ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ವಲಯದಲ್ಲಿ ಮಾಜಿ ಸಂಸದ Anant Kumar Hegde ಅವರ ಸಕ್ರಿಯ ರಾಜಕೀಯಕ್ಕೆ ಮರಳಿದ್ದಾರೆ ಎನ್ನುವ ಕುರಿತು ವ್ಯಾಪಕ ಚರ್ಚೆ ಸುರುವಾಗಿದೆ. ಬಿಜೆಪಿ ವಲಯದಲ್ಲಿ “ಅನಂತಕುಮಾರ ಹೆಗಡೆ ಬಿಜೆಪಿಗೆ ಮರಳುವುದು ಪಕ್ಕಾನಾ” ಎಂಬ ಮಾತುಗಳು ಹರಿದಾಡುತ್ತಿದೆ.
ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.ಆದರೆ ಈ ಬಗ್ಗೆ ಅನಂತಕುಮಾರ ಹೆಗಡೆ ಎಲ್ಲಿಯೂ ಹೇಳಿಕೊಂಡಿಲ್ಲ. ಇದನ್ನ ಗಮನಿಸಿದರೆ ಬಿಜೆಪಿಗೆ ಅನಂತಕುಮಾರ ಬರಲಿದ್ದಾರೆಬ್ಬ ಸುದ್ದಿಯನ್ನ ಬಿಜೆಪಿಗರೆ ಹಬ್ಬಿಸಿಕೊಳ್ಳುತ್ತಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿದೆ.
ಮಾರ್ಚ್ 8ರಂದು ಭಟ್ಕಳದ ಆಟೋ ಚಾಲಕರ ಗಣೇಶೋತ್ಸವ ಮೈದಾನದಲ್ಲಿ ನಡೆಯಲಿರುವ “ಹಿಂದೂ ಸಂಗಮ” ಕಾರ್ಯಕ್ರಮಕ್ಕೆ ಹೆಗಡೆ ಆಗಮಿಸಲಿದ್ದಾರೆ ಎಂಬ ಸುದ್ದಿ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಹರಡಿದೆ. ಆದರೆ ಈ ಬಗ್ಗೆ ಅನಂತಕುಮಾರ ಹೆಗಡೆ ಸ್ವತಃ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಅವರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸಹ ಕಾರ್ಯಕ್ರಮ ಹಾಜರಾಗುವ ಕುರಿತು ಯಾವುದೇ ಸ್ಪಷ್ಟ ಸೂಚನೆ ಇಲ್ಲದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ ಭವಿಷ್ಯದ ರಾಜಕೀಯ ರಣತಂತ್ರದ ದೃಷ್ಟಿಯಿಂದ ಅನಂತಕುಮಾರ ಹೆಗಡೆ ಪಾತ್ರ ಮಹತ್ವದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಒಂದೆಡೆ, ಸಂಘಟನೆಗೆ ಚೈತನ್ಯ ತುಂಬಬಲ್ಲ ನಾಯಕತ್ವದ ಅವಶ್ಯಕತೆ ಇದೆ ಎನ್ನುವ ಅಭಿಪ್ರಾಯ ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂಬ ಮಾತುಗಳೂ ಕೇಳಿಬರುತ್ತಿವೆ.
ಹೆಗಡೆ ತೀವ್ರ ಹಿಂದುತ್ವ ನಿಲುವುಗಳಿಂದಲೇ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದರು. ಇಂತಹ ಸಂದರ್ಭದಲ್ಲಿ “ಬಿಜೆಪಿಗೆ ಅನಂತಕುಮಾರ ಅನಿವಾರ್ಯವಾ?” ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ ಹೀಗಾಗಿಯೇ ಬಿಜೆಪಿಗರೆ ಇದನ್ನ ಹುಟ್ಟುಹಾಕಿದ್ದಾರೆನ್ನುವ ಬಿಜೆಪಿ ವಲಯದಿಂದಲ್ಲೇ ಕೇಳಿಬರುತ್ತಿದೆ.
ಭಟ್ಕಳದಲ್ಲಿ ನಡೆಯಲಿರುವ ಹಿಂದೂ ಸಂಗಮ ಕಾರ್ಯಕ್ರಮ ಹಿಂದೂ ಸಮಾವೇಶವೇ, ಅಥವಾ ರಾಜಕೀಯ ವೇದಿಕೆಯಾಗಬಹುದೇ ಎಂಬ ಕುತೂಹಲ ಸಹ ಇದೆ. ಜಿಲ್ಲೆಯಲ್ಲಿನ ಹಲವು ಹಿಂದುತ್ವಪರ ಸಂಘಟನೆಗಳು ಅಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಎನ್ನಲಾಗಿದೆ.
ಅನಂತಕುಮಾರ ಹೆಗಡೆ ಬರುವ ಬಗ್ಗೆ ಎಲ್ಲವೂ ಊಹಾಪೋಹಗಳ ಹಂತದಲ್ಲೇ ಇರುವುದರಿಂದ, ಮಾರ್ಚ್ 8ರಂದು ನಡೆಯುವ ಕಾರ್ಯಕ್ರಮವೇ ಸ್ಪಷ್ಟ ಚಿತ್ರಣ ನೀಡಲಿದೆ. ಅನಂತಕುಮಾರ ಹೆಗಡೆ ಅವರ ಮೌನವೇ ಇದೀಗ ರಾಜಕೀಯ ಕುತೂಹಲಕ್ಕೆ ಕಾರಣವಾಗಿದ್ದು, ಭಟ್ಕಳದ ಹಿಂದೂ ಸಂಗಮ ಉತ್ತರ ಕನ್ನಡ ರಾಜಕೀಯದಲ್ಲಿ ಹೊಸ ಅಧ್ಯಾಯ ತೆರೆದೀತೇ ಎಂಬ ಪ್ರಶ್ನೆ ಎದುರಾಗಿದೆ.

