ಸುದ್ದಿಬಿಂದು ಬ್ಯೂರೋ
ಕಾರವಾರ : ಮಾಜಿ ಸಿ ಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಆದ ಬೆನ್ನಲ್ಲೆ ಕಾಂಗ್ರೆಸ್ ಹಿರಿಯ ನಾಯಕ ಬಿ ಕೆ ಹರಿಪ್ರಸಾದ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ‌ಕಾರ್ಯಕರು ಪೋಸ್ಟ್ ಶುರುಮಾಡಿದ್ದಾರೆ.

ಮನೆಮಕ್ಕಳನ್ನ ಗೌರವಿಸಿ, ಮಂದಿ ಮಕ್ಕಳನ್ನಲ್ಲ, ಎಂದು ಪೋಸ್ಟ್ ಮಾಡಲಾರಂಭಿಸಿದ್ದಾರೆ,’ಮನೆಕಟ್ಟಿದವರಿಗೆ ಮೊದಲು ಗೌರವ ನೀಡಿ, ಅನ್ನ ತಿಂದ‌ ಮನೆಗೆ ದ್ರೋಹ ಬಗೆದವರಿಗಲ್ಲ, ಹೀಗೆ ಹತ್ತಾರು ರೀತಿಯಲ್ಲಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟ್ ಮಾಡುತ್ತಿದ್ದಾರೆ.ಬಿ ಕೆ ಹರಿಪ್ರಸಾದ ಪಕ್ಷ ನಿಷ್ಠೆ ಇಟ್ಟುಕೊಂಡು ಬಂದವರಾಗಿದ್ದಾರೆ ಎಂದು ಬರೆದುಕೊಳ್ಳಲಾಗುತ್ತಿದೆ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಲ್ಲಿ ಟಿಕೆಟ್ ನೀಡಿಲ್ಲ ಎನ್ನುವ ಒಂದೆ ಒಂದು ಕಾರಣಕ್ಕೆ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡು ಬಳಿಕ ಬಿಜೆಪಿ ವಿರುದ್ಧ ಹಿಗ್ಗಾಮುಗ್ಗವಾಗಿ ಬಾಯಿಗೆ ಬಂದ ಹಾಗೆ ಬೈದಾಡಿಕೊಂಡಿದ್ದರು. ಆದರೆ ಇದೀಗ ಲೋಕಸಭಾ ಚುನಾವಣೆ ಎದುರಾಗುತ್ತಿರುವ ಸಮಯದಲ್ಲಿ ಮತ್ತೆ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದು ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ.