suddibindu.in
ಕಾರವಾರ :`ಲೋಕಸಭಾ ಅಧಿವೇಶನ ಪ್ರಾರಂಭವಾಗಿರುವುದರಿಂದ ಅಧಿವೇಶನದಲ್ಲಿ ಪಾಲ್ಗೊಳಲು ದೆಹಲಿಗೆ ತೆರಳಿರುತ್ತೇನೆ.ಆದ್ದರಿಂದ ದಿನಾಂಕ 12/08/2024ರವರೆಗೆ ನಾನು ಕ್ಷೇತ್ರದಲ್ಲಿ ಲಭ್ಯವಿರುವುದಿಲ್ಲ” ಎನ್ನುವ ವಿಶ್ವೇಶ್ವರ ಹೆಗಡೆ ಚಿತ್ರ ಸಹಿತ ಪೋಸ್ಟರ್ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದೆ.
ಸತತ 6ಬಾರಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗ ಮತ್ತು ಘಟ್ಟದ ಭಾಗದಲ್ಲಿ ಶಾಸಕರಾದ ಅನುಭವವಿರುವ ಕಾಗೇರಿ ಅವರಿಗೆ ಜಿಲ್ಲೆಯ ಸಮಗ್ರ ಚಿತ್ರಣ ಗೊತ್ತಿದೆ. ಅವರು ಶಿಕ್ಷಣ ಸಚಿವರಾಗಿ, ಉ.ಕ. ಜಿಲ್ಲೆಯ ಉಸ್ತುವಾರಿ ಸಚಿವರಾಗಿ, ವಿಧಾನಸಭೆಯ ಸಭಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇಷ್ಟೊಂದು ಅನುಭವವಿರುವ ವ್ಯಕ್ತಿ ಜಿಲ್ಲೆಯ ಜನರ ಕಷ್ಟ ಕಾಲದಲ್ಲಿ ನೆರವಾಗದೆ ದೆಹಲಿ “ಅಧಿವೇಶನ”ದ ನೆಪ ಹೇಳುತ್ತಿರುವುದು ಜಿಲ್ಲೆಯ ಜನರಿಗೆ ಬಾಲೀಶವೆನಿಸಿದೆ.
ಇದನ್ನೂ ಓದಿ
- ಅನಂತಕುಮಾರ ಹೆಗಡೆ ಬೆಂಬಲಿಗರಿಂದ ಹೆದ್ದಾರಿಯಲ್ಲೆ ಹಲ್ಲೆ
- ಪೊಲೀಸರ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು : ಎಸ್ಪಿ ಎಂ ನಾರಾಯಣ
- ಸಾತೊಡ್ಡಿ ಜಲಪಾತಕ್ಕೆ ಪ್ರವೇಶ ನಿಷೇಧ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ತೋಟದಲ್ಲಿ ಕಾಲಕಳೆಯಬೇಕಾದ ಮಾನ್ಯ ಕಾಗೇರಿ ಅವರನ್ನು ಸಂಸದರನ್ನಾಗಿಸಿದ್ದೇ ಕೆನರಾ ಕ್ಷೇತ್ರದ ಮತದಾರರು. ಇಂತಹ ಮತದಾರರನ್ನೇ ಕಾಗೇರಿ ಕಡೆಗಣಿಸಿರುವುದು ತೀರಾ ಅನ್ಯಾಯ ಎಂಬ ಆಕ್ರೋಶದ ಕೂಗು ಇದೀಗ ಕೇಳಿಬರಲಾರಂಭಿಸಿದೆ.
ಈ ಹಿಂದೆ ಬರ್ಗಿಯಲ್ಲಿ ಗ್ಯಾಸ್ ಟ್ಯಾಂಕರ್ ದುರಂತವಾದಾಗ ಅನೇಕರು ಮೃತಪಟ್ಟಿದ್ದರು. ಈ ಬರ್ಗಿ ದುರಂತದಲ್ಲಿ ಬಿಜೆಪಿಯ ಮಹಿಳಾ ಮುಖಂಡೆಯೊಬ್ಬರು ಸುಟ್ಟು ಕರಕಲಾಗಿ ಸಾವಿಗೀಡಾಗಿದ್ದರು. ಆದರೆ ಅಂದಿನ ಸಂಸದ ಅನಂತಕುಮಾರ ಹೆಗಡೆ ಕನಿಷ್ಟ ನೆಪಮಾತ್ರಕ್ಕೂ ಬರ್ಗಿಯ ದುರಂತ ಸ್ಥಳಕ್ಕೆ ಬರಲಿಲ್ಲ. ಇದು ಇಂದಿಗೂ ಅನಂತಕುಮಾರ ಅವರಿಗೆ ಕಪ್ಪು ಚುಕ್ಕೆಯಾಗೇ ಉಳಿದಿದೆ. ಇದೀಗ ಹಾಲಿ ಸಂಸದ ಕಾಗೇರಿ ಕೂಡ ಜಿಲ್ಲೆಯ ಜನ ಕಷ್ಟದಲ್ಲಿದ್ದಾಗ ಮಾಜಿ ಸಂಸದ ಅನಂತಕುಮಾರ ಅವರ ಹಾದಿಯಲ್ಲೇ ಸಾಗುತ್ತಾರಾ? ಎನ್ನುವ ಪ್ರಶ್ನೆ ಎದ್ದಿದೆ.
ಇವರಿಗೆ ಮಾತ್ರ ಅಧಿವೇಶನವೇ?
ದೆಹಲಿಯಲ್ಲಿ ನಡೆಯುತ್ತಿರುವ ಅಧಿವೇಶನ ಸಂಸದ ಕಾಗೇರಿಗೆ ಮಾತ್ರವೇ? ಎಂದು ಇದೀಗ ಕ್ಷೇತ್ರದ ಮತದಾರರು ಕೇಳಲಾರಂಭಿಸಿದ್ದಾರೆ.ಅಧಿವೇಶನದಲ್ಲಿ ಒಮ್ಮೆ ಪಾಲ್ಗೊಂಡರೆ ಗೈರಾಗಬಾರದೇ? ಹಾಗೇನೂ ಇಲ್ಲ, ಅಧಿವೇಶನದಲ್ಲಿ ಇಡೀ ದೇಶದ ಸಂಸದರು ಪಾಲ್ಗೊಳ್ಳುತ್ತಾರೆ. ವಾರ ಕಳೆಯುತ್ತಿದ್ದರು ಇನ್ನಷ್ಟು ಶವ ಸಿಗಬೇಕಿದೆ. ಜನ ಸಂಕಷ್ಟದಲ್ಲಿದ್ದಾರೆ ಹೀಗಿರುವಾಗ ಕಾಗೇರಿ ಮನಸ್ಸು ಮಾಡಿದರೆ ಮತ್ತೆ (ಒಮ್ಮೆಮಾತ್ರ ಬಂದಿದ್ದಾರೆ.) ಶಿರೂರು ದುರ್ಘಟನಾ ಸ್ಥಳಕ್ಕೆ ದೆಹಲಿಯಲ್ಲಿ ವಿಮಾನದಲ್ಲೇ ಹುಬ್ಬಳಿಗೆ ಬಂದು ಅಲ್ಲಿದ ಬೇರೆ ವಾಹನ ವ್ಯವಸ್ಥೆ ಮಾಡಿಕೊಂಡು ದುರಂತ ಸ್ಥಳಕ್ಕೆ ಬರಬಹುದಿತ್ತು. ಅಷ್ಟಕ್ಕೂ ಅಧಿವೇಶನದಲ್ಲಿ ಉಳಿದು ಕೇಂದ್ರ ಸರಕಾರದ ಯೋಜನೆಯಾಗಿರುವ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ನಡೆದ ದುರ್ಘಟನೆಗೆ ಯಾಕೆ ಪರಿಹಾರ ಕೊಡಿಸುವ ಬಗ್ಗೆ ಧ್ವನಿ ಎತ್ತುತ್ತಿಲ್ಲ..ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ತನ್ನ ಕ್ಷೇತ್ರದ ಒಬ್ಬನೇ ಒಬ್ಬ ಮತದಾರ ಅಪಾಯದಲ್ಲಿದ್ದಾರೆ ಎಂದು ಗೊತ್ತಾಗುತ್ತಿದ್ದ ಹಾಗೆ ಕೇರಳ ಸಂಸದ ಶಿರೂರು ದುರಂತ ಸ್ಥಳಕ್ಕೆ ಬಂದು ತನ್ನ ಜವಾಬ್ದಾರಿ ಏನೆಂದು ಇಡೀ ದೇಶಕ್ಕೆ ತೋರಿಸಿದ್ದಾರೆ. ಆದರೆ ತನ್ನದೇ ಕ್ಷೇತ್ರದ ಹತ್ತಾರು ಮತದಾರರು ಮಣ್ಣಿನಡಿ ಸಿಲುಕಿದ್ದಾರೆ. ಒಂದಿಷ್ಟು ಕುಟುಂಬ ಕಳೆದ ಹತ್ತಾರು ದಿನಂದಿಂದ ಕಣ್ಣೀರಲ್ಲೇ ಕೈತೊಳೆಯುತ್ತಿದ್ದರೂ ಕ್ಷೇತ್ರದ ಸಂಸದ ಎನ್ನಿಸಿಕೊಂಡ ವಿಶ್ವೇಶ್ವರಿ ಹೆಗಡೆ ಕಾಗೇರಿ ಮಾತ್ರ ದೂರದ ದೆಹಲಿಯಲ್ಲೇ ಕೂತು ತನ್ನ ತಂಡದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ “ತಾನು ಲಭ್ಯವಿಲ್ಲ” ಎನ್ನುವ ಪೋಸ್ಟರ್ ಹರಿಬಿಡುತ್ತಿರುವುದಕ್ಕೆ ಕ್ಷೇತ್ರದ ಜನ ಬೇಸರ ವ್ಯಕ್ತಪಡಿಸಿದ್ದಾರೆ.
ಅಧಿವೇಶನದಲ್ಲಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ ಶಿರೂರಿಗೆ ಭೇಟಿ
ಇದೀಗ ಕೇಂದ್ರ ಸಚಿವರಾಗಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಬಂದು ನೊಂದವರಿಗೆ ಸಾಂತ್ವನ ಹೇಳಿ ಹೋಗಿದ್ದಾರೆ. ಕುಮಾರಸ್ವಾಮಿ ಉತ್ತರ ಕನ್ನಡ ಕ್ಷೇತ್ರದ ಸಂಸದರೂ ಅಲ್ಲ, ಈ ದುರ್ಘಟನೆ ಬಗೆಗಿನ ಕಾರ್ಯಾಚರಣೆ ಅವರಿಗೆ ಸಂಬಂಧಿಸಿದ್ದ ಇಲಾಖೆಯದ್ದೂ ಅಲ್ಲ. ಆದರೂ ಕುಮಾರಸ್ವಾಮಿ ಮಾನವೀಯ ಕಳಕಳಿಯಿಂದ ದುರಂತ ಸ್ಥಳಕ್ಕೆ ಬಂದು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಮೂಲಕ ತನ್ನ ಜವಾಬ್ದಾರಿ ತೋರಿಸಿದ್ದಾರೆ. ಅಷ್ಟೆ ಅಲ್ಲದೇ ಘಟನೆಯಲ್ಲಿ ನಾಪತ್ತೆಯಾಗಿರುವ ಜಗನ್ನಾಥ ಮಕ್ಕಳಿಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.ಆದರೆ ಕ್ಷೇತ್ರದ ಮತದಾರರಿಂದಲೇ ಸಂಸದ ಸ್ಥಾನ ಅಲಂಕರಿಸಿ ಅಧಿವೇಶನಕ್ಕೆ ಹೋದ ಕಾಗೇರಿ ಕ್ಷೇತ್ರದ ಜನ ಕಷ್ಟದಲ್ಲಿರುವಾಗ ತನ್ನ ಜವಾಬ್ದಾರಿ ಮರೆತಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.