ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಕಾಂಗ್ರೆಸಿನ ಪ್ರಸನ್ನ ಶೆಟ್ಟಿಯವರ ಮಾತಿನಂತೆ ಕಳೆದ 30ವರ್ಷದ ಆಡಳಿತದ ಫಲವಾಗಿ ರಸ್ತೆಗಳು ಗುಂಡಿಬಿದ್ದಿದೆ ಎಂದಿದ್ದಾರೆ. ಅಂದರೆ ಅವರ ಮಾತಿನ ಪ್ರಕಾರ ಕಳೆದ 30 ವರ್ಷಗಳಿಂದ ಜಿಲ್ಲೆಯಲ್ಲಿ ಆಡಳಿತ ನಡೆಸಿರುವ ಅವರದ್ದೇ ಪಕ್ಷದ ಹಿರಿಯ ನಾಯಕರಾಗಿರುವ ಸನ್ಮಾನ್ಯ ದೇಶಪಾಂಡೆ ಅವರ ವಿರುದ್ಧ ನೀಡಿರುವ ಹೇಳಿಕೆಯಂತೆ ಭಾಸವಾಗುತ್ತಿದೆ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ತೀಕ್ಷಣವಾಗಿ ಆರೋಪಿಸಿದ್ದಾರೆ.
ಮೂರು ದಶಕಗಳಿಂದ ದೇಶಪಾಂಡೆ ಅವರು ಐದು ಬಾರಿ ಉಸ್ತುವಾರಿ ಸಚಿವರಾಗಿದ್ದವರು, ಅವರ ಬಣಕ್ಕೆ ಮತ್ತು ನಿಮ್ಮ ಬಣಕ್ಕೆ ಏನಾದರೂ ವೈಮನಸ್ಸಾಗಿದೆಯೇ? ಹಾಗೇನಾದರೂ ವೈಮನಸ್ಸಿದ್ದರೆ ನಿಮ್ಮಲ್ಲಿಯೇ ಚರ್ಚಿಸಿ ಬಗೆಹರಿಸಿಕೊಳ್ಳಿ, ನಿಮ್ಮ ಕಾಂಗ್ರೆಸ್ ಪಕ್ಷದ ಹಿರಿಯರ ಬಗ್ಗೆಯೇ ತಾವು ಸಾರ್ವಜನಿಕವಾಗಿ ಮಾತನಾಡುವುದು ಯೋಗ್ಯವಲ್ಲ. ಈ ಕುರಿತು ಹೇಳಿಕೆ ನೀಡಿರುವ ಅವರು, ದೇಶಪಾಂಡೆ ಅವರು ಉಸ್ತುವಾರಿ ಸಚಿವರಾಗಿದ್ದಾಗ ಅಭಿವೃದ್ಧಿ ಮಾಡಿಲ್ಲ ಎಂದು ನೀವು ಹೇಳುತ್ತಿದ್ದೀರಾ ? ಎರಡು ವರ್ಷದಿಂದ ಹೊಂಡ ಬಿದ್ದಿದೆ ಎಂದರೆ 30 ವರ್ಷದ ಮಾತನಾಡುವ ನಿಮಗೆ ಯಾವ ರಾಜಕೀಯದ ಪರಿಜ್ಞಾನ ಇದೆ..? ಹೊಂಡವನ್ನು ಮುಚ್ಚಿಸುವುದು ಶಾಸಕರ ಕರ್ತವ್ಯ ಅಲ್ಲವೇ..? ಗ್ರಾಮೀಣಾಭಿವೃದ್ಧಿ ರಸ್ತೆಗಳು ಶಿರಸಿಯಲ್ಲಿ ಒಂದು ಸಾವಿರದ ಆರುನೂರು ಕಿಲೋ ಮೀಟರ್ ಇದೆ, ಮತ್ತು ಪಿ ಡಬ್ಲ್ಯೂ ಡಿ ರಸ್ತೆಯನ್ನು ಕೂಡ ನಿರ್ವಹಣೆ ಮಾಡಬೇಕು, ಹೊಂಡವನ್ನು ಮುಚ್ಚಬೇಕಾಗಿದೆ. ದಿನಕ್ಕೊಬ್ಬರು ಹೊಂಡದಲ್ಲಿ ಬೀಳುತ್ತಿದ್ದಾರೆ ಅವರ ಜೀವಕ್ಕೆ ನೀವು ಹೊಣೆಗಾರರಾಗುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಶಿರಸಿ ನಗರ ಸಭೆಗೂ ಕೂಡ ಅನುದಾನವನ್ನು ಕೊಡುವುದನ್ನು ಮೂಲಕ ಹೊಂಡವನ್ನು ಮುಚ್ಚಿಸಬೇಕಾಗಿರುವುದು ಶಾಸಕರ ಕರ್ತವ್ಯ. ಹಾಗೆಯೇ ಶಿರಸಿಯಲ್ಲಿ ಇರುವ 145 ಬಸ್ಸ್ ಗಳಲ್ಲಿ 79 ಬಸ್ಸು ಗುಜರಿಗೆ ಹಾಕಲು ಯೋಗ್ಯವಾದ 10ಲಕ್ಷಕ್ಕೂ ಮೀರಿದ ಕಿಲೋಮೀಟರ್ ಓಡಿದ ಬಸ್ಸುಗಳನ್ನು ಬಿಡುತ್ತಿದ್ದಾರೆ. ಕೆಲವು ಬಸ್ಸು ಸೋರುತ್ತಿದೆ ಇದನ್ನ ಶಾಸಕರಾದವರು ಇಲಾಖೆಯವರನ್ನು ಕರೆದು ಸರಿ ಮಾಡಿಸಬೇಕು. ಶಾಸಕರು ಯಾವ ಸರ್ಕಾರದ ಭಾಗವಾಗಿದ್ದಾರೆ, ಯಾವ ಪಕ್ಷದ ವ್ಯಕ್ತಿಯಾಗಿದ್ದಾರೆ ಅನ್ನೋದನ್ನ ಅರ್ಥಮಾಡಿಕೊಳ್ಳಬೇಕು.
ಈ ರೀತಿ ದಿನಕ್ಕೊಂದು ಕಡೆ ಹಾಳಾಗುವ ಬಸ್ಸನ್ನು ಕೊಟ್ಟು ಕಳಿಸುತ್ತಿದ್ದೀರಿ, ಬಸ್ ರಿಪೇರಿ ಮಾಡಲು ನಿಮ್ಮಲ್ಲಿ ಮೆಕ್ಯಾನಿಕ್ ಕೊರತೆ ಇದೆ, ಇದನ್ನು ನೀವೇ ಒಪ್ಪಿಕೊಳ್ಳುತ್ತೀರಿ ಹಾಗಿದ್ದಾಗ ಆ ಬಸ್ಸಿನಲ್ಲಿ ಓಡಾಡುವ ನಮ್ಮ ಮಕ್ಕಳ ಗತಿ ಏನು ? ಏನಾದರೂ ಹೆಚ್ಚು ಕಮ್ಮಿ ಆದರೆ ಯಾರು ಜವಾಬ್ದಾರಿ ? ಇದನ್ನು ಶಾಸಕರು ಅರ್ಥ ಮಾಡಿಕೊಂಡು, ಇನ್ನಾದರೂ ಶಾಸಕರ ಜವಾಬ್ದಾರಿಯನ್ನ ಅರಿತು ಕೆಲಸ ಮಾಡಲಿ. ಎಂದು ಅವರು ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.
ಕಾಂಗ್ರೆಸ್ ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿರುವ ಪ್ರಸನ್ನ ಶೆಟ್ಟಿ ಅವರು ಸ್ವಲ್ಪ ಪ್ರಬುದ್ಧತೆಯಿಂದ ಮಾತನಾಡಲಿ, ಮಾತೆತ್ತಿದರೆ ನಗರಸಭೆ ವಿಚಾರ ಮಾತಾಡುತ್ತಾರೆ, ಪೈಪ್ ಹಗರಣದಲ್ಲಿ ಸುಮಾರು ಒಂದು ಲಕ್ಷದ ಎಂಬತ್ತು ಸಾವಿರ ರೂಪಾಯಿ ಹಣವನ್ನು ತನ್ನ ಅಕೌಂಟ್ ಗೆ ತೆಗೆದುಕೊಂಡ ಯಶ್ವಂತ್ ಮರಾಠಿ ಯಾವ ಪಕ್ಷದವನು? ಕಾಂಗ್ರೆಸ್ ಪಕ್ಷದವನು ಅಲ್ಲವೇ ಅದು ಬಿಟ್ಟು ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ನಿಮಗಿದೆಯೇ? ಅವನ ವಿರುದ್ಧ ತಮ್ಮ ಪಕ್ಷವೇನು ಕ್ರಮ ಕೈಗೊಂಡಿದೆ ? ಇನ್ನೊಬ್ಬರ ವಿರುದ್ಧ ಬೆಟ್ಟು ಮಾಡುವ ಮೊದಲು, ಜನತೆಯ ಹಿತಕ್ಕಾಗಿ, ಕ್ಷೇತ್ರದ ಅಭಿವೃದ್ಧಿಯ ಕಡೆಗೆ ತಮ್ಮ ಶಾಸಕರು ಕೆಲಸ ಮಾಡಲಿ ಎಂದು ಅವರು ಹೇಳಿದ್ದಾರೆ.