suddibindu.in
ಅಂಕೋಲಾ : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡಕುಸಿತ ಉಂಟಾಗಿ ಒಂದೇ ಕುಟುಂಬದ ಐವರು ಸೇರಿ ಏಳು ಮಂದಿ ದಾರುಣವಾಗಿ ಮೃತಪಟ್ಟಿದ್ದು ಈಗಾಗಲೇ ನಾಲ್ವರ ಶವ ಪತ್ತೆಯಾಗಿದೆ.
ಲಕ್ಷ್ಮಣ ನಾಯ್ಕ, ಆತನ ಪತ್ನಿ ಶಾಂತಿ ನಾಯ್ಕ, ಪುಟ್ಟ ಮಗು ರೋಶನ್ ಹಾಗೂ ಟ್ಯಾಂಕರ್ ಚಾಲಕನೋರ್ವ ಸೇರಿ ನಾಲ್ವರ ಶವ ಅರಬ್ಬೀ ಸಮುದ್ರದಲ್ ಪತ್ತೆಯಾಗಿದೆ.ಮೃತ ಕುಟುಂಬಕ್ಕೆ ರಾಜ್ಯ ಸರಕಾರ ಅಧಿವೇಶನದಲ್ಲಿ ದುರಂತದಲ್ಲಿ ಮೃತಪಟ್ಟಿರುವ ಎಲ್ಲರಿಗೂ ತಲಾ ಐದು ಲಕ್ಷ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ
- ಅನಂತಕುಮಾರ ಹೆಗಡೆ ಬೆಂಬಲಿಗರಿಂದ ಹೆದ್ದಾರಿಯಲ್ಲೆ ಹಲ್ಲೆ
- ಪೊಲೀಸರ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು : ಎಸ್ಪಿ ಎಂ ನಾರಾಯಣ
- ಸಾತೊಡ್ಡಿ ಜಲಪಾತಕ್ಕೆ ಪ್ರವೇಶ ನಿಷೇಧ
ಇಂದು ಬೆಳಿಗ್ಗೆ 8-30ರ ಹೊತ್ತಿಗೆ ಶಿರೂರು ಬಳಿ ಭಾರೀ ಪ್ರಮಾಣದಲ್ಲಿ ಗುಡ್ಡಕುಸಿತ ಉಂಟಾಗಿ ಹೆದ್ದಾರಿ ಪಕ್ಕದಲ್ಲಿ ಹೊಟೇಲ್ ಮಾಡಿಕೊಂಡು ವಾಸವಾಗಿದ್ದ ಲಕ್ಷ್ಮ ನಾಯ್ಕ ಎಂಬುವವರ ಕುಟುಂಬ ದುರಂತ ಸಾವು ಕಂಡಿದೆ. ಇನ್ನೂ ಅವರ ಹೊಟೇಲ್ಗೆ ಚಹಾ, ತಿಂಡಿಗಾಗಿ ಬಂದಿದ್ದ ಗ್ಯಾಸ್ ಟ್ಯಾಂಕರ್ ಚಾಲಕನ ಮೂವರು ಚಾಲಕರು ಮಣ್ಣೀನ ಅಡಿಯಲ್ಲಿ ಸಿಲುಕಿದ್ದಾರೆ. ಈಗಾಗಲೇ ಒಂದು ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವುದು ಪತ್ತೆಯಾಗಿದೆ. ಅಲ್ಲದೇ ಇನ್ನೂ ಎರಡು ಟ್ಯಾಂಕರ್ ಹೆದ್ದಾರಿಯಲ್ಲಿ ನಿಂತುಕೊಂಡಿದ್ದು ಇದುವರೆಗೂ ಅವರ ಪತ್ತೆಯಾಗಿಲ್ಲ.
ಅಷ್ಟೆ ಅಲ್ಲದೇ ಆ ವೇಳೆ ಹೆದ್ದಾರಿಯಲ್ಲಿ ಸಂಚರಿಸುವ ಬೈಕ್ ಹಾಗೂ ಕಾರನಲ್ಲಿ ಪ್ರಯಾಣಿಸುವವರು ಅದೆ ಹೊಟೇಲ್ಗೆ ಟೀ ಕುಡಿಯಲು ಹೋಗಿದ್ದರು ಎನ್ನಲಾಗುತ್ತಿದೆ. ಇನ್ನೂ ಶಿರೂರು ನದಿಯ ಇನ್ನೊಂದು ಪಕ್ಕದ ಉಳವರಿ ಗ್ರಾಮದಲ್ಲಿ ಎರಡಕ್ಕೂ ಅಧಿಕ ಮನೆಗಳಿಗೆ ಗುಡ್ಡದ ಮಣ್ಣ ಅಪ್ಪಳಿಸಿ ಮನೆ ನೆಲಸಮವಾಗಿದ್ದು, ಓರ್ವ ಮಹಿಳೆ ನದಿಯಲ್ಲಿ ಕೊಚ್ಚಿಕೊಂಡು ಹೋಗಿದೆ ಎನ್ನಲಾಗಿದೆ. ಇನ್ನೂ ಉಳುವರಿ ಗ್ರಾಮದಲ್ಲಿನ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡು ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ…
ಮುಂದುವರೆದ ತೆರವು ಕಾರ್ಯ
ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡಕುಸಿತ ಉಂಟಾಗಿ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣಿನ ರಾಶಿ ಬಿದ್ದಿದ್ದು ಬೆಳಿಗ್ಗೆ 9ಗಂಟೆಯಿಂದ ನಿರಂತರವಾಗಿ ಮಣ್ಣು ತೆರವು ಕಾರ್ಯಚರಣೆ ನಡೆಸಲಾಗುತ್ತಿದೆ. ಹೆದ್ದಾರಿಯಲ್ಲಿ ಗುಡ್ಡಕುಸಿತದಿಂದ ಕುಮಟಾ ಕಾರವಾರ ಸಂಪರ್ಕ ಕಡಿತವಾಗಿದೆ.ರಾತ್ರಿ ಕೂಡ ಮಣ್ಣು ತೆರವು ಕಾರ್ಯಚರಣೆ ಮುಂದುವರೆಯಲಿದೆ.
ಘಟನೆಗೆ ಐಆರ್ಬಿ ಕಾರಣ
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನ ಕಳೆದ ಹತ್ತು ವರ್ಷದಿಂದ ಐಆರ್ಬಿ ಕಂಪನಿ ನಡೆಸುತ್ತಿದ್ದು, ಹೆದ್ದಾರಿ ಪಕ್ಕದಲ್ಲಿ ಅವೈಜ್ಞಾನಿಕವಾಗಿ ಗುಡ್ಡಕೊರೆದಿರುವುದೇ ಈ ಘಟನೆಗೆ ಕಾರಣ ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಪ್ರದೀಪ ನಾಯಕ, ಜಗದೀಶ ನಾಯಕ ಮೊಗಟಾ ಸೇರಿದಂತೆ ಅನೇಕರು ಆಐಆರ್ಬಿಕಂಪನಿ ವಿರುದ್ಧ ಕಿಡಿಕಾರಿದ್ದಾರೆ.
ಅಧಿವೇಶನ ಬಿಟ್ಟು ಬಂದ ಸಚಿವ,ಶಾಸಕ
ವಿಧಾನಸೌಧದಲ್ಲಿ ಈಗಷ್ಟೆ ಮಳೆಗಾಲ ಅಧಿವೇಶ ಆರಂಭಾಗಿದ್ದು, ಎಲ್ಲಾ ಶಾಸಕರು, ಸಚಿವರು ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಶಿರೂರಿನಲ್ಲಿ ಗುಡ್ಡಕುಸಿತ ಉಂಟಾಗಿದೆ ಎನ್ನುವ ಮಾಹಿತಿ ಸಿಗುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ,ಕಾರವಾರ ಶಾಸಕ ಸತೀಶ ಸೈಲ್ ಅಧಿವೇಶನದಲ್ಲಿ ಘಟನೆಯ ಬಗ್ಗೆ ಮಾಹಿತಿ ನೀಡಿ ದಿಢೀರ್ ಘಟನಾ ಸ್ಥಳಕ್ಕೆ ಆಗಮಿಸಿ ಘಟನೆಗೆ ಕಾರಣವಾದರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ..
ಸ್ಥಳಕ್ಕೆ ಬಂದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ
ಉತ್ತರಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಉಂಟಾಗಿರುವ ಕಾರಣ ನಿನ್ನೆ ರಾತ್ರಿಯೇ ಕಾರವಾರಕ್ಕೆ ಆಗಮಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನಿನ್ನೆ ಪ್ರವಾಹ ಉಂಟಾದ ಸ್ಥಳಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇಂದು ಬೆಳಿಗ್ಗೆ ಗುಡ್ಡಕುಸಿತ ಉಂಟಾದ ಸುದ್ದಿ ತಿಳಿಯುತ್ತಿದ್ದಂತೆ ಕಾರವಾರ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರೊಂದಿಗೆ ಅಧಿಕಾರಿಗಳ ತಂಡದ ಜೊತೆ ಶಿರೂರು ಗುಡ್ಡಕುಸಿತವಾದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.