ಶಿರಸಿ: ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಹೇಳಿಕೆ ನೀಡಿರುವ ವೆಂಕಟೇಶ ಹೆಗಡೆ ಹೊಸಬಾಳೆಯವರ ಮನವೊಲಿಸಿ,ಎಲ್ಲರೂ ಒಗ್ಗೂಡಿ ಪಕ್ಷದ ಅಭ್ಯರ್ಥಿಯಾಗಿರುವ ಭೀಮಣ್ಣ ನಾಯ್ಕ ಗೆಲುವಿಗೆ ಶ್ರಮಿಸಲಾಗುವುದು ಎಂದು ಕಿಸಾನ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶ್ರೀಪಾದ ಹೆಗಡೆ ಕಡವೆ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವೆಂಕಟೇಶ ಹೆಗಡೆ ಹೊಸಬಾಳೆ ಕಾಂಗ್ರೆಸ್ ನ ಪ್ರಶ್ನಾತೀತ ಹಿರಿಯ ನಾಯಕರಾಗಿದ್ದಾರೆ. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಮತ್ತು ಪಕ್ಷ ಸಂಘಟಿಸಿದ ಅನುಭವ ಅವರಲ್ಲಿದೆ. ಅವರ ಸಂಘಟನೆ ಕಾರ್ಯತಂತ್ರ ಮತ್ತು ಅನುಭವ ಪಕ್ಷಕ್ಕೆ ಎಂದೂ ಅವಶ್ಯವಿದೆ. ಅ ನಿಟ್ಟಿನಲ್ಲಿ ಹೊಸಬಾಳೆಯವರ ಮನವೊಲಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಭೀಮಣ್ಣ ನಾಯ್ಕ ಗೆಲುವಿಗೆ ಶಕ್ತಿ ಮೀರಿ ಎಲ್ಲರೂ ಸಂಘಟನಾತ್ಮಕವಾಗಿ ಪ್ರಯತ್ನಿಸುತ್ತೇವೆ.

ಕ್ಷೇತ್ರದ ಜನತೆ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಕ್ಕೆ ಬೇಸತ್ತಿದ್ದಾರೆ. ಈ ಸಂದರ್ಭದಲ್ಲಿ ವಯಕ್ತಿಕ ಹಿತಾಸಕ್ತಿಗಿಂತ ಜನರ ಹಿತಾಸಕ್ತಿಯೇ ಪ್ರಥಮ ಆದ್ಯತೆಯಾಗಬೇಕಿದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯುವ ಸಾಧ್ಯತೆ ಇರುವದರಿಂದ ಶಿರಸಿ ಸಿದ್ದಾಪುರ ಕ್ಷೇತ್ರದ ಮತದಾರರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಕ್ಷದ ನಿಲುವಿಗೆ, ನಿರ್ಣಯಕ್ಕೆ ಬದ್ಧ:
ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಸಾಕಷ್ಟು ವರ್ಷಗಳಿಂದ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ನಾನೂ ಸಹ ಭಾಗಿಯಾಗಿದ್ದೇನೆ. ಅದೇ ಕಾರಣದಿಂದ ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ತಾನು ಪ್ರಬಲ ಅಕಾಂಕ್ಷಿಯಾಗಿದ್ದೆ. ಆದರೆ ಪಕ್ಷವು ಈ ಬಾರಿ ಕೆಪಿಸಿಸಿ ಕಾರ್ಯದರ್ಶಿ, ಮಾಜಿ ಜಿಲ್ಲಾಧ್ಯಕ್ಷರು, ನಮ್ಮೆಲ್ಕರ ಮಾರ್ಗದರ್ಶಕರಾಗಿರುವ ಭೀಮಣ್ಣ ನಾಯ್ಕರಿಗೆ ಅವಕಾಶ ನೀಡಿದೆ. ಈ ನಿಟ್ಟಿನಲ್ಲಿ ಅವರನ್ನು ಅಭಿನಂದಿಸುವುದರ ಜೊತೆಗೆ ಪಕ್ಷದ ಗೆಲುವಿಗೆ ಬೇಕಾದ ಪೂರ್ಣ ಪ್ರಯತ್ನ ಮಾಡಲಾಗುವುದು.

ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪನವರ ಗರಡಿಯಲ್ಲಿ ಪಳಗಿರುವ ಭೀಮಣ್ಣ‌ನಾಯ್ಕ, ಹಿಂದುಳಿದ ವರ್ಗದ, ಕ್ಷೇತ್ರದ ಎಲ್ಲ ಸಮುದಾಯ ಜನರ ಆಶಾಕಿರಣವಾಗಿದ್ದಾರೆ. ಅವರ ಜೊತೆಗೂಡಿ ಕ್ಷೇತ್ರದ ಪ್ರತಿ ಹಳ್ಳಿಗೆ ಭೇಟಿ ನೀಡಿ, ಕಾರ್ಯಕರ್ತರೊಂದಿಗೆ ಪಕ್ಷವನ್ನು ಗೆಲ್ಲಿಸುವಲ್ಲಿ ಸಾಂಘಿಕ ಹೋರಾಟ ಮಾಡಲು ಬದ್ಧನಿದ್ದೇನೆ ಎಂದು ಅವರು ತಿಳಿಸಿದ್ದಾರೆ.