ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಜೋಗಿಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಕಾರು ಸ್ಫೋಟ ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೆಬ್ಬುಲು ಗ್ರಾಮದ ನಾಗೇಂದ್ರ (30) ಸಜೀವ ದಹನಗೊಂಡಿದ್ದು, ಗಂಭೀರವಾಗಿ ಗಾಯಗೊಂಡಿರುವ ಯುವತಿ ರಮ್ಯಾ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಪ್ರೇಮ ಪ್ರಕರಣವೇ ಘಟನೆಗೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದ್ದು, ಕಾರು ಸ್ಫೋಟಕ್ಕೆ ನಾಡಬಾಂಬ್ ಬಳಸಿರಬಹುದಾದ ಅನುಮಾನವೂ ಮೂಡಿದೆ.
ಪೊಲೀಸರ ಮಾಹಿತಿ ಪ್ರಕಾರ, ನಾಗೇಂದ್ರ ಮತ್ತು ರಮ್ಯಾ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬೆಂಗಳೂರಿನ ಜಯನಗರದ 1ನೇ ಬ್ಲಾಕ್ನಲ್ಲಿ ವಾಸವಿದ್ದ ರಮ್ಯಾ, ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಓಟಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತೀಚಿನ ಕೆಲ ತಿಂಗಳುಗಳಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ರಮ್ಯಾ ನಾಗೇಂದ್ರನ ಮೊಬೈಲ್ ಸಂಖ್ಯೆಯನ್ನೂ ಬ್ಲಾಕ್ ಮಾಡಿದ್ದರು ಎನ್ನಲಾಗಿದೆ.
ಬೆಳಗ್ಗೆಯೇ ಮನೆ ಬಳಿ ಗಲಾಟೆ
ಶನಿವಾರ ಬೆಳಗ್ಗೆ ನಾಗೇಂದ್ರ ಏಕಾಏಕಿ ರಮ್ಯಾ ವಾಸವಿದ್ದ ಮನೆಗೆ ತೆರಳಿ ಗಲಾಟೆ ನಡೆಸಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ರಮ್ಯಾಳ ಸ್ನೇಹಿತೆ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿ ಕಳುಹಿಸಿದ್ದರು. ಬಳಿಕ ನಾಗೇಂದ್ರ, ರಮ್ಯಾಳನ್ನು ಅಂಕೋಲಾಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ಯೆಲ್ಲೋ ಬೋರ್ಡ್ ಕಾರಿನಲ್ಲಿ ಕರೆದುಕೊಂಡು ಹೊರಟಿದ್ದಾನೆ.
ಕಾರಿನಲ್ಲೇ ಜೀವ ಬೆದರಿಕೆ
ಬೆಂಗಳೂರುದಿಂದ ಅಂಕೋಲಾಗೆ ತೆರಳುವ ಮಾರ್ಗದಲ್ಲಿ ನಾಗೇಂದ್ರ ನಿರಂತರವಾಗಿ ರಮ್ಯಾಳೊಂದಿಗೆ ಜಗಳವಾಡಿದ್ದಾನೆ. “ನಿನ್ನನ್ನು ಕೊಂದು ನಾನು ಸಾಯುತ್ತೇನೆ” ಎಂದು ಬೆದರಿಕೆ ಹಾಕಿದ್ದಲ್ಲದೆ, ಕಾರು ಸ್ಫೋಟ ಮಾಡುವುದಾಗಿಯೂ ಹೇಳಿದ್ದಾನೆ ಎನ್ನಲಾಗಿದೆ. ಅಲ್ಲದೆ, ಕಾರಿನಲ್ಲೇ ಪೆಟ್ರೋಲ್ ಬಾಂಬ್ ತೋರಿಸಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಚಾಕು ಇರಿದು ಕಾರಿನಿಂದ ಜಿಗಿದ ಯುವತಿ
ಶಿರಾ ತಾಲ್ಲೂಕಿನ ಜೋಗಿಹಳ್ಳಿ ಸಮೀಪ ತಲುಪುತ್ತಿದ್ದಂತೆ ನಾಗೇಂದ್ರ ಚಾಕುವಿನಿಂದ ರಮ್ಯಾಳ ತಲೆ ಹಾಗೂ ಕೈಗೆ ಇರಿದಿದ್ದಾನೆ. ಜೀವ ಉಳಿಸಿಕೊಳ್ಳಲು ರಮ್ಯಾ ಚಲಿಸುತ್ತಿದ್ದ ಕಾರಿನ ಲಾಕ್ ತೆಗೆದು ಹೊರಗೆ ಜಿಗಿದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕ್ಷಣಾರ್ಧದಲ್ಲಿ ಕಾರು ಸ್ಫೋಟ
ರಮ್ಯಾ ಕಾರಿನಿಂದ ಜಿಗಿದ ಕೆಲವೇ ಕ್ಷಣಗಳಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ಭಾರೀ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಕಾರಿನಲ್ಲಿದ್ದ ನಾಗೇಂದ್ರ ಸಜೀವ ದಹನಗೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ನಾಡಬಾಂಬ್ ಬಳಕೆಯ ಶಂಕೆ
ಪ್ರಾಥಮಿಕ ತನಿಖೆಯಲ್ಲಿ ಕಾರು ಸ್ಫೋಟಕ್ಕೆ ನಾಡಬಾಂಬ್ ಬಳಸಿರಬಹುದಾದ ಅನುಮಾನ ವ್ಯಕ್ತವಾಗಿದೆ. ಕಾಡು ಪ್ರಾಣಿಗಳ ಬೇಟೆಗೆ ಅಕ್ರಮವಾಗಿ ಬಳಸಲಾಗುವ ನಾಡಬಾಂಬ್ನಲ್ಲಿ ಮದ್ದುಗುಂಡು ಮತ್ತು ಕಲ್ಲಿನ ಪುಡಿ ಬಳಸಲಾಗುತ್ತದೆ. ಇದೇ ಮಾದರಿಯ ಸ್ಫೋಟಕದಿಂದ ಕಾರು ಸ್ಫೋಟಗೊಂಡಿದೆಯೇ ಎಂಬ ಕುರಿತು ಪೊಲೀಸರು ತಾಂತ್ರಿಕ ಹಾಗೂ ವಿಧಿವಿಜ್ಞಾನ ತಜ್ಞರ ನೆರವಿನಿಂದ ತನಿಖೆ ನಡೆಸುತ್ತಿದ್ದಾರೆ.
ತನಿಖೆ ಚುರುಕು
ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಕಾರಿನಲ್ಲಿ ನಿಜವಾಗಿಯೂ ಸ್ಫೋಟಕ ವಸ್ತು ಇತ್ತೇ? ಸ್ಫೋಟಕ್ಕೆ ಕಾರಣವೇನು? ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವೇ ಸ್ಫೋಟದ ನಿಖರ ಕಾರಣ ಬಹಿರಂಗವಾಗಲಿದೆ.
ಇದನ್ನೂ ಓದಿ/ಕಾನಸೂರು ಇಂದಿರಾ ಗಾಂಧಿ ವಸತಿ ಶಾಲೆ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ಹಿಂದಿ ಶಿಕ್ಷಕ ಬಂಧನ

