ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ತೋಟಗೆರೆ ಗ್ರಾಮದಲ್ಲಿ ನಡೆದ ಘಟನೆಯೊಂದು ಕುಟುಂಬವನ್ನು ಬೆಚ್ಚಿಬೀಳಿಸಿದೆ. ರಾತ್ರಿ ಸುಮಾರು 10:50ರ ವೇಳೆಗೆ ಮನೆಯೊಳಗೆ ಸೇರಿಕೊಂಡ ನಾಗರಹಾವು, ಹಾಸಿಗೆಯಲ್ಲಿ ಮಲಗಿದ್ದ ಇಬ್ಬರು ಮಕ್ಕಳ ನಡುವೆಯೇ ಅಡಗಿಕೊಂಡಿತ್ತು.
ರಗ್ಗಿನೊಳಗೆ ಅಡಗಿದ್ದ ಹಾವನ್ನು ಗಮನಿಸಿದ ಪೋಷಕರು ತೀವ್ರ ಆತಂಕಕ್ಕೆ ಒಳಗಾದರು. ಮಕ್ಕಳನ್ನು ಎಚ್ಚರಿಸುವ ಅಥವಾ ಸ್ಥಳಾಂತರಿಸುವ ಪ್ರಯತ್ನದಲ್ಲಿ ಹಾವು ಕಚ್ಚುವ ಅಪಾಯವಿದ್ದ ಕಾರಣ ಅವರು ಯಾವುದೇ ಆತುರದ ನಿರ್ಧಾರ ಕೈಗೊಳ್ಳದೆ ಉರಗ ರಕ್ಷಕ ಪ್ರಶಾಂತ್ ಅವರನ್ನು ಸಂಪರ್ಕಿಸಿದರು.
ಸುದ್ದಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಪ್ರಶಾಂತ್, ಮೊದಲು ಪೋಷಕರಿಗೆ ಧೈರ್ಯ ತುಂಬಿ ಎಚ್ಚರಿಕೆಯಿಂದ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಕರೆತಂದರು. ಬಳಿಕ ಯಾವುದೇ ಅನಾಹುತ ಸಂಭವಿಸದಂತೆ ನಾಗರಹಾವನ್ನು ಯಶಸ್ವಿಯಾಗಿ ಸೆರೆ ಹಿಡಿದರು.
ಸೆರೆ ಹಿಡಿದ ಹಾವನ್ನು ಬಳಿಕ ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದ್ದು, ಘಟನೆಯಲ್ಲಿ ಮಕ್ಕಳು ಸೇರಿದಂತೆ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಸಮಯೋಚಿತವಾಗಿ ಉರಗ ರಕ್ಷಕರನ್ನು ಸಂಪರ್ಕಿಸಿದ ಪೋಷಕರ ನಡೆ ಹಾಗೂ ಪ್ರಶಾಂತ್ ಅವರ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.



