ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಚಿಕ್ಕ ವಯಸ್ಸಿನಲ್ಲೇ ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಸ್ವಚ್ಛತೆಯ ಬಗ್ಗೆ ಕಾಳಜಿ ತೋರಿದ ಸದಾಶಿವಗಡದ 4ನೇ ತರಗತಿ ವಿದ್ಯಾರ್ಥಿನಿ ಅನಿಕಾ ಸುರಜ್ ನಾಯ್ಕ್ ಅವರು ಸಾಮಾಜಿಕ ಜಾಲತಾಣದ ಮೂಲಕ ಮನೆ ಮನೆಗೆ ಹಸಿ ಕಸ ಸಂಗ್ರಹಣಾ ಸೇವೆಯನ್ನು ಪುನರಾರಂಭಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕಾರವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ಜಿಲ್ಲಾಧಿಕಾರಿ, ಸ್ಥಳೀಯ ಶಾಸಕರು ಹಾಗೂ ಚಿತ್ತಾಕುಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರ ಗಮನಕ್ಕೆ ತಂದಿರುವ ಮನವಿಯಲ್ಲಿ, 2025ರ ಅಕ್ಟೋಬರ್ ತಿಂಗಳಿಂದ ಮನೆ ಮನೆಗೆ ನಡೆಯುತ್ತಿದ್ದ ಹಸಿ ಕಸ ಸಂಗ್ರಹಣೆ ಸ್ಥಗಿತಗೊಂಡಿದ್ದು, ಇದರಿಂದ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತೆ ಹದಗೆಟ್ಟು ಪರಿಸರ ಮಾಲಿನ್ಯದ ಸಮಸ್ಯೆ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮನೆಗಳಿಂದ ಹಸಿ ಕಸವನ್ನು ವಾರಕ್ಕೆ ಕನಿಷ್ಠ ಎರಡು ಬಾರಿ ಸಂಗ್ರಹಿಸಲು ವಿಶೇಷ ವಾಹನವನ್ನು ವ್ಯವಸ್ಥೆ ಮಾಡಿ, ನಿಯಮಿತ ಕಸ ಸಂಗ್ರಹಣಾ ಸೇವೆಯನ್ನು ಶೀಘ್ರ ಪುನರಾರಂಭಿಸಬೇಕು ಎಂದು ವಿದ್ಯಾರ್ಥಿನಿ ಮನವಿ ಮಾಡಿದ್ದಾರೆ. ಸಣ್ಣ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ತನ್ನ ಊರಿನ ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸಿ ಸಾಮಾಜಿಕ ಜಾಲತಾಣದ ಮೂಲಕ ಧ್ವನಿ ಎತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಇದು ನಾಗರಿಕ ಜವಾಬ್ದಾರಿ ಮತ್ತು ಪರಿಸರ ಪ್ರಜ್ಞೆಯ ಉತ್ತಮ ಮಾದರಿಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಬಹುಕಾಲದಿಂದ ಸ್ಥಗಿತಗೊಂಡಿರುವ ಮನೆ ಮನೆಗೆ ಹಸಿ ಕಸ ಸಂಗ್ರಹಣಾ ಸೇವೆಯನ್ನು ಶೀಘ್ರ ಪುನರಾರಂಭಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.”ಸ್ವಚ್ಛ ಪಂಚಾಯತ್ ನಮ್ಮೆಲ್ಲರ ಜವಾಬ್ದಾರಿ; ಉತ್ತಮ ಪರಿಸರಕ್ಕಾಗಿ ಎದ್ದಿರುವ ಪ್ರತಿಯೊಂದು ಧ್ವನಿಗೂ ಮೌಲ್ಯವಿದೆ” ಎಂಬ ಸಂದೇಶದೊಂದಿಗೆ ವಿದ್ಯಾರ್ಥಿನಿಯ ಈ ಪ್ರಯತ್ನ ಎಲ್ಲರ ಗಮನ ಸೆಳೆದಿದೆ.

Accident News/ಹೆದ್ದಾರಿ ದಾಟುತ್ತಿದ್ದ ವೃದ್ಧನಿಗೆ ಬೈಕ್ ಡಿಕ್ಕಿ; ಪಾದಚಾರಿ ಸ್ಥಳದಲ್ಲೇ ಸಾವು