ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಅದಿರು ಪ್ರಕರಣದಲ್ಲಿ ಶಾಸಕ ಸತೀಶ ಸೈಲ್ಗೆ ಶಿಕ್ಷೆ ಪ್ರಕಟವಾಗಿದೆ.ಈ ಶಿಕ್ಷೆಗೆ ಹೈಕೋರ್ಟ ತಡೆಯಾಜ್ಞೆ ನೀಡದೇ ಇದ್ದಲ್ಲಿ ಸೈಲ್ ಅನರ್ಹರಾಗಿ, ತಮ್ಮ ಶಾಸಕ ಸ್ಥಾನವನ್ನು ಕಳೆದುಕೊಳ್ಳಬಹುದು, ಒಂದು ವೇಳೆ ಸೈಲ್ ಅನರ್ಹರಾದಲ್ಲಿ ಕಾರವಾರ-ಅಂಕೋಲಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಲಿದೆ. ಎಲ್ಲದಕ್ಕೂ ಮೊದಲೆ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿದೆ. ಎಲ್ಲರ ಕಣ್ಣು ಈಗ ಹೈಕೋರ್ಟ ತೀರ್ಪಿನ ಮೇಲೆ ನೆಟ್ಟಿದೆ.
ಕಳೆದ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿಯೊಂದಿಗಿನ ಅಸಮಾಧಾನ' ದಿಂದ ನಿರ್ಲಿಪ್ತವಾಗಿದ್ದ ಆರ್.ಎಸ್.ಎಸ್ ನಿಂದ ಇಡೀ ದೇಶದಲ್ಲಿ ಬಿಜೆಪಿ ಕನಿಷ್ಠ ೪೦-೫೦ ಸ್ಥಾನಗಳನ್ನು ಕಳೆದುಕೊಳ್ಳಬೇಕಾಗಿದ್ದು ಈಗ ಇತಿಹಾಸ. ಈಗ ಪಕ್ಷ ಹಾಗೂ ಸಂಘಪರಿವಾರದ ನಡುವೆ ಸಮನ್ವಯತೆ ಮೂಡಿದೆ. ಈ ನಡುವೆ ಕಾರವಾರ ಕ್ಷೇತ್ರದಲ್ಲಿ ಉಪಚುನಾವಣೆ ಘೋಷಣೆಯಾದರೇ ಆರ್.ಎಸ್.ಎಸ್ ತನ್ನ
ನೀಲಿ ಕಣ್ಣಿನ ಹುಡುಗ’ (Blue eyed boy) ಹಿಂದೂ ಫೈರ್ ಬ್ಯ್ರಾಂಡ್ ಅನಂತಕುಮಾರ ಹೆಗಡೆಯನ್ನು ಕಣಕ್ಕೀಳಿಸಿ,ರಾಜ್ಯ ರಾಜಕಾರಣದಲ್ಲಿ ಮತ್ತೇ ಹಿಂದುತ್ವದ ಅಜೆಂಡಾ ಫೀಕ್ಸ್ ಮಾಡುವ ಮೂಲಕ ಹೊಸ ದಾಳ ಉರುಳಿಸಲು ಮುಂದಾಗಿದೆ.
ರಾಜ್ಯದ ಕರಾವಳಿ ಹೇಳಿ ಕೇಳಿ ಹಿಂದುತ್ವದ ಭದ್ರ ಕೋಟೆ. ಇಲ್ಲಿ ಜಾತಿ, ಅಭಿವೃದ್ಧಿಯ ರಾಜಕಾರಣಕ್ಕಿಂತ ಹಿಂದುತ್ವ ವಿಷಯವೇ ಮತಗಳಿಕೆಯಲ್ಲಿ ನಿರ್ಣಾಯಕ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದೊಂದಿಗಿನ ಅಸಮಾಧಾನದಿಂದ ಚುನಾವಣಾ ಪ್ರಚಾರಕ್ಕೆ ತೆರಳದ ಅನಂತಕುಮಾರ ಹೆಗಡೆ, ಭಟ್ಕಳ, ಕಾರವಾರ, ಶಿರಸಿ ಹಾಗೂ ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿಯ ಹಿನ್ನೆಡೆಗೆ ಕಾರಣರಾಗಿದ್ದರು. ಆನಂತರ ಸಂವಿಧಾನ ಬಗೆಗಿನ ಹೇಳಿಕೆಯಿಂದ ಸಂಸದ ಸ್ಥಾನ ಸಹ ಕೈತಪ್ಪಿತ್ತು. ನಂತರ ಬಹುತೇಕ ಸಕ್ರಿಯ ರಾಜಕೀಯದಿಂದ ದೂರವೇ ಉಳಿದಿದ್ದರು.
ಈ ನಡುವೆ ರಾಜ್ಯದಲ್ಲಿ ಹಿಂದುತ್ವದ ವಿಷಯದಲ್ಲಿ ಗಟ್ಟಿಯಾಗಿ ನಿಲ್ಲುವ, ಮಾತನಾಡುವ ವಿಜಯಪುರ ಶಾಸಕ ಯತ್ನಾಳ ಹೊರತು ಪಡಿಸಿ ಸದ್ಯ ಯಾರೂ ಇಲ್ಲ. ಹೀಗಾಗಿ ಈ ಕೊರತೆ ನೀಗಿಸಲು ಹಾಗೂ ಮುಂಬರುವ ವಿಧಾನಸಭೆ ಚುನಾವಣೆಯ ವೇಳೆ `ಹಿಂದುತ್ವ’ ಅಜೆಂಡಾದ ಮೇಲೆ ಸಂಘಟನೆ ಗಟ್ಟಿಗೊಳಿಸಲು ಆರ್.ಎಸ್.ಎಸ್ ಚಿಂತನೆಯಲ್ಲಿ ತೊಡಗಿದೆ.
ಹೀಗಾಗಿ ತನ್ನ ಶಿಷ್ಯನನ್ನು ಚುನಾವಣೆಯಲ್ಲಿ ಕಣಕ್ಕೀಳಿಸುವ ಮೂಲಕ ರಾಜ್ಯ ರಾಜಕಾರಣಕ್ಕೆ ತರಲು ಮುಂದಾಗಿದೆ. ಸಂಘದ ಪ್ರಮುಖರು ಬಿಜೆಪಿಯೊಂದಿಗೆ ಮುನಿಸಿಕೊಂಡಿರುವ ಅವರನ್ನು ಮನವೋಲಿಸಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ.
ಒಂದೊಮ್ಮೆ ಅನಂತಕುಮಾರ ಹೆಗಡೆಯವರನ್ನು ಕಣಕ್ಕೀಳಿಸಿದರೇ, ಬಿಜೆಪಿಯಲ್ಲಿ ಭಿನ್ನಮತದ ಸಾಧ್ಯತೆ ಕಡಿಮೆ. ಏಕೆಂದರೆ ಅನಂತಕುಮಾರ ತನ್ನ ಮೊನಚಾದ ಮಾತು, ಗಟ್ಟಿಯಾದ ಹಿಂದುತ್ವದ ಮೂಲಕ ಕರಾವಳಿಯಲ್ಲಿ ಅಷ್ಟೇ ಅಲ್ಲದೇ ಉತ್ತರಕರ್ನಾಟಕದಲ್ಲಿ ಅಸಂಖ್ಯಾತ ಕಾರ್ಯಕರ್ತರನ್ನು, ಅಭಿಮಾನಿಗಳನ್ನು ಹೊಂದಿದ್ದಾರೆ. ಕಾರವಾರ ಕ್ಷೇತ್ರದಲ್ಲೂ ಸಹ ಹೆಗಡೆ ಹೆಚ್ಚಿನ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದು, ಅವರ ಚುನಾವಣೆಗೆ ಅವರೇ `ಸ್ಟಾರ್ ಪ್ರಚಾರಕ’.
ನಿಲುಕದ ನಕ್ಷತ್ರದಂತೆ ರಾಜಕೀಯ ಕೂಡಾ ಊಹೆಗೆ ನಿಲುಕದ್ದು, ಒಟ್ಟಾರೇ ಕಾರವಾರ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳು, ಲೆಕ್ಕಾಚಾರಗಳು ತೆರೆಯ ಹಿಂದೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
ಗಮನಿಸಿ