ಸುದ್ದಿಬಿಂದು ಬ್ಯೂರೋ ವರದಿ

ಕಾರವಾರ: ತುಮಕೂರು ಸಮೀಪ ಕಾರಿನೊಳಗೆ ನಾಡಬಾಂಬ್ ಸ್ಫೋಟಿಸಿಕೊಂಡು ಅಂಕೋಲಾ ಮೂಲದ ನಾಗೇಂದ್ರ ಗೌಡ ಮೃತಪಟ್ಟ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ವಶಕ್ಕೆ ಪಡೆದ ನಾಲ್ವರಲ್ಲಿ ಮೂವರು ಮೃತ ನಾಗೇಂದ್ರ ಗೌಡನ ಸಂಬಂಧಿಕರಾಗಿದ್ದು, ಇವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸರಳೆಬೈಲ್ ಗ್ರಾಮದ ನಿವಾಸಿಗಳಾಗಿದ್ದಾರೆ. ಮತ್ತೋರ್ವನು ಹೊನ್ನಾವರ ತಾಲೂಕಿನವನಾಗಿದ್ದು, ನಾಗೇಂದ್ರ ಗೌಡನಿಗೆ ನಾಡಬಾಂಬ್ ಸಿದ್ಧಪಡಿಸಿ ನೀಡಿದ್ದಾನೆ ಎಂಬ ಶಂಕೆಯ ಮೇರೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣದಲ್ಲಿ ನಾಡಬಾಂಬ್ ತಯಾರಿಕೆ, ಸಾಗಾಟ ಹಾಗೂ ಪೂರೈಕೆಯ ಕುರಿತು ಮಾಹಿತಿ ಸಂಗ್ರಹಿಸಲು ಅಂಕೋಲಾ ಪೊಲೀಸರು ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದರು. ಅದರ ಫಲವಾಗಿ ನಾಲ್ವರನ್ನು ವಶಕ್ಕೆ ಪಡೆದು ಗೌಪ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಜೂನ್ 27ರಂದು ತುಮಕೂರು ಸಮೀಪ ಕಾರಿನೊಳಗೆ ನಾಡಬಾಂಬ್ ಸ್ಫೋಟಗೊಂಡ ಪರಿಣಾಮ ನಾಗೇಂದ್ರ ಗೌಡ ಮೃತಪಟ್ಟಿದ್ದ.

ಈ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದು, ಬಾಂಬ್ ಎಲ್ಲಿಂದ ತರಲಾಯಿತು, ಯಾರು ಸಿದ್ಧಪಡಿಸಿದರು ಹಾಗೂ ಪ್ರಕರಣದಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಿಚಾರಣೆಯ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಮಹತ್ವದ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ/ಕಾರವಾರದಲ್ಲಿ ಅಕ್ರಮ ಮದ್ಯ ಸಾಗಣೆ ಪತ್ತೆ: ಮದ್ಯ ಜಪ್ತಿ, ಆರೋಪಿ ಬಂಧನ