ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ : ಸ್ವಾಸ್ಥ್ಯ ಸಮಾಜ ನಿರ್ಮಾಣದ ಆಶಯದೊಂದಿಗೆ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ದಾಂಡೇಲಿ ನಗರ ಠಾಣೆ ಮತ್ತು ಗ್ರಾಮೀಣ ಠಾಣೆಯ ಪೊಲೀಸರು ನಗರ ಹಾಗೂ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಇರುವ ರೌಡಿಶೀಟರ್ ಗಳ ಮನೆಗೆ ಇಂದು ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.
ದಾಂಡೇಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ರೌಡಿಶೀಟರ್ ಗಳ ಮನೆಗಳಿಗೆ ಭೇಟಿ ನೀಡಿದ ಪೊಲೀಸರು, ರೌಡಿಶೀಟರ್ ಗಳ ಮನೆಗಳನ್ನು ಜಾಲಾಡಿಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಸದಂತೆ, ಕಾನೂನನ್ನ ಕೈಗೆ ತೆಗೆದುಕೊಳ್ಳದಂತೆ, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸದಂತೆ ಎಚ್ಚರಿಕೆಯ ಪಾಠದೊಂದಿಗೆ ತಾಕೀತು ಮಾಡಿದ್ದಾರೆ.
ಸ್ವತ: ಡಿವೈಎಸ್ಪಿ ಶಿವಾನಂದ ಮದರಖಂಡಿಯವರ ನೇತೃತ್ವದಲ್ಲಿ ನಗರ ಠಾಣೆಯ ಪಿಎಸ್ಐ ಗಳಾದ ಅಮೀನ್ ಅತ್ತಾರ್ ಕಿರಣ್ ಪಾಟೀಲ್ ಹಾಗೂ ಗ್ರಾಮೀಣ ಭಾಗದ ಪಿಎಸ್ಐ ಗಳಾದ ಜಗದೀಶ ಮತ್ತು ಶಿವಾನಂದ ನಾವದಗಿ ಹಾಗೂ ಪೊಲೀಸರ ತಂಡದೊಂದಿಗೆ ರೌಡಿಶೀಟರ್ ಗಳ ಮನೆಗಳಿಗೆ ದಾಳಿ ಮಾಡಿ ಪರಿಶೀಲನೆಯನ್ನು ನಡೆಸಿ, ತಾಕೀತು ಮಾಡಿದ್ದಾರೆ.
ದಾಂಡೇಲಿ ನಗರ ಠಾಣೆಯ ರೌಡಿಶೀಟರ್ ಗಳಾದ ಮಂಜುನಾಥ ಆರ್.ಡಿ, ಅಂತೋನಿ ಆರ್.ಡಿ, ಫೈರೋಜ್ ಎ.ಎಸ್.ಡಿ, ಬಾಬು ಆರ್.ಡಿ, ಗಣೇಶ ಎ.ಕೆ ಹಾಗೂ ಗ್ರಾಮೀಣ ಭಾಗದಲ್ಲಿರುವ ರೌಡಿ ಶೀಟರ್ ಗಳಾದ ಮಂಜುನಾಥ ಪಿ.ಪಿ, ಗುರುನಾಥ.ಎಲ್ ಮತ್ತು ಕೃಷ್ಣ.ಎಸ್ ಇವರ ಮನೆಗಳಿಗೆ ದಾಳಿ ನಡೆಸಿ, ಪರಿಶೀಲನೆಯನ್ನು ನಡೆಸಿ, ಎಚ್ಚರಿಕೆಯನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಮೂರು ದಿನದ ಈ ಜೀವನದಲ್ಲಿ ನೆಮ್ಮದಿ ಸಂತೃಪ್ತಿಯ ಜೀವನವನ್ನು ನಡೆಸಬೇಕೆಂದು ಬುದ್ದಿ ಮಾತನ್ನು ಹೇಳಲಾಯಿತು. ಇನ್ನೊಬ್ಬರಿಗೆ ನೋವು ಕೊಟ್ಟು ಬದುಕುವುದಕ್ಕಿಂತ, ಇನ್ನೊಬ್ಬರ ಕಣ್ಣೀರನ್ನು ಒರೆಸಿ ಬದುಕುವ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಇದೇ ಸಂದರ್ಭದಲ್ಲಿ ಕರೆ ನೀಡಲಾಯ್ತು.
ಇದನ್ನೂ ಓದಿ