ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಪ್ರತಿಭೆ ಹೊಂದಿರುವ ವ್ಯಕ್ತಿಗಳಿಗೆ ಜಾಗತಿಕ ಮನ್ನಣೆ ದೊರೆಯಲಿದೆ ಎನ್ನುವುದಕ್ಕೆ ಗ್ರಾಮೀಣ ಪ್ರದೇಶದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಯೊಬ್ಬನನ್ನು, ಶಿಸ್ತು ಮತ್ತು ತಂತ್ರಜ್ಞಾನದ ದೇಶ ಎನಿಸಿರುವ ಜಪಾನ್ ಸರ್ಕಾರವು ತನ್ನ ಪ್ರತಿಷ್ಠಿತ ಸಕುರ ಸ್ಟೂಡೆಂಟ್ ಎಕ್ಸ್ಚೇಂಜ್ ಪ್ರೋಗ್ರಾಂ ಅಡಿಯಲ್ಲಿ ಆಹ್ವಾನಿಸಿ,ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಅನುಭವವನ್ನು ನೀಡಿರುವುದು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.

ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನೆಲ್ಲಿಕೇರಿಯ ಸರ್ಕಾರಿ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿರುವ ಆಕಾಶ್ ಹರಿಕಂತ್ರ,(Akash Harikantra ) ತನ್ನ 1 ರಿಂದ 7 ನೇ ತರಗತಿಯನ್ನು ಕೊಡ್ಕಣಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತ್ತು 8 ರಿಂದ 10 ನೇ ತರಗತಿಯನ್ನು ಬರ್ಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಾಂಗ ಮಾಡಿದ್ದು, 8ನೇ ತರಗತಿಯಲ್ಲಿದ್ದಾಗ NMMS ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ತದನಂತರ SSLC ಯಲ್ಲಿ ಅತ್ಯುತ್ತಮ ಅಂಕ (621) ಗಳನ್ನು ಗಳಿಸಿದ್ದು, ತನ್ನ ಈ ಶೈಕ್ಷಣಿಕ ಸಾಧನೆಯಿಂದ ಜಪಾನ್ ದೇಶದ ಆಹ್ವಾನದ(Japan Government Invitation)ಮೇರೆಗೆ ಅಲ್ಲಿಗೆ ಭೇಟಿ ನೀಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಅನುಭವವನ್ನು ಪಡೆದಿದ್ದಾರೆ.

ಜಪಾನ್ ದೇಶದ ಶೈಕ್ಷಣಿಕ ವಾತಾವರಣ, ಸಂಶೋಧನಾ ಕೇಂದ್ರಗಳು ಮತ್ತು ಪ್ರಸಿದ್ಧ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡುವ ಅಪರೂಪದ ಅವಕಾಶ ಆಕಾಶ್ ಅವರಿಗೆ ಈ ಕಾರ್ಯಕ್ರಮದ ಮೂಲಕ ದೊರಕಿತ್ತು. ಪ್ರವಾಸದ ಅವಧಿಯಲ್ಲಿ ಅವರು ಜಪಾನಿನ ಸುಧಾರಿತ ವಿಜ್ಞಾನ ಪ್ರಯೋಗಾಲಯಗಳು ಮತ್ತು ಐತಿಹಾಸಿಕ ತಾಣಗಳಿಗೆ ಭೇಟಿ ನೀಡಿದ್ದರು.

ಈ ಪ್ರವಾಸದ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದಾಗಿತ್ತು. ಜಪಾನ್‌ನ ಪ್ರಸಿದ್ಧ ವಿಶ್ವವಿದ್ಯಾಲಯಗಳು ಮತ್ತು ಅತ್ಯಾಧುನಿಕ ಸಂಶೋಧನಾ ಕೇಂದ್ರಗಳಿಗೆ ಭೇಟಿಗೆ ವ್ಯವಸ್ಥೆ ಮಾಡುವು ಮೂಲಕ ಜಪಾನ್ ಹೊಸತನಕ್ಕೆ ಎಷ್ಟ್ಟು ಆದ್ಯತೆ ನೀಡುತ್ತದೆ ಎಂಬುದನ್ನು ತಿಳಿಸಲಾಯಿತು. ವಿದ್ಯಾರ್ಥಿಗಳಿಗೆ ಅಲ್ಲಿನ ಸಂಶೋಧಕರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಭವಿಷ್ಯದ ತಂತ್ರಜ್ಞಾನವಾದ ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ನಡೆಸುತ್ತಿರುವ ಅದ್ಭುತ ಪ್ರಯೋಗಗಳನ್ನು ಕಣ್ಣಾರೆ ವೀಕ್ಷಿಸುವ ಅವಕಾಶ ಸಿಕ್ಕಿತು. ಬಾಹ್ಯಾಕಾಶ ಸಂಶೋಧನೆಯ ಹೆಮ್ಮೆಯ ಸಂಕೇತವಾದ ಸ್ಪೇಸ್ ಸೆಂಟರ್ ಹಾಗೂ ಜಪಾನ್‌ನ ವಿಶ್ವವಿಖ್ಯಾತ ಸಂಶೋಧನಾ ಸಂಸ್ಥೆಗಳಾದ ರಿಕೆನ್ ಮತ್ತು ಮಿರಾಕನ್ ಗಳಿಗೆ ಭೇಟಿ ನೀಡಲು ವ್ಯವಸ್ಥೆ ಮಾಡಲಾಗಿತ್ತು.

NMMS ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ತದನಂತರ SSಐಅ ಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಜಪಾನ್ ಸರ್ಕಾರವು ವಿಜ್ಞಾನ ಮತ್ತು ತಂತ್ರಜ್ಞಾನದ ಅದ್ಭುತ ಲೋಕವನ್ನು ಪರಿಚಯಿಸುವ ಈ ಅಪರೂಪದ ಅವಕಾಶವನ್ನು ಕಲ್ಪಿಸಿಕೊಟ್ಟಿತ್ತು. ಕರ್ನಾಟಕ ರಾಜ್ಯದಿಂದ 4 ವಿದ್ಯಾರ್ಥಿಗಳು ಮಾತ್ರ ಈ ಪ್ರವಾಸಕ್ಕೆ ಆಯ್ಕೆಯಾಗಿದ್ದು, ಮೇ 23 ರಿಂದ 30 ರವರೆಗೆ ನಡೆದ ಈ ಶೈಕ್ಷಣಿಕ ಪ್ರವಾಸಕ್ಕೆ ವಿಶೇಷ ವೀಸಾ ವ್ಯವಸ್ಥೆ ಮತ್ತು ಪ್ರವಾಸದ ಸಂಪೂರ್ಣ ವೆಚ್ಚವನ್ನು ಜಪಾನ್ ಸರ್ಕಾರವೇ ಭರಿಸಿತ್ತು. ವಿದ್ಯಾರ್ಥಿಗಳಿಗೆ ಅತ್ಯುತ್ತಮ ವಸತಿ ವ್ಯವಸ್ಥೆ ಹಾಗೂ ಪ್ರವಾಸದ ಮಾರ್ಗದರ್ಶನಕ್ಕಾಗಿ ಪ್ರತ್ಯೇಕ ಕೋ-ಆರ್ಡಿನೇಟರ್ (ಸಂಯೋಜಕರು) ನೇಮಿಸಲಾಗಿತ್ತು.

ಸಾಕುರಾ ಸೈನ್ಸ್ ಎಕ್ಸ್ಚೇಂಜ್ ಪ್ರೋಗ್ರಾಂ ಇದು ಅಂತರರಾಷ್ಟ್ರೀಯ ಯುವ ವಿಜ್ಞಾನ ವಿನಿಮಯ ಕಾರ್ಯಕ್ರಮವಾಗಿದ್ದು, ಪ್ರಪಂಚದ ಪ್ರತಿಭಾವಂತ ಯುವಕರನ್ನು ಅಲ್ಪಾವಧಿಗೆ ಜಪಾನ್‌ಗೆ ಆಹ್ವಾನಿಸಲಾಗುತ್ತದೆ. ಜಪಾನ್‌ನ ಅತ್ಯಾಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಹತ್ತಿರದಿಂದ ನೋಡುವುದು ಮತ್ತು ಜಪಾನ್‌ನ ಯುವಕರೊಂದಿಗೆ ಸಂವಹನವನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಈ ಕಾರ್ಯಕ್ರಮವು ದೇಶ ಮತ್ತು ವಿದೇಶಗಳ ಯುವ ವಿಜ್ಞಾನ ಮತ್ತು ತಂತ್ರಜ್ಞಾನದ ಜನರಿಗೆ ಪರಸ್ಪರ ಅರ್ಥಮಾಡಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ.

ಆಕಾಶ್ ಅವರ ಈ ಸಾಧನೆ ಗ್ರಾಮೀಣ ಮತ್ತು ನಗರ ಪ್ರದೇಶದ ಇತರೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ದೊಡ್ಡ ಸ್ಫೂರ್ತಿಯಾಗಿದ್ದು, ಅಂತರರಾಷ್ಟ್ರೀಯ ಮಟ್ಟದ ಇಂತಹ ಎಕ್ಸ್ಚೇಂಜ್ ಕಾರ್ಯಕ್ರಮಗಳು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಜಾಗತಿಕ ದೃಷ್ಟಿಕೋನವನ್ನು ಬೆಳೆಸಲು ಸಹಕಾರಿಯಾಗಿವೆ.

ಜಪಾನ್ ಕೇವಲ ತಂತ್ರಜ್ಞಾನದಲ್ಲಿ ಮಾತ್ರವಲ್ಲದೆ ತನ್ನ ಭವ್ಯ ಪರಂಪರೆಯಲ್ಲೂ ಶ್ರೀಮಂತವಾಗಿದೆ. ಅಲ್ಲಿನ ಶಾಲೆಗಳು ಮತ್ತು ಐತಿಹಾಸಿಕ ದೇವಾಲಯಗಳಿಗೆ ಭೇಟಿ ನೀಡಿದಾಗ, ಜಪಾನಿಯರು ತಮ್ಮ ಸುದೀರ್ಘ ಸಂಪ್ರದಾಯಗಳನ್ನು ಇಂದಿಗೂ ಹೇಗೆ ಜೀವಂತವಾಗಿಟ್ಟಿದ್ದಾರೆ ಎಂದು ತಿಳಿಯಿತು. ಆಧುನಿಕತೆಯ ನಡುವೆಯೂ ಅವರು ತಮ್ಮ ಮೂಲ ಸಂಸ್ಕೃತಿಯನ್ನು ಮರೆತಿಲ್ಲ. ಈ ಪ್ರವಾಸವು ಜ್ಞಾನಾರ್ಜನೆಗೆ ಮಾತ್ರ ಸೀಮಿತವಾಗಿರದೆ, ಜಪಾನಿಯರ ವಿಶಿಷ್ಠ ಜೀವನಶೈಲಿಯನ್ನು ಹತ್ತಿರದಿಂದ ಕಾಣುವಂತೆ ಮಾಡಿತು. ಜಪಾನ್ ದೇಶದಲ್ಲಿ ಸ್ವಚ್ಛತೆ , ಸಾರ್ವಜನಿಕ ಸ್ಥಳಗಳಲ್ಲಿ ಕಸದ ಕಣವೂ ಕಾಣದಂತಹ ಶಿಸ್ತು. ಪ್ರತಿಯೊಂದು ಕಾರ್ಯವೂ ನಿಗದಿಪಡಿಸಿದ ಸೆಕೆಂಡುಗಳಲ್ಲೇ ನಡೆಯುವ ಅದ್ಭುತ ಸುವ್ಯವಸ್ಥೆ. ಪ್ರತಿಯೊಬ್ಬ ನಾಗರಿಕನೂ ಪಾಲಿಸುವ ಸ್ವಯಂ ನಿಯಂತ್ರಣ. ಅಪರಿಚಿತರನ್ನೂ ಪ್ರೀತಿಯಿಂದ ಸತ್ಕರಿಸುವ ಮತ್ತು ಗೌರವಿಸುವ ಗುಣ ಮತ್ತು ಅವರ ಶಿಸ್ತು ಮತ್ತು ಸಂಶೋಧನಾ ಶೈಲಿ ನಿಜಕ್ಕೂ ಅದ್ಭುತ. ವಿಜ್ಞಾನ ಮಾತ್ರವಲ್ಲದೆ, ಅವರ ಶ್ರೀಮಂತ ಸಂಸ್ಕೃತಿ, ಕಟ್ಟುನಿಟ್ಟಿನ ಶಿಸ್ತು, ಸಮಯ ಪ್ರಜ್ಞೆ ಹಾಗೂ ತಂತ್ರಜ್ಞಾನವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಿರುವ ವಿಧಾನವು ನನ್ನ ಯೋಚನಾ ಲಹರಿಯನ್ನೇ ಬದಲಾಯಿಸಿದೆ. ಈ ಅನುಭವವನ್ನು ನನ್ನ ಮುಂದಿನ ವಿದ್ಯಾಭ್ಯಾಸ ಹಾಗೂ ದೇಶದ ಪ್ರಗತಿಗೆ ಬಳಸಿಕೊಳ್ಳುತ್ತೇನೆ ಎಂದು ಆಕಾಶ್ ಹರಿಕಂತ್ರ, ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: