ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯಕ್ಕೆ ಗ್ರೇಡ್ ಬದಲು ಅಂಕ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ. ಮುಂದಿನ 2025-26ನೇ ಶೈಕ್ಷಣಿಕ ಸಾಲಿನಿಂದ ಹಿಂದಿ ವಿಷಯಕ್ಕೂ ಅಂಕ ನೀಡಬೇಕೆಂದು ನ್ಯಾಯಪೀಠ ಸ್ಪಷ್ಟ ನಿರ್ದೇಶನ ನೀಡಿದೆ.

ಈ ವಿಚಾರವಾಗಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಪೀಠ, ಪರೀಕ್ಷಾ ಅಧಿಸೂಚನೆ ಹೊರಬಂದ ನಂತರ ಮೌಲ್ಯಮಾಪನ ವಿಧಾನದಲ್ಲಿ ಬದಲಾವಣೆ ತರುವುದು ಸೂಕ್ತವಲ್ಲ ಎಂದು ಸರ್ಕಾರದ ಕ್ರಮವನ್ನು ಪ್ರಶ್ನಿಸಿದೆ. ನಿಯಮಗಳನ್ನು ಪೂರ್ವಭಾವಿಯಾಗಿ ರೂಪಿಸದೆ ಮಧ್ಯದಲ್ಲೇ ಗ್ರೇಡಿಂಗ್ ವ್ಯವಸ್ಥೆ ಜಾರಿಗೊಳಿಸುವುದು ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟಿದೆ.

ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ವಿದ್ಯಾರ್ಥಿಗಳ ಮೇಲೆ ಒತ್ತಡ ಕಡಿಮೆ ಮಾಡಲು ತೃತೀಯ ಭಾಷೆಗೆ ಗ್ರೇಡ್ ವ್ಯವಸ್ಥೆ ತರಲಾಗಿದೆ ಎಂದು ತಿಳಿಸಿದ್ದರು. ಆದರೆ ಈ ವಾದವನ್ನು ಪೀಠ ಸಮರ್ಪಕವಾಗಿ ಒಪ್ಪಲಿಲ್ಲ.ಹಿಂದಿ ವಿಷಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವ ಹಿನ್ನೆಲೆ, ಮೌಲ್ಯಮಾಪನ ಪದ್ಧತಿಯಲ್ಲಿ ಬದಲಾವಣೆ ತರಲು ಸರ್ಕಾರ ಯೋಚನೆ ನಡೆಸಿತ್ತು. ತೃತೀಯ ಭಾಷೆಯನ್ನು ಕೇವಲ ಅರ್ಹತಾ ವಿಷಯವನ್ನಾಗಿ ಪರಿಗಣಿಸುವ ಉದ್ದೇಶವೂ ವ್ಯಕ್ತವಾಗಿತ್ತು. ಇದಕ್ಕೆ ಶಿಕ್ಷಕರ ಸಂಘಗಳು ಹಾಗೂ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ತೃತೀಯ ಭಾಷೆಗೆ ಅಂಕ ನೀಡದಿದ್ದರೆ ವಿದ್ಯಾರ್ಥಿಗಳ ಆಸಕ್ತಿ ಕುಂಠಿತವಾಗುವ ಸಾಧ್ಯತೆ ಇದೆ. ಇದರಿಂದ ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಉದ್ಯೋಗಾವಕಾಶಗಳ ಮೇಲೂ ಪರಿಣಾಮ ಬೀರುತ್ತದೆ ಎಂಬ ಆತಂಕವೂ ವ್ಯಕ್ತವಾಗಿದೆ. ಇದೀಗ ಹೈಕೋರ್ಟ್ ಆದೇಶದಿಂದ ಮುಂದಿನ ಸಾಲಿನಿಂದ ಹಿಂದಿ ವಿಷಯಕ್ಕೂ ಅಂಕ ನೀಡುವುದು ಕಡ್ಡಾಯವಾಗಿದ್ದು, ಸರ್ಕಾರ ಹೊಸ ನಿಯಮಗಳನ್ನು ರೂಪಿಸಿದ ನಂತರ ಮಾತ್ರ ಯಾವುದೇ ಬದಲಾವಣೆಗಳನ್ನು ಜಾರಿಗೆ ತರಬಹುದು ಎಂಬುದು ಸ್ಪಷ್ಟವಾಗಿದೆ

ಇದನ್ನೂ ಓದಿ/ಏ. 25, ಏ.26 ಕ್ಕೆ ಅಮದಳ್ಳಿಯಲ್ಲಿ ವೈಶ್ಯ ಸಮಾಜದವರಿಗಾಗಿ ಬಂಟದೇವ ಕಪ್ 2026 ಕ್ರಿಕೆಟ್ ಟೂರ್ನಮೆಂಟ್