ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಸಮಾಜ ಸೇವೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಂಚೂಣಿಯಲ್ಲಿರುವ ಅಮದಳ್ಳಿ ಮೂಲದ ಯುವ ಉದ್ಯಮಿ, ಪ್ರಸ್ತುತ ಬೈತಕೊಲ್ ಟ್ರಾಫಿಕಾನಾ ಟರ್ಮಿನಲ್ ಮ್ಯಾನೇಜರ್ ಆಗಿರುವ ಪ್ರಸಾದ್ ಗಾಂವಕರ ಅವರ ಮಾಲಕತ್ವದ ಮರಾಠಾ ವಾರಿಯರ್ಸ್ ತಂಡವು ತಾಲೂಕಿನ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿಯಾದ ಕ್ಷತ್ರಿಯ ಕೊಂಕಣ ಮರಾಠಾ ಪ್ರೀಮಿಯರ್ ಲೀಗ್ – 2026 (KKMPL – 2026) ನಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.

ನಗರದ ಚಂದ್ರದೇವಿ ಮೈದಾನದಲ್ಲಿ ನಿರಾಕಾರ ಯೂತ್ ಕ್ಲಬ್ ಮಖೇರಿ ಹಾಗೂ ಮಲ್ಲಿಕಾರ್ಜುನ ಕ್ರಿಕೆಟರ್ಸ್ ಕಾರವಾರ ಅವರ ಆಯೋಜಕತ್ವದಲ್ಲಿ ಫೆಬ್ರವರಿ 28 ಹಾಗೂ ಮಾರ್ಚ್ 1ರಂದು ನಡೆದ ಈ ಎರಡು ದಿನಗಳ ರೋಚಕ ಟೂರ್ನಿಯಲ್ಲಿ ಮರಾಠಾ ವಾರಿಯರ್ಸ್ ತಂಡವು ಶ್ರೇಷ್ಠ ಪ್ರದರ್ಶನ ನೀಡಿ ನಗದು ಮೊತ್ತ ಒಂದು ಲಕ್ಷ ರೂ. ಹಾಗೂ ಪಾರಿತೋಷಕವನ್ನು ಗೆದ್ದಿದೆ.

ಲೀಗ್ ಹಂತದಿಂದ ಫೈನಲ್ ವರೆಗೆ ಅಬ್ಬರ
ಲೀಗ್ ಹಂತದಲ್ಲಿ ನಡೆದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದು ಟೇಬಲ್ ಟಾಪರ್ ಆಗಿ ಹೊರಹೊಮ್ಮಿದ ಮರಾಠಾ ವಾರಿಯರ್ಸ್ ತಂಡವು ಕ್ವಾಲಿಫೈಯರ್ 1ರಲ್ಲಿ ಸೋಲು ಕಂಡರೂ ಹಿಂತಿರುಗದೆ ಕ್ವಾಲಿಫೈಯರ್ 2ರಲ್ಲಿ ಗೆದ್ದು ಫೈನಲ್ ಪ್ರವೇಶಿಸಿತು.

ಫೈನಲ್‌ನಲ್ಲಿ ವೀರ ಮರಾಠಾ ಬಾಳ್ನಿ ವಿರುದ್ಧ 5 ಓವರ್‌ಗಳ ರೋಚಕ ಪಂದ್ಯ ನಡೆಯಿತು. ಟಾಸ್ ಗೆದ್ದ ಮರಾಠಾ ವಾರಿಯರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಎದುರಾಳಿ ತಂಡ 61 ರನ್‌ಗಳ ಗುರಿ ನೀಡಿತು. ಕೊನೆಯ ಓವರ್ ತನಕ ನಡೆದ ತೀವ್ರ ಪೈಪೋಟಿಯಲ್ಲಿ ಗುರಿ ಬೆನ್ನಟ್ಟಿದ ಮರಾಠಾ ವಾರಿಯರ್ಸ್ ಜಯ ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.ರನ್ನರ್-ಅಪ್ ಸ್ಥಾನವನ್ನು ವೀರ ಮರಾಠಾ ಬಾಳ್ನಿ ಪಡೆದುಕೊಂಡಿತು.

ನಾಯಕತ್ವದಲ್ಲಿ ಇತಿಹಾಸ
ತಂಡದ ಮಾಲೀಕರಾದ ಪ್ರಸಾದ್ ಗಾಂವಕರ (ಅಮದಳ್ಳಿ) ಹಾಗೂ ಕೋ-ಓನರ್ ಪ್ರಸಾದ್ ನಾಯ್ಕ (ಹಣಕೋಣ್) ಅವರು ಅಮದಳ್ಳಿಯ ಸುಧೀಪ್ ಸತೀಶ್ ಗಾವಂಕರ್ ಅವರನ್ನು ತಂಡದ ನಾಯಕನಾಗಿ ನೇಮಕ ಮಾಡಿದ್ದರು. ಇದು ಅವರು ಮರಾಠಾ ವಾರಿಯರ್ಸ್ ತಂಡದ ನಾಯಕತ್ವ ವಹಿಸಿದ ಮೂರನೇ ಬಾರಿ. ಈ ಮೂರೂ ಅವಧಿಗಳಲ್ಲಿ ಮೊದಲ ಬಾರಿಗೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ವಿಶೇಷ ಸಾಧನೆಗಳು

ಪ್ರಣಾಭ್ ರಾಣೆ – ಮ್ಯಾನ್ ಆಫ್ ದ ಸಿರೀಸ್. ಮಂದಾರ ನಾಯ್ಕ – ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದ ಮ್ಯಾಚ್ (ಸಿಡಿಲು ಇನ್ನಿಂಗ್ಸ್). ಈ ಇಬ್ಬರು ಆಟಗಾರರೂ ಮರಾಠಾ ವಾರಿಯರ್ಸ್ ತಂಡದವರೇ ಎಂಬುದು ವಿಶೇಷ.

 ತಂಡದ ಆಟಗಾರರು
ಸುಧೀಪ್ ಗಾಂವಕರ, ವೈಭವ್ ಗಾಂವಕರ (ಅಮದಳ್ಳಿ),
ಮಂದಾರ ನಾಯ್ಕ, ಸೋಮೇಶ್ ಗಾಂವಕರ, ಮಹೇಂದ್ರ ಗಾಂವಕರ, ಜಯೇಶ್ ರಾಣೆ, ರೋಷನ್ ದೇಸಾಯಿ, ಗೌತಮ್ ನಾಯ್ಕ (ಮಖೇರಿ), ಪ್ರಣಾಭ್ ರಾಣೆ (ಮುಡಗೇರಿ), ಸಾಯಿ ನಾಯ್ಕ (ನಂದಗದ್ದಾ), ಅಭಯ ನಾಯ್ಕ (ಸದಾಶಿವಗಡ), ಕಿರಣ್ ನಾಯ್ಕ (ಹಣಕೋಣ್) ಸೇರಿದಂತೆ ತಂಡವು ಒಗ್ಗಟ್ಟಿನ ಆಟ ಪ್ರದರ್ಶಿಸಿದೆ.

ಕಳೆದ ವರ್ಷ ತಂಡದ ಭಾಗವಾಗಿದ್ದ ರೂಪೇಶ್ ದಳವಿಯವರಿಗೆ ಅವರ ಅಮೂಲ್ಯ ಕೊಡುಗೆಗಾಗಿ ಮಾಲೀಕರಾದ ಪ್ರಸಾದ್ ಗಾಂವಕರ ವಿಶೇಷ ಧನ್ಯವಾದ ತಿಳಿಸಿದ್ದಾರೆ.

ಕಳೆದ ವರ್ಷದ ಸಾಧನೆಯ ಸ್ಮರಣೆ
ಮರಾಠಾ ವಾರಿಯರ್ಸ್ ತಂಡವು ಕಳೆದ ವರ್ಷ ಅವರ್ಸಾ ಪ್ರಿಮಿಯರ್ ಲೀಗ್ 2025ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ನಿರಂತರ ಜಯಗಳಿಂದ ತಂಡದ ಮಟ್ಟ ಮತ್ತಷ್ಟು ಎತ್ತರಕ್ಕೇರಿದೆ.

ಸಮಾಜ ಸೇವೆಯಲ್ಲೂ ಮುಂಚೂಣಿಯಲ್ಲಿ ಪ್ರಸಾದ್ ಗಾಂವಕರ
ಕಾರವಾರ–ಅಂಕೋಲಾ ಕ್ಷೇತ್ರದಲ್ಲಿ ಜನಸಂಖ್ಯೆಯಷ್ಟೇ ಅಲ್ಲದೆ ಶಿಕ್ಷಣ, ಕಲೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಮಂಚೂಣಿಯಲ್ಲಿರುವ ಕೊಂಕಣ ಮರಾಠ ಸಮುದಾಯದಲ್ಲಿ ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಪ್ರಸಾದ್ ಗಾಂವಕರ ಅವರು ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಕಲಾ, ವಾಣಿಜ್ಯ ಹಾಗೂ ತಾಂತ್ರಿಕ ಶಿಕ್ಷಣ ಈ ಮೂರು ವಿಭಾಗದಲ್ಲಿ ಪದವಿ ಪಡೆದಿದ್ದು, ಇನ್ನೂ ಉನ್ನತ ಶಿಕ್ಷಣವನ್ನು ಅಧ್ಯಯನ ಮಾಡುತ್ತಿರುವುದು ಇವರ ವಿಶೇಷತೆ.

ಶಿಕ್ಷಣಪ್ರೇಮಿಯಾಗಿರುವ ಇವರು ಅಂಗನವಾಡಿ ಶಾಲೆಗಳಿಗೆ ಪರಿಕರಗಳ ವಿತರಣೆ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ, ಆಶಾ ಕಾರ್ಯಕರ್ತೆಯರ ಸನ್ಮಾನ, ಅನಾರೋಗ್ಯದಲ್ಲಿರುವವರಿಗೆ ಆರ್ಥಿಕ ನೆರವು ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಸ್ವತಃ ಕ್ರಿಕೆಟ್ ಆಟಗಾರರಾಗಿರುವ ಅವರು, ಇಂದಿನ ಯುವಜನರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು, ದೈಹಿಕವಾಗಿ ಸದೃಢರಾಗಬೇಕು ಹಾಗೂ ಸಮಾಜ ಸಂಘಟಿತವಾಗಬೇಕು ಎಂಬ ಉದ್ದೇಶದಿಂದ ಕ್ರಿಕೆಟ್ ತಂಡವನ್ನು ಖರೀದಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ.

“ಪ್ರಸ್ತುತ ನಡೆಯುತ್ತಿರುವ ಟಿ-20 ವಿಶ್ವ ಕಪ್‌ನಲ್ಲಿ ಭಾರತ ತಂಡ ವಿಜಯಶಾಲಿಯಾಗಿ ಚಾಂಪಿಯನ್ ಆಗಿ ಹೊರಹೊಮ್ಮಲಿ.”
ಪ್ರಸಾದ್ ಗಾಂವಕರ, ಅಮದಳ್ಳಿ.

ಇದನ್ನೂ ಓದಿ/ಚಲಿಸುತ್ತಿದ್ದ ಒಮ್ನಿ ಬೆಂಕಿಗಾಹುತಿ : ಪ್ರಯಾಣಿಕರು ಪಾರು