬಿಜೆಪಿಗೆ ಶಕ್ತಿ ತುಂಬುವ ಕೆಲ ಸಹ ಮಾಡಿದ್ದರು.ಆದರೆ ರಾಜಕೀಯ ಗುಂಪುಗಾರಿಕೆಯಿಂದಾಗಿ ಘೋಟ್ನೇಕರ್ ಅವರನ್ನ ಈಗ ಪಕ್ಷಕ್ಕೆ ಬರ ಮಾಡಿಕೊಂಡಿರುವುದು ಮೂಲ ಬಿಜೆಪಿಗರ ಭಾರೀ ವಿರೋಧಕ್ಕೆ ಕಾರಣವಾಗಿದೆ. ಇದು ಮುಂದಿನ ದಿನದಲ್ಲಿ ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ ಎನ್ನುವ ಚರ್ಚೆ ಆರಂಭವಾಗಿದೆ.
ಗಮನಿಸಿ