ಸುದ್ದಿಬಿಂದು ಬ್ಯೂರೋ ವರದಿ

ಸಾಗರ: ಕಡಜದ ಹುಳುಗಳ ದಾಳಿಗೆ ಒಳಗಾಗಿ 8ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ಅತ್ತಿಸರ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ಅತ್ತಿಸರ ಗ್ರಾಮದ ನಿಶ್ಚಿತ್ (8) ಎಂದು ಗುರುತಿಸಲಾಗಿದೆ. ಈತ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು. ಘಟನೆಯಲ್ಲಿ ಬಾಲಕನ ತಂದೆ ವೆಂಕಟೇಶ್ ಅವರಿಗೂ ಗಂಭೀರ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ಹಿಂಭಾಗದಲ್ಲಿದ್ದ ಬಾಳೆಗಿಡದ ಬಳಿ ನಿಶ್ಚಿತ್ ಇದ್ದಾಗ ಗೂಡು ಮಾಡಿಕೊಂಡಿದ್ದ ಕಡಜದ ಹುಳುಗಳು ಏಕಾಏಕಿ ದಾಳಿ ನಡೆಸಿವೆ ಎನ್ನಲಾಗಿದೆ. ಬಾಲಕನೊಂದಿಗೆ ಇದ್ದ ತಂದೆ ವೆಂಕಟೇಶ್ ಅವರ ಮೇಲೂ ಹುಳುಗಳು ದಾಳಿ ಮಾಡಿದೆ. ಇಬ್ಬರಿಗೂ ಹಲವಾರು ಬಾರಿ ಕಚ್ಚಿವೆ. ಕಡಜದ ಹುಳುಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ತಂದೆ-ಮಗನನ್ನು ಕುಟುಂಬಸ್ಥರು ತಕ್ಷಣ ಹೆಗ್ಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಶ್ಚಿತ್ ಮೃತಪಟ್ಟಿದ್ದಾನೆ.

ತಂದೆ ವೆಂಕಟೇಶ್ ಅವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಕುಟುಂಬಸ್ಥರದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ/ ರೂಪಾಲಿ ನಾಯ್ಕ ನೇತೃತ್ವದಲ್ಲಿ ಕಾರವಾರದಲ್ಲಿ ಹರ್‌ ಘರ್‌ ತಿರಂಗʼ ಮಹಾ ಅಭಿಯಾನ