ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಭಾರತೀಯ ಜನತಾ ಪಾರ್ಟಿಯ ನಗರ ಹಾಗೂ ಗ್ರಾಮೀಣ ಮಂಡಲ ಕಾರವಾರ ವತಿಯಿಂದ ಹರ್ ಘರ್ ತಿರಂಗಾ ಮಹಾ ಅಭಿಯಾನದ ಅಂಗವಾಗಿ ಕಾರವಾರ ನಗರದಲ್ಲಿ ರಾಷ್ಟ್ರಧ್ವಜ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ರಾಜ್ಯ ಬಿಜೆಪಿ ಉಪಾಧ್ಯಕ್ಷರು ಹಾಗೂ ಹರ್ ಘರ್ ತಿರಂಗಾ ಅಭಿಯಾನದ ರಾಜ್ಯ ಸಂಚಾಲಕರಾದ ರೂಪಾಲಿ ಎಸ್. ನಾಯ್ಕ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ರಾಷ್ಟ್ರಧ್ವಜ ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅಂಗಡಿ ಮಾಲೀಕರು, ಬೀದಿ ವ್ಯಾಪಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಧ್ವಜಗಳನ್ನು ವಿತರಿಸಲಾಯಿತು.
ದೇಶಭಕ್ತಿ ಮತ್ತು ರಾಷ್ಟ್ರಾಭಿಮಾನವನ್ನು ಜನರಲ್ಲಿ ಹೆಚ್ಚಿಸುವ ಉದ್ದೇಶದಿಂದ ಹರ್ ಘರ್ ತಿರಂಗಾ ಅಭಿಯಾನವನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಭಾಗವಹಿಸಿ ದೇಶಪ್ರೇಮ ಮೆರೆದರು. ನಗರದ ವಿವಿಧ ಭಾಗಗಳಲ್ಲಿ ರಾಷ್ಟ್ರಧ್ವಜ ವಿತರಿಸುವ ಮೂಲಕ ಪ್ರತಿಯೊಬ್ಬರ ಮನೆ ಹಾಗೂ ಮನದಲ್ಲಿ ರಾಷ್ಟ್ರಭಕ್ತಿಯ ಭಾವನೆ ಮೂಡಿಸುವ ಸಂದೇಶ ನೀಡಲಾಯಿತು.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಒಂದು ಲಕ್ಷಕ್ಕೂ ಅಧಿಕ ರಾಷ್ಟ್ರಧ್ವಜಗಳನ್ನು ವಿತರಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ ಬಹುತೇಕ ಧ್ವಜಗಳ ವಿತರಣೆ ಪೂರ್ಣಗೊಂಡಿದೆ.



