ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಹಸುವನ್ನು ರಕ್ಷಿಸಲು ಕೆರೆಗೆ ಇಳಿದ ಅಪ್ರಾಪ್ತ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಸಳೂರಿನಲ್ಲಿ ನಡೆದಿದೆ.

ಇಸಳೂರಿನ ಮಹಮ್ಮದೀಯಾ ಕಾಲೋನಿ ನಿವಾಸಿ ಶಾಹಿದ್ (17) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.ಮಾಹಿತಿಯ ಪ್ರಕಾರ, ಇಂದು ಬೆಳಿಗ್ಗೆ ಗ್ರಾಮದ ಹಸುಗಳನ್ನು ಮೇಯಲು ಹೊರಗೆ ಕಳುಹಿಸಲಾಗಿತ್ತು. ಸಂಜೆ ವೇಳೆಯಾದರೂ ಹಸುಗಳು ಮರಳಿ ಬಾರದ ಹಿನ್ನೆಲೆಯಲ್ಲಿ ಶಾಹಿದ್ ಅವುಗಳನ್ನು ಹುಡುಕಲು ತೆರಳಿದ್ದನು. ಈ ವೇಳೆ ಗ್ರಾಮದ ಸಮೀಪದ ಕೆರೆಯ ಬಳಿ ಹಸು ಒಂದು ಹೂಳಿನಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ.

ಹಸುವನ್ನು ರಕ್ಷಿಸುವ ಉದ್ದೇಶದಿಂದ ಶಾಹಿದ್ ಕೆರೆಗೆ ಇಳಿದಿದ್ದಾನೆ. ಆದರೆ ಕೆರೆಯ ಹೂಳು ಮತ್ತು ಆಳವಾದ ನೀರಿನಲ್ಲಿ ಸಿಲುಕಿ ಹೊರಬರಲಾಗದೆ ಮುಳುಗಿದ್ದಾನೆ ಎನ್ನಲಾಗಿದೆ.
ಘಟನೆ ಗಮನಿಸಿದ ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಕ್ಕೆ ಮುಂದಾದರೂ, ಅಷ್ಟರಲ್ಲೇ ಶಾಹಿದ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಈ ದುರ್ಘಟನೆಯಿಂದ ಇಸಳೂರು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಮೃತ ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ/ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳ ಪ್ರತಿಜ್ಞೆ: ಬರ್ಗಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ