ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಹಾಗೂ ಮತದಾರರ ಪಟ್ಟಿ ಪಾರದರ್ಶಕವಾಗಿರುವಂತೆ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ನೇಮಕ ಮಾಡಿದ ತಂಡಗಳು ಜಾಗರೂಕರಾಗಿರಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಮನವಿ ಮಾಡಿದರು.

ಕಾರವಾರದ ಬಿಜೆಪಿ ಕಾರ್ಯಾಲಯದಲ್ಲಿ (ಸುಭಾಷಚಂದ್ರ ಬೋಸ್ ಮತ್ತು ಚಂದ್ರಶೇಖರ ಅಜಾದ್ ಮಹಾಶಕ್ತಿ ಕೇಂದ್ರ ವ್ಯಾಪ್ತಿ) ಹಾಗೂ ನಂದನಗದ್ದಾ ಗಣಪತಿ ದೇವಾಲಯ ಸಭಾಭವನದಲ್ಲಿ (ಭಗತ್ ಸಿಂಗ್ ಮಹಾಶಕ್ತಿ ಕೇಂದ್ರ ವ್ಯಾಪ್ತಿ) ಸೋಮವಾರ ನಡೆದ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಬಿಎಲ್ ಓ 2, ಬೂತ್ ಅಧ್ಯಕ್ಷರು, ಸದಸ್ಯರ ತಂಡಗಳು ಹಾಗೂ ಮಹಿಳಾ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮತದಾರರ ಪಟ್ಟಿ ಪಾರದರ್ಶಕವಾಗಿರಬೇಕು. ಈ ನಿಟ್ಟಿನಲ್ಲಿ ರಚಿಸಲಾದ ತಂಡಗಳ ಸದಸ್ಯರು, ಬಿಎಲ್ ಓ 2, ಬೂತ್ ಅಧ್ಯಕ್ಷರು ಸೇರಿದಂತೆ ಎಲ್ಲರೂ ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು. ನಗರ ಮಂಡಲ ಅಧ್ಯಕ್ಷ ನಾಗೇಶ ಕುರ್ಡೇಕರ, ಪ್ರಭಾರಿ ರಾಜು ಭಂಡಾರಿ, ನಗರಸಭೆ ನಿಕಟಪೂರ್ವ ಅಧ್ಯಕ್ಷ ರವಿರಾಜ ಅಂಕೋಲೆಕರ, ರಾಜ್ಯ ಪ್ರಕೋಸ್ಟದ ಸುನೀಲ ಸೋನಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಧಾನಕಾರ್ಯದರ್ಶಿಗಳು ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ಕಾರ್ಯಕರ್ತರಿಂದ ಸನ್ಮಾನ
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಅವರನ್ನು ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಪಕ್ಷದ ಸಂಘಟನಾ ಸಂಯೋಜಕರನ್ನಾಗಿ ನಿಯುಕ್ತಿಗೊಳಿಸಿದ ಬಗ್ಗೆ ಬಿಜೆಪಿ ಕಾರ್ಯಕರ್ತರು ರೂಪಾಲಿ ಎಸ್.ನಾಯ್ಕ ಅವರನ್ನು ಸಂಭ್ರಮದಿಂದ ಸತ್ಕರಿಸಿದರು.

ಇದನ್ನೂ ಓದಿ/ಕಾರವಾರದಿಂದ ಒಮಾನ್‌ಗೆ ತೆರಳುತ್ತಿದ್ದ ತೈಲ ಟ್ಯಾಂಕರ್‌ನಲ್ಲಿ ಬೆಂಕಿ: 24 ಭಾರತೀಯ ಸಿಬ್ಬಂದಿ ಸುರಕ್ಷಿತ