ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಕುಮಟಾದ ಯಶೋಧರ ನಾಯ್ಕ ಟ್ರಸ್ಟ್ ಸದಸ್ಯರಿಗೆ ಸಂಬಂಧಿಸಿದ ಸುಮಾರು 15 ಲಕ್ಷ ರೂ. ಹಣವನ್ನು ಬ್ಯಾಂಕ್‌ಗೆ ಮರುಪಾವತಿ ಮಾಡದೇ ದುರುಪಯೋಗ ಪಡಿಸಿಕೊಂಡು, ಕೊಲೆ ಬೆದರಿಕೆ ಮತ್ತು ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇರೆಗೆ ಟ್ರಸ್ಟ್ ಸಂಪನ್ಮೂಲ ವ್ಯಕ್ತಿ ಮಹಿಳಾ ಸಿಬ್ಬಂದಿಯ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿ ತಾಲೂಕಿನ ಇಂದಿರಾನಗರ ನಿವಾಸಿ ಮುಸ್ಕಾನ್ ಅಬ್ದುಲ್ ಗಪೂರ ಎಂಬಾಕೆಯ ವಿರುದ್ಧ ಯಶೋಧರ ನಾಯ್ಕ ಟ್ರಸ್ಟ್ನ ಅಧ್ಯಕ್ಷರಾದ ಯಶೋಧರ ನಾಯ್ಕ ಅವರು ಪ್ರಕರಣ ದಾಖಲಿಸಿದ್ದಾರೆ. ಆರೋಪಿತೆಯು ನಮ್ಮ ಟ್ರಸ್ಟ್‌ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಳೆದ ನಾಲ್ಕುವರೆ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಅವರ ಕಾರ್ಯ ವ್ಯಾಪ್ತಿಯಲ್ಲಿ ಸುಮಾರು 60 ಸಂಘಗಳು ಕಾರ್ಯ ನಿರ್ವಹಿಸುತಿತ್ತು. ಈ ಸಂಘಗಳಿಗೆ ಸಾಲ ಕೊಡಿಸುವ ಮತ್ತು ಸಾಲ ಪಡೆದ ಸಂಘಗಳಿಂದ ಕೆವಿಜಿ ಬ್ಯಾಂಕ್‌ಗೆ ಮರುಪಾವತಿ ಪಾಡಿಸುವ ಕಾರ್ಯ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಸಾಲ ಪಡೆದ ಸುಮಾರು 50 ಸಂಘಗಳಿಂದ ಸಾಲದ ಮೊತ್ತವನ್ನು ಬ್ಯಾಂಕ್‌ಗೆ ಭರಿಸುವುದಾಗಿ ಸಂಘದ ಸದಸ್ಯರಿಂದ ಹಣ ಪಡೆದು ಬ್ಯಾಂಕ್‌ಗೆ ಭರಿಸದೇ ಸುಮಾರು 15ಲಕ್ಷ ರೂ. ದುರುಪಯೋಗ ಮಾಡಿಕೊಂಡು ಬ್ಯಾಂಕ್‌ಗೆ ನಂಬಿಕೆದ್ರೋಹ ಮಾಡಿದ್ದಾರೆ.

ಅಲ್ಲದೇ ನಮ್ಮ ಟ್ರಸ್ಟ್‌ಗೆ ಮತ್ತು ಸಂಘದ ಸದಸ್ಯರಿಗೆ ಆರ್ಥಿಕ ಹಾನಿ ಮಾಡುವ ಮೂಲಕ ಅವ್ಯವಹಾರ ನಡೆಸಿದ್ದಾರೆ. ಈ ಬಗ್ಗೆ ಟ್ರಸ್ಟ್ ಸಿಬ್ಬಂದಿ ಮೂಲಕ ವಿಚಾರಿಸಿದರೆ ಕೆಲಸ ಬಿಡುವುದಾಗಿ ತಿಳಿಸಿದ ಈಕೆ ಜ.18ರಂದು ಶಿರಸಿ ಕಚೇರಿಗೆ ಬಂದಾಗ, ದುರುಪಯೋಗಪಡಿಸಿಕೊಂಡ 15 ಲಕ್ಷ ರೂ. ಅನ್ನು ಮರುಪಾವತಿಸುವುದಾಗಿ ತಪ್ಪೊಪ್ಪಿಕೊಂಡಿದ್ದು. ಬಳಿಕ ಜ. 20ರಂದು ನಮ್ಮ ಟ್ರಸ್ಟ್ ಸಿಬ್ಬಂದಿ ವಿನಾಯಕ ಅವರ ಮೊಬೈಲ್‌ಗೆ ಕರೆ ಮಾಡಿದ ಆರೋಪಿತೆಯ ಸಹೋದರ ಮೀರಾ ಸಾಬ್ ಎಂಬಾತ ನನ್ನ ಸಹೋದರಿಯ ಮೇಲೆ ಟ್ರಸ್ಟ್ ಅಧ್ಯಕ್ಷರು ಲಕ್ಷಾಂತರ ಹಣ ದುರುಪಯೋಗ ಪಡಿಸಿಕೊಂಡ ಆರೋಪ ಮಾಡಿದ್ದಾರೆ.

ಅವರನ್ನು ಹತ್ಯೆ ಮಾಡುತ್ತೇನೆ. ನಿಮ್ಮ ಅಧ್ಯಕ್ಷರೇ ನನ್ನ ತಂಗಿಗೆ 25ಲಕ್ಷ ನೀಡಬೇಕು. ಇಲ್ಲವಾದರೆ ನನ್ನ ತಂಗಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊರಿಸಿ, ಸುಳ್ಳು ಪ್ರಕರಣ ದಾಖಲಿಸುವುದಲ್ಲದೇ ಸುಳ್ಳು ಸುದ್ದಿ ವೈರಲ್ ಮಾಡಿ ಅಧ್ಯಕ್ಷರ ಮಾನ ಹರಾಜ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕುಮಟಾ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದು, ಸಮಗ್ರ ತನಿಖೆ ಕೈಗೊಂಡಿದ್ದಾರೆ.

ಇನ್ನಷ್ಟು ಓದಿ