ಸುದ್ದಿಬಿಂದು ಬ್ಯೂರೋ
ಹೊನ್ನಾವರ: ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೊಬ್ಬರ ವಿರುದ್ಧ ನಕಲಿ ಫೇಸ್ಬುಕ್ ತೆರೆದು ಅವಹೇಳನಕಾರಿ ಸಂದೇಶ ರವಾನಿಸಿದ ಈಬ್ಬರು ವ್ಯಕ್ತಿಗಳ ವಿರುದ್ಧ ಹೊನ್ನಾವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಭಟ್ಕಳ ಶಿರಾಲಿ ಗುಮ್ಮನಹಕ್ಕಲದ ಚಂದ್ರು ನಾಯ್ಕ, ಭಟ್ಕಳ ಮುರ್ಡೇಶ್ವರ ಜನತಾ ಕಾಲೋನಿಯ ನಾಗರಾಜ ನಾರಾಯಣ ಪಟಗಾರ ಇವರು ನಕಲಿ ಫೇಸ್ಬುಕ್ ತೆರೆದು ಅವಹೇಳನಕಾರಿ ಸಂದೇಶ ರವಾನಿಸಿದ್ದಾರೆಂದು ದೂರು ದಾಖಲಿಸಲಾಗಿದೆ. ಇವರು ಕಾವೇರಿ ನ್ಯೂಸ್' ಎಂಬ ನಕಲಿ ಪೇಸ್ಬುಕ್ ಖಾತೆಯನ್ನ ತೆರೆದು, ಅವಹೇಳನಕಾರಿ ಸಂದೇಶ ರವಾನಿಸಿದ್ದರು.
ಈ ಕುರಿತು ಹೊನ್ನಾವರ ಹಡಿನಬಾಳದ ರಮೇಶ ಮಂಜುನಾಥ ನಾಯ್ಕ ಅವರು ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದಾರೆ,
ನಮ್ಮ ಭಟ್ಕಳ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕರಾದ ಮಂಕಾಳು ವೈದ್ಯ ಇವರ ಕುಟುಂಬದ ಕುರಿತು ಅವಹೇಳನಕಾರಿಯಾದ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿರುತ್ತಾರೆ. ಆರೋಪಿತರು ಯಾವುದೋ ಮಹಿಳೆಯ ನೇಣು ಹಾಕಿಕೊಂಡ ಪೊಟೋವನ್ನು ಎಡಿಟ್ ಮಾಡಿ ಮಂಕಾಳ ವೈದ್ಯರವರು ತಮ್ಮ ಪತ್ನಿಯನ್ನು ಕೊಲೆ ಮಾಡಿ ನೇಣು ಹಾಕಿ ಆತ್ಮಹತ್ಯೆ ಎಂದು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುತ್ತಾರೆ.
ಈ ಆರೋಪಿತರು ಈ ಹಿಂದೆಯೂ ಹಲವು ಬಾರಿ ಮಂಕಾಳ ವೈದ್ಯ ಅವರ ಹೆಸರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೆಸರನ್ನು ಕೆಡಿಸುವ ಪ್ರಯತ್ನ ಸತತವಾಗಿ ಮಾಡುತ್ತಾ ಬಂದಿರುತ್ತಾರೆ. ಮುಂಬರುವ ವಿಧಾನ ಸಭಾ ಚುನಾವಣೆಯ ಸಂಧರ್ಭದಲ್ಲಿ ಮಂಕಾಳ ವೈದ್ಯರಿಗೆ ಹಾಗೂ ಮಂಕಾಳು ವೈದ್ಯರ ಅಭಿಮಾನಿ ಬಳಗಕ್ಕೆ ಹೆಸರನ್ನು ಕೆಡಿಸುವ ಹಾಗೂ ಅವರ ತೇಜೋವಧೆಯನ್ನು ಮಾಡುವ ಹುನ್ನಾರವನ್ನು ಆರೋಪಿತರು ಮಾಡುತ್ತಿದ್ದಾರೆ.
ಹೇಗಾದರೂ ಮಾಡಿ ಅವರ ಹೆಸರನ್ನು ಹಾಳು ಮಾಡಿ ಅವರಿಗೆ ಚುನಾವಣೆಯಲ್ಲಿ, ಹಿನ್ನಡೆಯನ್ನು ಉಂಟು ಮಾಡುವುದೇ ಆರೋಪಿತರ ಉದ್ದೇಶವಾಗಿರುತ್ತದೆ. ಈ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಹಡಿನಬಾಳದ ರಮೇಶ ಮಂಜುನಾಥ ನಾಯ್ಕ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.