ಸುದ್ದಿಬಿಂದು ಬ್ಯೂರೋ
ಕುಮಟ : ಶಿರಸಿ-ಕುಮಟಾ ಹೆದ್ದಾರಿಯ ರಾಗಿ ಹೊಸಳ್ಳಿ ಬಳಿ ಮತ್ತೆ ಗುಡ್ಡಕುಸಿತವಾಗಿದ್ದು, ಹೆದ್ದಾರಿ ಸಂಪೂರ್ಣ ಕೆಸರುಮಯವಾಗಿದ್ದು, ಈ ವೇಳೆ ಅದೆ ಮಾರ್ಗದಲ್ಲಿ ಚಲಿಸುತ್ತಿದ್ದ ಕಾರು ಮಣ್ಣಿನಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.
ಕಳೆದ ಕೆಲ ದಿನಗಳಿಂದ ನಿರಂತರಾಗಿ ಸುತಿಯುತ್ತಿರುವ ಮಳೆಯಿಂದಾಗಿ ಶಿರಸಿ-ಕುಮಟಾ ಹೆದ್ದಾರಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಗುಡ್ಡ ಕುಸಿತವಾಗಿ ಸಂಚಾರ ಕೆಲ ಗಂಟೆಗಳವರೆಗೆ ಸಂಪೂರ್ಣ ಬಂದಾಗಿತ್ತು. ಬಳಿಕ ಮಣ್ಣು ತೆರವುಗೊಳಿಸಲಾಗಿತ್ತಾದರು ಇದೇ ಪ್ರದೇಶದಲ್ಲಿ ಮತ್ತೆ ಕುಸಿತವಾಗಿ ಮಣ್ಣು ಹೆದ್ದಾರಿಗೆ ಬಂದಿದೆ. ಸದ್ಯ ಜೆಸಿಬಿ ಮೂಲಕ ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಆದರೆ ಈ ಪ್ರದೇಶದಲ್ಲಿ ಹೆದ್ದಾರಿ ಸಂಪೂರ್ಣ ಕೆಸರುಮಯವಾದ ಕಾರಣ ವಾಹನಗಳು ಸಂಚರಿಸುವಾಗ ಕೆಸರಿನಲ್ಲಿ ಸಿಲುಕಿಕೊಂಡು ಪರದಾಡಬೇಕಾಗಿದೆ. ಬುಧವಾರ ಮುಂಜಾನೆ ಕೂಡ ಕಾರೊಂದು ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಹೆದ್ದಾರಿ ಕಾಮಗಾರಿಯ ಕಾರ್ಮಿಕರು, ಪ್ರಯಾಣಿಕರು ವಾಹನವನ್ನು ತಳ್ಳಿ ಮೇಲೆತ್ತಲು ಪ್ರಯತ್ನಿಸಿದರು ಕೂಡ ಸಾಧ್ಯವಾಗಿರಲಿಲ್ಲ. ಕೊನೆಗೆ ಜೆಸಿಬಿ ಮೂಲಕ ಸಿಲುಕಿರುವ ವಾಹನಕ್ಕೆ ಹಗ್ಗ ಕಟ್ಟಿ ಎಳೆದು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.