ಸುದ್ದಿಬಿಂದು ಬ್ಯೂರೋ ವರದಿ
ನವದೆಹಲಿ / ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮೂಲದ ಗೋಪಾಲರಾವ್ ಸೇರಿದಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಸಂಬಂಧಿಸಿದ ಮೂವರು ಪ್ರಮುಖರು ಮೂರು ದಿನಗಳೊಳಗೆ ಅಯೋಧ್ಯೆ ತೊರೆಯಬೇಕು ಎಂದು ಫೈಜಾಬಾದ್ ಬಾರ್ ಅಸೋಸಿಯೇಷನ್ ಗಡುವು ನೀಡಿದೆ.
ರಾಮ ಮಂದಿರ ದೇಣಿಗೆ ಹಣದ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೋಮವಾರ ನಡೆದ ಬಾರ್ ಅಸೋಸಿಯೇಷನ್ನ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದಂತೆ, ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಟ್ರಸ್ಟಿ ಅನಿಲ್ ಮಿಶ್ರಾ ಹಾಗೂ ಮಂದಿರದ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಗೋಪಾಲರಾವ್ ಅವರು ಮೂರು ದಿನಗಳೊಳಗೆ ಅಯೋಧ್ಯೆ ತೊರೆಯುವಂತೆ ಒತ್ತಾಯಿಸಲಾಗಿದೆ.
ನಿಗದಿತ ಅವಧಿಯೊಳಗೆ ಅವರು ನಗರ ತೊರೆಯದಿದ್ದರೆ ಅಯೋಧ್ಯೆ ಬಂದ್ಗೆ ಕರೆ ನೀಡಿ, ನಗರದ ಪ್ರಮುಖ ಪ್ರವೇಶ ಮಾರ್ಗಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ಪ್ರಕರಣದಲ್ಲಿ ಆರೋಪಿತರ ಪರ ಯಾವುದೇ ವಕೀಲರು ವಾದ ಮಂಡಿಸಬಾರದು ಎಂದು ಬಾರ್ ಅಸೋಸಿಯೇಷನ್ ತನ್ನ ಸದಸ್ಯರಿಗೆ ಸೂಚಿಸಿದೆ. ಈ ನಿರ್ಧಾರವನ್ನು ಉಲ್ಲಂಘಿಸಿದರೆ 5ಲಕ್ಷ ದಂಡ ವಿಧಿಸುವುದರ ಜೊತೆಗೆ ಸಂಘದಿಂದ ಶಾಶ್ವತವಾಗಿ ಹೊರಹಾಕುವ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಗೋಪಾಲರಾವ್ ಯಾರು?
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮೂಲದ ಗೋಪಾಲರಾವ್ ಅವರು ಅಯೋಧ್ಯೆ ರಾಮ ಮಂದಿರದ ನಿರ್ಮಾಣ ಮತ್ತು ಆಡಳಿತದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಆರ್ಎಸ್ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ಮೂಲಕ ಹಲವು ವರ್ಷಗಳಿಂದ ಸಂಘಟನಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ರಾಮ ಮಂದಿರ ನಿರ್ಮಾಣ ಪೂರ್ಣಗೊಂಡ ಬಳಿಕ ಅವರು ಮಂದಿರದ ಆಡಳಿತಾಧಿಕಾರಿ (Administrator) ಹಾಗೂ ವಿಶೇಷ ಆಹ್ವಾನಿತ ಸದಸ್ಯರಾಗಿ ದೈನಂದಿನ ಆಡಳಿತ ಮತ್ತು ನಿರ್ವಹಣೆಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.
ತನಿಖೆ ನಡೆಸುತ್ತಿರುವ ಪೊಲೀಸ್ ತಂಡಗಳ ಎಸ್ಬಿಐ, ಬ್ಯಾಂಕ್ ಆಫ್ ಬರೋಡಾ ಹಾಗೂ ಕೆನರಾ ಬ್ಯಾಂಕ್ನ ಸ್ಥಳೀಯ ಶಾಖೆಗಳಿಗೆ ಭೇಟಿ ನೀಡಿ ಆರೋಪಿಗಳಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳು, ಲಾಕರ್ಗಳು ಹಾಗೂ ಹಣಕಾಸು ದಾಖಲೆಗಳನ್ನು ಪರಿಶೀಲಿಸುತ್ತಿವೆ. ಬ್ಯಾಂಕ್ ಅಧಿಕಾರಿಗಳಿಂದಲೂ ಮಾಹಿತಿ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ.
ಟ್ರಸ್ಟ್ನೊಳಗೂ ಒತ್ತಡ
ಪ್ರಕರಣದ ಬಗ್ಗೆ ಹೆಚ್ಚುತ್ತಿರುವ ಒತ್ತಡದ ನಡುವೆ ನ್ಯಾಯಸಮ್ಮತ ತನಿಖೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಚಂಪತ್ ರೈ ಹಾಗೂ ಅನಿಲ್ ಮಿಶ್ರಾ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿರುವುದಾಗಿ ವರದಿಗಳು ತಿಳಿಸಿವೆ. ಭಕ್ತರು ಸಲ್ಲಿಸಿದ ನಗದು, ಚಿನ್ನ ಹಾಗೂ ಬೆಳ್ಳಿ ಕಾಣಿಕೆಗಳ ದುರುಪಯೋಗದ ಆರೋಪಗಳ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿ, ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿದೆ. ಕೆಲವರನ್ನು ಬಂಧಿಸಿ ವಿಚಾರಣೆ ಮುಂದುವರಿದಿದೆ.
ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್ ಹಾಗೂ ಅಲಹಾಬಾದ್ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿದ್ದು, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಹಾಗೂ ಸಿಎಜಿ (CAG) ಮೂಲಕ ಫೊರೆನ್ಸಿಕ್ ಆಡಿಟ್ಗೆ ಆದೇಶಿಸುವಂತೆ ಮನವಿಗಳು ಸಲ್ಲಿಕೆಯಾಗಿವೆ.
ಇದನ್ನೂ ಓದಿ /ಬಾಂಬ್ ಸ್ಫೋಟಿಸಿಕೊಂಡು ಪ್ರೇಮಿ ಆತ್ಮಹತ್ಯೆ ಪ್ರಕರಣ: ನಾಲ್ವರನ್ನು ವಶಕ್ಕೆ ಪಡೆದ ಅಂಕೋಲಾ ಪೊಲೀಸರು



