ಸುದ್ದಿಬಿಂದು ಬ್ಯೂರೋ ವರದಿ /ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಕಾರವಾರದಲ್ಲಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.
ನ್ಯಾಯಾಲಯದ ಅಧಿಕೃತ ಇಮೇಲ್ಗೆ ಬಂದ ಸಂದೇಶದಲ್ಲಿ, ajmal.kasab@automicmail.io ಎಂಬ ಇಮೇಲ್ ವಿಳಾಸದಿಂದ ಬಾಂಬ್ ಸ್ಫೋಟದ ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ಇಮೇಲ್ನಲ್ಲಿ, “ಉದಯನಿಧಿ ಸ್ಟಾಲಿನ್ ಅವರನ್ನು ಬೆಂಬಲಿಸುವ ಚೆನ್ನೈ ಪತ್ರಕರ್ತರಿಗೆ ಅಪ್ರಾಪ್ತ ಬಾಲಕಿಯರನ್ನು ಸರಬರಾಜು ಮಾಡಲಾಗಿದೆ. ಅವರ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ ನಡೆಸಲಾಗುವುದು” ಎಂಬ ಆಕ್ಷೇಪಾರ್ಹ ಹಾಗೂ ಬೆದರಿಕೆ ಸಂದೇಶ ಉಲ್ಲೇಖಿಸಲಾಗಿದೆ.
ಇಮೇಲ್ ಬಂದ ತಕ್ಷಣ ಕಾರವಾರ ನಗರ ಪೊಲೀಸರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೌಡಾಯಿಸಿ ಭದ್ರತೆ ಹೆಚ್ಚಿಸಿದರು. ಬಳಿಕ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಿಬ್ಬಂದಿ ನ್ಯಾಯಾಲಯದ ಆವರಣವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದರು.

