ಸುದ್ದಿಬಿಂದು ಬ್ಯೂರೋ…
ಶಿರಸಿ : ಸಾರ್ವಜನಿಕರಿಗೆ ತೊಂದರೆ ಮಾಡಿ ಕುಮಟಾ ಶಿರಸಿ ಹೆದ್ದಾರಿ (Kumta Sirsi Road) ಬಂದ್ ಮಾಡಿದರೆ ಅಂಥವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ(Minister Mankalu Vaidya) ತಿಳಿಸಿದ್ದಾರೆ.
ಕುಮಟಾದಲ್ಲಿ ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರದ ಕುರಿತು ಮಾತನಾಡಿದ ಸಚಿವರು ಕುಮಟಾ ರಸ್ತೆಯನ್ನು ಯಾವುದೇ ಕಾರಣಕ್ಕೂ ಬಂದ್ ಮಾಡುವಂತಿಲ್ಲ. ರಸ್ತೆ ಬಂದ್ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ.ಈ ಹಿನ್ನೆಲೆಯಲ್ಲಿ ಪಕ್ಕದಲ್ಲಿ ವಾಹನ ಓಡಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ರಸ್ತೆ ಕಾಮಗಾರಿ ನಡೆಸಬೇಕು ಎಂದು ಆದೇಶಿಸಿದರು.
ಈ ಸಂಬಂಧ ಒಂದು ಆದೇಶವನ್ನೇ ಹೊರಡಿಸಿ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರಿಗೆ ಸೂಚನೆ ನೀಡಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಾನೂ ಸ್ಥಳ ಪರಿಶೀಲನೆ ಮಾಡಿದ್ದೆ. ಯಾವುದೇ ಕಾರಣಕ್ಕೂ ರಸ್ತೆ ಬಂದ್ ಮಾಡಬಾರದು ಎಂದು ಒತ್ತಾಯಿಸಿದ್ದೆ, ರಸ್ತೆ ಕಾಮಗಾರಿ ಇನ್ನೂ ನಿರೀಕ್ಷೆಯಷ್ಟು ಮುಗಿದಿಲ್ಲ.ವಾಹನ ಓಡಾಟ ಬಂದ್ ಮಾಡಿದರೂ ಏಳು ತಿಂಗಳಲ್ಲಿ ರಸ್ತೆ ಕಾಮಗಾರಿ ಮುಗಿಸಲು ಸಾಧ್ಯವಿಲ್ಲ ಎಂದರು.
ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766 ಇ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ರಸ್ತೆ, ಸೇತುವೆ ನಿರ್ಮಾಣಕ್ಕಾಗಿ ನವೆಂಬರ್ 1ರಿಂದ 2024 ರ ಮೇ 31 ರವರೆಗೆ ರಸ್ತೆಯಲ್ಲಿ ಎಲ್ಲ ರೀತಿಯ ವಾಹನ ಸಂಚಾರ ಬಂದ್ ಮಾಡಲಾಗುವುದು ಎಂದು ಶಿರಸಿ ಎಸಿ ದೇವರಾಜ್ ಅವರು ಸಭೆ ನಡೆಸಿ ಪ್ರಕಟಣೆ ನೀಡಿದ್ದರು. ನಂತರ ಸಭೆ ನಡೆಸಿದ್ದ ಭೀಮಣ್ಣ ನಾಯ್ಕ ಸ್ಥಳೀಯ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಸೂಚಿಸಿದ್ದರು.