ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ವರ್ಗಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೇವೆಯ ನೆನಪನ್ನು ಸಮಾಜಮುಖಿ ಕಾರ್ಯದ ಮೂಲಕ ಉಳಿಸಿಕೊಳ್ಳಲು ತಾಲೂಕಿನ ತಹಶೀಲ್ದಾರ ನಾಗೇಂದ್ರ ಕೊಳಶೆಟ್ಟಿ ಅವರು ಐದು ಸರ್ಕಾರಿ ಶಾಲೆಗಳಿಗೆ ತಮ್ಮ ವೈಯಕ್ತಿಕ ವೆಚ್ಚದಲ್ಲಿ ಎಲೆಕ್ಟ್ರಾನಿಕ್ ವಾಟರ್ ಪ್ಯೂರಿಫೈಯರ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ತಾಲೂಕಿನ ಮುಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಕೊಂಟವಾಣಿ, ಮಂಡಳ್ಳಿ, ಗೊರಟೆ ಹಾಗೂ ನೂಝ್ ಸರ್ಕಾರಿ ಶಾಲೆಗಳಿಗೆ ಈ ಪ್ಯೂರಿಫೈಯರ್‌ಗಳನ್ನು ವಿತರಿಸಲಾಗಿದೆ. ಶಾಲಾ ಮಕ್ಕಳಿಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಉಪಕ್ರಮ ಕೈಗೊಳ್ಳಲಾಗಿದೆ.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಉಲ್ಲಾಸ್ ನಾಯಕ್ ಮಾತನಾಡಿ, “ಭಟ್ಕಳದಂತಹ ಸೂಕ್ಷ್ಮ ತಾಲೂಕಿನಲ್ಲಿ ಕಡಿಮೆ ಅವಧಿಯಲ್ಲೇ ಎಲ್ಲ ಹಂತದ ನೌಕರರನ್ನು ಸಮನ್ವಯದಿಂದ ಮುನ್ನಡೆಸಿದ ನಾಗೇಂದ್ರ ಕೊಳಶೆಟ್ಟಿ ಅವರ ಆಡಳಿತ ಕೌಶಲ್ಯ ಗಮನಾರ್ಹವಾಗಿದೆ. ವಿವಿಧ ಗಣತಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಯಶಸ್ವಿಯಾಗಿ ನಡೆಸುವಲ್ಲಿ ಅವರು ಅನುಸರಿಸಿದ ಕಾರ್ಯತಂತ್ರ ಎಲ್ಲರಿಗೂ ಮಾದರಿಯಾಗಿದೆ. ಅವರ ವರ್ಗಾವಣೆ ಎಲ್ಲರಿಗೂ ಬೇಸರ ತಂದಿದ್ದು, ಈ ಸಂದರ್ಭದಲ್ಲೂ ತಮ್ಮ ಸ್ವಂತ ಹಣದಲ್ಲಿ ಐದು ಶಾಲೆಗಳಿಗೆ ವಾಟರ್ ಫಿಲ್ಟರ್ ನೀಡಿ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿರುವುದು ಶ್ಲಾಘನೀಯ,” ಎಂದು ಹೇಳಿದರು.

ತಹಶೀಲ್ದಾರರ ಈ ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯರು, ಪೋಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾರ್ವಜನಿಕ ಸೇವೆಯೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನೂ ನಿಭಾಯಿಸಿರುವ ಅವರ ನಡೆ ಇತರರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದ್ದಾರೆ.ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಉದಯ್ ಸೂರ್ವೆ, ಸುರೇಶ್ ಮುರುಡೇಶ್ವರ, ಮೋಹನ್ ನಾಯ್ಕ ಹಾಗೂ ಸಹ ಶಿಕ್ಷಕರಾದ ವಿಜಯ ನರ್ವೆಕರ್ ಮತ್ತು ಪ್ರಸಾದ್ ಹೆಬ್ಬಾರ್ ಉಪಸ್ಥಿತರಿದ್ದರು.

ಇದನ್ನೂ ಓದಿ/ಭೀಕರ ಸರಣಿ ರಸ್ತೆ ಅಪಘಾತ: ಕುಮಟಾ ಮೂಲದ ಟಿಪ್ಪರ್ ಚಾಲಕ ಸ್ಥಳದಲ್ಲೇ ಸಾವು, 7 ಮಂದಿಗೆ ಗಾಯ