ಸುದ್ದಿಬಿಂದು ಬ್ಯೂರೋ ವರದಿ
ಹಳಿಯಾಳ:(Haliyal) ಬಲೂನ್ ಊದಲು ಹೋಗಿ ಗಂಟಲಿನಲ್ಲಿ ಸಿಲುಕಿ 13 ವರ್ಷದ ಬಾಲಕನ ಮೃತಪಟ್ಟಿರುವ ಘಟನೆ.ಉತ್ತರ ಕನ್ನಡ ಜಿಲ್ಲೆ ಹಳಿಯಾಳ‌ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ‌ ನಡೆದಿದೆ.

ನವೀನ ನಾರಾಯಣ ಬೆಳಗಾಂವಕರ (13)ಮೃತ ಬಾಲಕನಾಗಿದ್ದಾನೆ.ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯಾಗಿದ್ದಾನೆ. ಭಾನುವಾರ ರಾತ್ರಿ ಬಾಲಕ ಮನೆಯಲ್ಲಿ ಬಲೂನಿಗೆ ಬಾಯಿಂದ ಗಾಳಿ‌ ತುಂಬುವ ಸಂದರ್ಭದಲ್ಲಿ ಉಲ್ಟಾ ಹೊಡೆದ ಬಲೂನ್ ನೇರವಾಗಿ ಬಾಲಕನ ಗಂಟಲಿನಲ್ಲಿ ಸಿಲುಕಿದೆ. ಇದರಿಂದ ಶ್ವಾಸ ತೆಗೆದುಕೊಳ್ಳಲಾಗದೆ ಬಾಲಕ ಸ್ಥಳದಲ್ಲಿ ಬಿದ್ದು ಒದ್ದಾಡುತ್ತಿದ್ದನ್ನು ಕಂಡ ಮನೆಯವರು ಬಲೂನ್ ತೆಗೆಯಲು ಹರಸಾಹಸ ಪಟ್ಟಿದ್ದಾರೆ.

ಆದರೇ ಅದಾಗಲೆ ನೇರವಾಗಿ ಗಂಟಲಿಲ್ಲಿ ಭದ್ರವಾಗಿ ಸಿಕ್ಕಿ ಹಾಕಿಕೊಂಡ ಬಲೂನ್ ಮೂಗು ಹಾಗೂ ಬಾಯಿಂದಲೂ ಶ್ವಾಸ ತೆಗೆದುಕೊಳ್ಳಲಾಗದ ಹಾಗೆ ಬ್ಲಾಕ್ ಮಾಡಿ ಬಾಲಕನ ಪ್ರಾಣವನ್ನೇ ಕಿತ್ತುಕೊಂಡಿದೆ.

ಎಷ್ಟೇ ಪ್ರಯತ್ನ ಪಟ್ಟು ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಿದಾಗ ವೈದ್ಯರು ತಪಾಸಣೆ ನಡೆಸಿ ಬಾಲಕ ಮೃತಪಟ್ಟಿರುವ ಬಗ್ಗೆ ಖಚಿತ ಪಡಿಸಿದ್ದಾರೆ. ಬಾಲಕನ ಸಾವಿನಿಂದ ಜೋಗನಕೊಪ್ಪ ಗ್ರಾಮದಲ್ಲಿ ನಿರವ ಮೌನ ಆವರಿಸಿದೆ. ಕುಟುಂಬಸ್ಥರು ಹಾಗೂ ಸಂಬಂಧಿಗಳ ರೋಧನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ಹಳಿಯಾಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಮನಿಸಿ