ಸುದ್ದಿಬಿಂದು ಬ್ಯೂರೋ ವರದಿ

ಅಂಕೋಲಾ: ದಿನಕರ ವೇದಿಕೆಯ ವತಿಯಿಂದ ಪ್ರತಿವರ್ಷ ನಿವೃತ್ತರಾದ ಆದರ್ಶ ಶಿಕ್ಷಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸುವ ಪರಂಪರೆಯನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಈ ವರ್ಷದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಆದರ್ಶ ಶಿಕ್ಷಕ ದಂಪತಿಗಳಾದ ಸುಖದ ನಾಯಕ ಹಾಗೂ ಭವಾನಿ ನಾಯಕ, ಅಂಕೋಲಾ ಅವರನ್ನು ಗೌರವಿಸಿ ಸನ್ಮಾನಿಸಲು ದಿನಕರ ವೇದಿಕೆಯ ಆಡಳಿತ ಮಂಡಳಿಯು ಸರ್ವಾನುಮತದಿಂದ ನಿರ್ಣಯಿಸಿದೆ.

ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 5ಶನಿವಾರ ಮಧ್ಯಾಹ್ನ 3 ಗಂಟೆಗೆ, ಅಂಕೋಲಾದ ಪುರ್ಲಕ್ಕಿ ಬೇಣದಲ್ಲಿರುವ ಸುಖದ ನಾಯಕ ಅವರ ಸ್ವಗೃಹದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ದಿನಕರ ವೇದಿಕೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದು, ಶಿಕ್ಷಕ ದಂಪತಿಗಳ ಸೇವೆಯನ್ನು ಗೌರವಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ. ಆಡಳಿತ ಮಂಡಳಿಯ ಎಲ್ಲ ಸದಸ್ಯರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ದಿನಕರ ವೇದಿಕೆಯ ಪರವಾಗಿ ವಿನಂತಿಸಲಾಗಿದೆ.